ನಾನಂದು ಬಿದ್ದಾಗ
.....
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
"ನನ್ನ ಬಾಲ್ಯದಲ್ಲಿ ನಾನೆಷ್ಟು ಸುಖವಾಗಿ ಬೆಳೆದೆ.
ಬಡವರಾಗಿದ್ದರೂ ನನ್ನ ಅಜ್ಜಿ ಹನ್ನ ಹಾಗು ಅಮ್ಮ ಮರಿಯ ಅದೆಷ್ಟು ಮುದ್ದಾಗಿ, ನನ್ನ ಕಾಲು ಮಣ್ಣಿಗೆ
ತಾಗದಂತೆ ಬೆಳೆಸಿದರು..!! ಅಬ್ಬಾ ಅದೊಂದು ಸುಮಧುರ ನೆನಪುಗಳ ಧಾರೆ"
ಇದು ನಾನಂದು ಬಿದ್ದಾಗ ಮರುಕಳಿಸಿದ ಬಾಲ್ಯದ ಮಧುರ ನೆನಪುಗಳು.
ಮನಸ್ಸಿಗೆ ಈ ಕಾಠಿಣ್ಯವನ್ನು ಎದುರಿಸಲು ಸ್ಥೈರ್ಯವಿದೆ ಆದರೆ ದೇಹವೇಕೋ ಒಪ್ಪುತ್ತಿಲ್ಲ. ಕ್ಷಣ
ಕ್ಷಣಕ್ಕೂ ಶಿಲುಬೆ ಭಾರವಾಗುತ್ತಿದೆ. ಸೈನಿಕರ ಚಾಟಿಯೇಟುಗಳಿಗೆ ನನ್ನ ದೇಹ ಹಬ್ಬದ ಬಾಡೂಟವಾಗಿದೆ.
ತಾಳಲಾರದೆ ಕುಸಿದು ಬಿದ್ದೆ.
ಅದೆಷ್ಟು ಜನರಿಗೆ ನಾ ಹಾಸಿಗೆಯಿಂದೇಳುವಂತೆ ಮಾಡಿದೆ. ಹತ್ತಾರು
ವರ್ಷಗಳಿಂದ ಮಲಗಿದ್ದವರನ್ನು ಕೈಹಿಡಿದು ಮೇಲೆತ್ತಿದ ನನ್ನನ್ನು ಈ ಕ್ಷಣದಲ್ಲಿ ಮೇಲೆತ್ತಲು ಯಾರೂ
ಇಲ್ಲವೇ? ಸತ್ತು ನಾರುತ್ತಿದ್ದ ಲಾಜರನಿಗೆ ಜೀವ ಕೊಟ್ಟೆ. ಅವನಾದರೂ ಎಲ್ಲಿ ಹೋದ?
ಇಗೋ ನನ್ನ ಎತ್ತಿ ಆಡಿಸಿದ ನನ್ನಮ್ಮ ಅಲ್ಲಿದ್ದಾಳೆ. ಒಂದೇ ಸಮನೆ
ಕಣ್ಣೀರಿಡುತ್ತಿದ್ದಾಳೆ. ಬಹುಶಃ ಈ ನೀಚ ಸೈನಿಕರಿಲ್ಲದಿದ್ದರೆ ಓಡೋಡಿ ಬಂದು ನನ್ನನ್ನು
ಎಬ್ಬಿಸುತ್ತಿದ್ದಳೇನೊ...
ಸದಾ ನನ್ನೊಡನೆ ಉಂಡ ನನ್ನ ಮಿತ್ರರೆಲ್ಲಿ? "ನಿಮ್ಮೊಡನೆ
ಸೆರೆಮನೆಗಾದರೂ ಸರಿಯೇ..ಸಾಯಬೇಕಾದರೂ ಸರಿಯೇ ನಾ ಬರುವೆ ಪ್ರಭು" ಎಂದ ಸಿಮೋನನೆಲ್ಲಿ?
ಯಾರೂ ನನ್ನನ್ನು ಮೇಲೆತ್ತಲಿಲ್ಲ. ಇದು ನನ್ನ ಶಿಲುಬೆ. ನಾನು
ಬಂದದ್ದಾದರೊ ಇದಕ್ಕೋಸ್ಕರವೇ... ಅದೆಷ್ಟೇ ಭಾರವಾದರೂ ಇದನ್ನು ಹೊರತ್ತೇನೆ . ಹೊತ್ತು
ಮುನ್ನಡೆಯುವ ಮುನ್ನ ಮಗನೇ, ಮಗಳೇ ನಿಮಗೊಂದು ಕಿವಿಮಾತೇಳುತ್ತೇನೆ ಕೇಳಿ. "ಈ ಪ್ರಪಂಚ
ನಶ್ವರ. ಇಲ್ಲಿ ಬಿದ್ದು ಮೇಲೇಳುವುದೇ ಒಂದು ಸಾಧನೆಯಲ್ಲ. ನೀವು ನೋಡಬೇಕಾದ ಇನ್ನೊಂದು ಲೋಕವಿದೆ.
ಆ ಲೋಕದಲ್ಲಿ ಎಡವಿ ಬೀಳದಂತೆ ಎಚ್ಚರ ವಹಿಸಿರಿ".
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು
ಕಂಪಿಸುತ್ತಿದ್ದವು. ತಡಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು,
ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ.
ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡು ಪಾಪಿ. ತಿಳಿದೂ
ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ
ಬೇಡುತ್ತಿರುವೆ ನನ್ನೊಡೆಯ... ಬಾ ಕೈ ಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ.
ಆಮೆನ್
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment