ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
1ನೇ ವಾಚನ - ಸುಜ್ಞಾ 2: 1, 12-22
ಕೀರ್ತನೆ - 34: 16-20, 22
ಶುಭಸಂದೇಶ - ಯೊವಾನ್ನ 7: 1-2, 10, 25-30
ಐಚ್ಚಿಕ ಸ್ಮರಣೆ - ಸಂತ ವಿನ್ಸೆಂಟ್ ಫೆರೆರ್ (ಯಾ.)
1ನೇ ವಾಚನ - ಸುಜ್ಞಾ 2: 1, 12-22
1ದೇವರಿಲ್ಲದವರು ಅಪವಾದಮಾಡಿ- ಕೊಂಡರು ಈ ಪರಿ: “ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ ಮರಣಕ್ಕೆ ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ;
12ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು. 13ಹೇಳಿಕೊಳ್ಳುತ್ತಾನೆ ತಾನೇ ದೇವರನು ಬಲ್ಲವನೆಂದು ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು. 14ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು ಅವನನ್ನು ನೋಡಿದ್ದೇ ನಮ್ಮ ಉತ್ಸಾಹ ಕುಂದಿಹೋಗುವುದು. 15ಏಕೆಂದರೆ ಅವನು ಇತರರಂತೆ ಅಲ್ಲ ಅವನ ಮಾರ್ಗವೋ ನಮಗೆ ವಿಚಿತ್ರ.
16ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ. ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ. 17ಅವನ ಮಾತುಗಳೇ ಸತ್ಯವೇನೋ ನೋಡೋಣ ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ. 18ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು. 19ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ; 20ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ ‘ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ ವಾದ?”
21ಈ ಪರಿ ಆಲೋಚಿಸಿ ವಂಚಿತರಾದರು ದುರುಳರು ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು. 22ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.
ಕೀರ್ತನೆ - 34: 16-20, 22
ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ
17ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
20ಕಾಪಾಡುವನು ಅವನೆಲಬುಗಳೆಲ್ಲವನ್ನೂ / ಮುರಿಯಬಿಡನು ಪ್ರಭು ಅವುಗಳ ಲ್ಲೊಂದನ್ನೂ //
21ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ / ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ //
ಶುಭಸಂದೇಶ - ಯೊವಾನ್ನ 7: 1-2, 10, 25-30
1ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ
ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. 2ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು.
10ಯೇಸುಸ್ವಾಮಿಯ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ.
25ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? 26ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ? 27ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವನೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 28ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸುಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ. 29ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,” 30ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.
ಚಿಂತನೆ
ಯೆಹೂದ್ಯರಿಗೆ ಮೆಸ್ಸೀಯ ಎಲ್ಲಿ ಜನಿಸುತ್ತಾನೆಂಬ ಬಗ್ಗೆ ಮಾಹಿತಿಯಿದ್ದರೂ, ಆತ ಹೇಗೆ ಕಾಣಿಸಿಕೊಳ್ಳುತ್ತಾನೆ ಎಂಬ ಬಗ್ಗೆ ಕಲ್ಪನೆಯಿರಲಿಲ್ಲ. ಮೆಸ್ಸೀಯ ಈಗಾಗಲೇ ಜನಿಸಿದ್ದಾನೆ, ಎಲ್ಲೋ ಇದ್ದಾನೆ, ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತಾನೆ ಎಂದು ನಂಬಿದ್ದರು. ಇನ್ನೂ ಆಶ್ಚರ್ಯವೆಂದರೆ ಅವರ ಪ್ರಕಾರ, ಸ್ವತಃ ಮೆಸ್ಸಿಯನಿಗೇ ತನ್ನ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಎಲೀಯನಿಂದ ಅಭ್ಯಂಗಿತನಾದ ನಂತರವಷ್ಟೇ ಆತ ಕಾರ್ಯಪ್ರವೃತ್ತನಾಗುತ್ತಾನೆ ಎಂದು ಭಾವಿಸಿದ್ದರು. ಈ ಭಾವನೆಯಿಂದಲೇ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇದ್ದ ಯೇಸುವನ್ನು ಅವರು ಮೆಸ್ಸೀಯ ಎಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ತಮ್ಮ ಕಲ್ಪನೆಯ ಮೆಸ್ಸೀಯನಿಗೂ ಯೇಸುವಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೆ ಕ್ರಿಸ್ತ ಇದ್ದಕ್ಕಿಂತೆ ಎಂದೋ ಒಂದು ಕ್ಷಣ ಪ್ರತ್ಯಕ್ಷನಾಗುವ ಕಲ್ಪನೆಯ ಮೆಸ್ಸೀಯನಾಗಿರದೆ, ಎಂದೆಂದೂ ಜನಜೀವನದಲ್ಲಿ ಬೆರೆತು ಹೋಗಿದ್ದ ಆಪ್ತಮಿತ್ರನಾದರು. ಕ್ರೈಸ್ತರಾದ ನಮಗೆ ಕ್ರಿಸ್ತ ಎಂದೆಂದೂ ನಮ್ಮೊಂದಿಗೆ ಉಳಿಯುವ ಆಪ್ತಸ್ನೇಹಿತನಂತಿರಬೇಕು.
- ಫಾ. ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
ಸಂತ ವಿನ್ಸೆಂಟ್ ಫೆರರ್
1357 ಜನವರಿ 23ರಂದು ಸ್ಪೇನಿನ ವೇಲೆನ್ಸಿಯಾ ಎಂಬಲ್ಲಿ ಜನಿಸಿದ ಸಂತ ವಿನ್ಸೆಂಟ್ ಫೆರರ್
ಅವರನ್ನು ಕಟ್ಟುವವರ ಪಾಲಕ ಎನ್ನಲಾಗುತ್ತದೆ. ಏಕೆಂದರೆ ಧರ್ಮಸಭೆಯನ್ನು ಪುನರ್ ನಿರ್ಮಿಸಿ
ಸುಭದ್ರಗೊಳಿಸಿದ ಹೆಗ್ಗಳಿಗೆ ಅವರದು. ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ದೊಮಿನಿಕರ ಮಠ ಸೇರುವ
ಇವರು ಗುರುಪಟ್ಟದ ನಂತರ ತತ್ವಶಾಸ್ತ್ರ ಬೋಧಿಸಲು ಕರೆ ಹೊಂದುತ್ತಾರೆ. ಜೊತೆಯಲ್ಲೇ ಇವರು ಉನ್ನತ
ವ್ಯಾಸಂಗವನ್ನೂ ಮಾಡಿ ಡಾಕ್ಟರೆಟ್ ಪಡೆಯುತ್ತಾರೆ. ಈ ನಡುವೆ ವ್ಯಾಟಿಕನ್ನಿಗೆ ಪಯಣಿಸುತ್ತಿದ್ದ
ಕಾರ್ಡಿನಲ್ ಪೆದ್ರೊ ದೆ ಲೂನಾ ಅವರ ಸಹಪ್ರಯಾಣಿಕರಾಗಲು ಇವರನ್ನು ಕಳಿಸಲಾಗುತ್ತದೆ. ಅವರು
ಹಿಂದಿರುಗಿದ ಸ್ವಲ್ಪ ಸಮಯದಲ್ಲೇ ಅವರಿಗೊಂದು ಅಚ್ಚರಿ ಕಾದಿರುತ್ತದೆ. ಕಾರ್ಡಿನಲ್ಲ ಲೂನಾ ಅವರು
ಪೋಪರಾಗಿ ಆಯ್ಕೆಯಾಗಿರುತ್ತಾರೆ ಮಾತ್ರವಲ್ಲ ರೋಮಿಗೆ ಬಂದು ಪವಿತ್ರ ಅರಮನೆಯ ಉಸ್ತುವಾರಿ
ವಹಿಸಿಕೊಳ್ಳಲು ವಿನ್ಸೆಂಟ್ ಫೆರರ್ ಅವರಿಗೆ ಪೋಪರಿಂದ ಕರೆ ಬಂದಿರುತ್ತದೆ. ಆಗ ಧರ್ಮಸಭೆಯ
ವ್ಯಾಟಿಕನ್ ವರಿಷ್ಠರಲ್ಲಿ ಧರ್ಮಸೂಕ್ಷ್ಮಗಳ ಕುರಿತು ಅಪಾರ ಭಿನ್ನಾಭಿಪ್ರಾಯ ಇರುತ್ತದೆ. ಅವರೆಲ್ಲ
ಪಂಗಡಗಳಾಗಿ ಒಡೆದಿರುತ್ತಾರೆ. ಈ ಭಿನ್ನಮತೀಯರನ್ನು ಒಗ್ಗೂಡಿಸಲು ವಿನ್ಸೆಂಟ್ ಫೆರರ್ ಹೆಣಗಿ
ಸೋಲುತ್ತಾರೆ. ಕೊನೆಗೆ ತಮ್ಮ ಕಾರ್ಡಿನಲ್ ಪದವಿಯ ಬಿರುದು ಬಾವಲಿಗಳನ್ನೆಲ್ಲ ಕಿತ್ತೊಗೆದು ಮಿಷನರಿ
ಕೆಲಸಕ್ಕೆ ತೊಡಗುತ್ತಾರೆ. ಸ್ಪೇನಿನ ಎಲ್ಲ ಪ್ರಾಂತ್ಯಗಳಲ್ಲೂ ಸಂಚರಿಸಿ ಜನರ ಮನಪರಿವರ್ತನೆ
ಮಾಡುತ್ತಾರೆ. ಇಟಲಿ, ಫ್ರಾನ್ಸ್ ಮುಂತಾದ ದೇಶಗಳಲ್ಲೂ ವ್ಯಾಪಕ ಪ್ರವಾಸ ಮಾಡಿ ಪರಿಣಾಮಕಾರಿ
ಪ್ರಬೋಧನೆಗಳನ್ನು ನೀಡುತ್ತಾರೆ. ಮುಸ್ಲಿಂ ರಾಷ್ಟ್ರಗಳಿಗೂ ಆಹ್ವಾನಿತರಾಗಿ ತೆರಳಿ ಸುವಾರ್ತೆಯ
ಕುರಿತು ಬಲವಾದ ಉಪನ್ಯಾಸಗಳನ್ನು ನೀಡುತ್ತಾರೆ. ಇತ್ತು ಪೋಪರ ಆಕಾಂಕ್ಷಿಗಳಾಗಿದ್ದ ಎರಡು ಬಣಗಳೂ
ಇವರನ್ನು ಆಹ್ವಾನಿಸಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ. ಕೊನೆಗೂ ವಿನ್ಸೆಂಟ್ ಫೆರರ್
ನವರು ಭಿನ್ನಮತವನ್ನು ಹತ್ತಿಕ್ಕುವಲ್ಲಿ ಜಯಶಾಲಿಯಾಗಿ ಕ್ಲೆಮೆಂಟರನ್ನು ಪೋಪ್ ಪದವಿಗೆ
ಅವಿರೋಧವಾಗಿ ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ.
- ಮರಿಜೋಸೆಫ್
No comments:
Post a Comment