ಜನವರಿ ೧, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

1 ಜನವರಿ 2019

ಪ್ರಥಮ  ವಾಚನ :  ಸಂಖ್ಯಾ  6:  22-27 
ಕೀರ್ತನೆ :  67:1-2,  3-4,  5-7 
ದ್ವಿತೀಯ ವಾಚನ : ಗಲಾತಿ  4:  4-7 
ಶುಭಸಂದೇಶ : ಲೂಕ  2:  16-21

ವಾಚನಗಳು
ಮೊದಲನೇ ವಾಚನ


ಸಂಖ್ಯಾಕಾಂಡದಿಂದ ವಾಚನ
22ಸರ್ವೇಶ್ವರ ಮೋಶೆಗೆ ಹೀಗೆಂದರು; 23“ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: ‘ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು -24ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ, ಕಾಪಾಡಲಿ! 25ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ, ನಿಮಗೆ ದಯೆತೋರಲಿ! 26 ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು, ಶಾಂತಿಯನ್ನು ಅನುಗ್ರಹಿಸಲಿ!’ 27ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”

ಕೀರ್ತನೆ 

ಶ್ಲೋಕ: ಹರಸು ದೇವಾ, ನಮ್ಮನಾಶೀರ್ವದಿಸು
1 : ಹರಸು ದೇವಾ, ನಮ್ಮನಾಶೀರ್ವದಿಸು|
     ನಿನ್ನ ಮುಖ ಕಾಂತಿಯಿಂದೆಮ್ಮನು ಬೆಳಗಿಸು ||

2 : ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ|
     ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ ||

3 : ನಿನ್ನ ಕೀರ್ತಿಸಲಿ ದೇವಾ, ಜನರು|
     ಸಂಕೀರ್ತಿಸಲಿ ಅವರೆಲ್ಲರೂ ||

5 : ನಿನ್ನ ಕೀರ್ತಿಸಲಿ ದೇವಾ, ಜನರು|
     ಸಂಕೀರ್ತಿಸಲಿ ಅವರೆಲ್ಲರೂ ||

6 : ಇತ್ತನೆಮ್ಮ ದೇವನು ಆಶೀರ್ವಾದವನು|
     ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು||

7 : ನಮ್ಮೆಲ್ಲರನು ದೇವನು ಹರಸಲಿ|
     ಎಲ್ಲೆಡೆ ಆತನ ಭಯಭಕ್ತಿಯಿರಲಿ ||



ಎರಡನೇ ವಾಚನ 

ಸಂತ ಪೌಲನು ಗಲಾತಿಯರಿಗೆ ಬರೆದ ಪತ್ರದಿಂದ ವಾಚನ
4-5ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು. 6ನೀವು ದೇವರ ಮಕ್ಕಳಾಗಿರುವುದರಿಂದಲೇ, “ಅಪ್ಪಾ, ತಂದೆಯೇ,” ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. 7ಆದ್ದರಿಂದ, ದೇವರ ಅನುಗ್ರಹದಿಂದಲೇ ನೀನು ಇನ್ನು ಮನೆಯಾಳಲ್ಲ, ಮಗನಾಗಿದ್ದೀಯ. ಮಗನೆಂದ ಮೇಲೆ ನೀನು ವಾರಸುದಾರನೂ ಹೌದು.


ಶುಭಸಂದೇಶ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
16ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೆಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು. 18ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.  19ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು. 20ಇತ್ತ, ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು.

21ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ 'ಯೇಸು' ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.

ಚಿಂತನೆ
ದೇವಮಾತೆಯ ದಿನ

ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ಅನೇಕ ಧೀರ ಮಹಿಳೆಯರ, ದೇಶಪ್ರೇಮಕ್ಕಾಗಿ ಹೋರಾಡಿದ ವೀರ ವನಿತೆಯರ ಪರಿಚಯವಾಗುತ್ತದೆ; ಭಕ್ತಿ, ಶ್ರದ್ಧೆಯಿಂದ ಸಮಾಜ ಕಲ್ಯಾಣಕ್ಕೋಸ್ಕರ ದುಡಿದ ಮಹಿಳೆಯರ ಅರಿವು ಆಗುತ್ತದೆ. ಅದೇ ರೀತಿಯಲ್ಲಿ ಪವಿತ್ರ ಗ್ರಂಥದ ಪುಟಗಳನ್ನು ತಿರುವಿದಾಗ ಹಳೆಯ ಒಡಂಬಡಿಕೆಯಲ್ಲಿ ಶೌರ್ಯ ಪ್ರದರ್ಶಿಸಿದ ರಾಣಿ ಎಸ್ತೇರಳು, ಅತ್ತೆಯ ಮೇಲೆ ಗೌರವವಿಟ್ಟು ಆಶ್ರಯನೀಡಿ, ಪ್ರೀತಿಯನ್ನು ಧಾರೆಯೆರೆದ ವಿಧವೆ ರೂತಳು, ಅನೈತಿಕತೆಯ ಹಾದಿ ತುಳಿಯದೆ ಧೈರ್ಯವಾಗಿ ನಿಂತ ಸುಸಾನ್ನಳು - ಹೀಗೆ ಹಲವರ ಪರಿಚಯವಾಗುತ್ತದೆ.  ಆದರೆ ಇವರೆಲ್ಲರಿಗಿಂತಲೂ ಶ್ರೇಷ್ಠಳು, ವಿಭಿನ್ನಳು, ಧೈರ್ಯವಂತಳು, ವಿನಮ್ರಳು ನಮ್ಮ `ದೇವರ ತಾಯಿ'-'ಮರಿಯ'.

``ಸರ್ವಕ್ಕೂ ಜೀವ ಕೊಟ್ಟಾತನಿಗೆ, ತನ್ನ ಗರ್ಭದಲ್ಲಿ ಜೀವ ನೀಡಿ 'ಮರಿಯ' ದೇವರ ಮಾತೆಯಾದಳು'', ಎನ್ನುತ್ತಾರೆ ಸಂತ ಆನ್ಸೆಲ್ಮ್. ಕ್ರಿ.ಶ. ೪೩೧ ರಲ್ಲಿ ಧರ್ಮಸಭೆ ಮರಿಯಳನ್ನು `ಥಿಯೋಟೊಕೊಸ್' (Theotokos) ಎಂದರೆ 'ದೇವರ ತಾಯಿ' ಎಂದು ಘೋಷಿಸಿತು. ಧರ್ಮಸಭೆಯು ಹೊಸವರ್ಷದ ಮೊದಲ ದಿನವನ್ನು ದೇವರ ತಾಯಿ ಮರಿಯಳಿಗೆ ಸಮರ್ಪಿಸಿ ಗೌರವಿಸುತ್ತದೆ. ನಾವೀಗ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ನಮ್ಮೆಲ್ಲ ಕಾರ್ಯಗಳು, ಯೋಜನೆಗಳು ಸಫಲವಾಗಲಿ. ಕಳೆದ ವರ್ಷದ ಕಹಿ ನೆನಪುಗಳನ್ನು ಮರೆಯುತ್ತಾ, 'ಹೊಸ ವರ್ಷ ನಮಗೆಲ್ಲರಿಗೂ ತರಲಿ ಹರುಷ', ಎಂದು ದೇವಮಾತೆಯ ಮೂಲಕ ಪ್ರಾರ್ಥಿಸೋಣ.

© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ



No comments:

Post a Comment