"ಸಮಾಧಿಯಲ್ಲಿ ಯೇಸು"
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಸತ್ಯಕ್ಕೆ ಎಂದಾದರೂ ಸಾವೇ? ಪ್ರಭು ಯೇಸುವನ್ನು ಸಮಾಧಿಯಲ್ಲಿ ಇರಿಸಿದಾಗ
ಸತ್ತದ್ದು ಸತ್ಯವಲ್ಲ. ಮೃತ ಹೊಂದಿದ್ದು ನಮ್ಮೆಲ್ಲರ ಪಾಪ, ಶಿಲುಬೆಯ ರೂಪದಲ್ಲಿ ತನ್ನ ಮೇಲೆ ಹೊತ್ತುಕೊಂಡ
ನಮ್ಮ ಪಾಪ. ಸತ್ಯವು ಕೆಟ್ಟತನವನ್ನೆಲ್ಲ ಆ ಸಮಾಧಿಯಲ್ಲೆ ಬಂಧಿಸಿ ವಿಜಯೋತ್ಸವದಿಂದ, ಸತ್ಯಕ್ಕೆಂದೂ
ಸಾವಿಲ್ಲ ಎಂಬುದನ್ನು ಸಾಬೀತು ಪಡಿಸಿತು.
ಒಬ್ಬ ವ್ಯಕ್ತಿ ಎಷ್ಟೇ ಶ್ರೇಷ್ಠನಾದರೂ ಒಂದು ದಿನ ಮರಣ ಹೊಂದಲೇಬೇಕೆಂಬುದು
ನಾವು ಅರಿತಿದ್ದೇವೆ. ಮರಣ ಹೊಂದಿದ ಪ್ರತಿಯೊಬ್ಬನೂ ಕ್ರಿಸ್ತನ ಶಿಲುಬೆ ಯಾತನೆ ಫಲವಾಗಿ ದೊರೆತ ನಿತ್ಯ
ಜೀವದ ಭಾಗ್ಯದಿಂದಾಗಿ, ಸತ್ತರೂ ಕ್ರಿಸ್ತನಲ್ಲಿ ಜೀವಿಸುತ್ತಾನೆ ಎಂಬುದ ಅರಿತಿರುವ ನಾವು, ಅದಕ್ಕೆ
ಸಿದ್ಧರಾಗಿ ಜೀವನ ನಡೆಸುತ್ತಿಲ್ಲವೇಕೆ? ಪಾಪದ ಹಾದಿಯಲ್ಲೇ ಮಗ್ನರಾಗಿದ್ದೇವಲ್ಲ ಏಕೆ? ಆತ ಮಾಡಿರುವ
ತ್ಯಾಗ ಕಣ್ಣೆದುರೆ ಇದ್ದರೆ ನಮ್ಮ ಮನಸ್ಸುಗಳು ಏಕೆ ಆತನೆಡೆಗೆ ಹೋಗುತ್ತಿಲ್ಲ? ಪ್ರತಿ ವರುಷ ಶಿಲುಬೆ
ಹಾದಿಯಲ್ಲಿ ಮೊಣಕಾಲೂರಿ ಪ್ರಾರ್ಥಿಸುತ್ತೇವೆ. ಆದರೆ ದೇವಾಲಯದಿಂದ ಹೊರಗೆ ಬಂದ ಮೇಲೆ ಅದೇ ಪಾಮರ ಬದುಕು
ಜೀವಿಸುತ್ತಿದ್ದೇವೆ ಏಕೆ? ಆತ ಹೊತ್ತಿರುವ ಶಿಲುಬೆಯ ಭಾರ ಕಡಿಮೆ ಮಾಡುವ ಮನಸ್ಸಿಲ್ಲವೇ? ಆತನ ತಲೆ
ಮೇಲಿರುವ ಪಾಪದ ಮುಳ್ಳಿನ ಕಿರೀಟದಿಂದ, ಆತನನ್ನು ವಿಮುಕ್ತಿಗೊಳಿಸಲು ಆಸೆಯಿಲ್ಲವೆ? ನಮ್ಮ ಅಂತರಂಗದಲ್ಲಿರುವ
ಕೆಟ್ಟ ಯೋಚನೆಗಳಿಂದ ಆತನನ್ನು ಬೆತ್ತಲಾಗಿಸಿರುವ ನಾವು ಇನ್ನು ಎಷ್ಟು ಕಾಲ ನಮ್ಮಈ ದುರ್ನಡತೆಯಿಂದ
ಆತನನ್ನು ಬೆತ್ತಲಾಗಿಸುತ್ತಿರುತ್ತೇವೆ? ಪ್ರಭು ಯೇಸು ಹೇಗೆ ಆ ಸಮಾಧಿಯಲ್ಲಿ ನಮ್ಮೆಲ್ಲರ ಪಾಪವನ್ನು
ಸುಟ್ಟರೋ, ಆ ಸಮಯವನ್ನು ನೆನೆಯುವಾಗ ನಾವು ಸಹ ನಮ್ಮ ಕೆಟ್ಟತನವನ್ನೆಲ್ಲ ಸುಡೋಣ.
ಪ್ರಭು ಯೇಸು ಶಿಲುಬೆಯನ್ನು ಹೊರಬೇಕಾಗಿ ಬಂದರೂ ಅವರು ಯಾರನ್ನೂ ಪ್ರಶ್ನಿಸಲಿಲ್ಲ. ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಬೇಕಾದಾಗಲೂ ಒಂದು ಕ್ಷಣಕ್ಕೂ
ಅಂಜಿಕೆಯ ಭಾವ ಮೂಡಲಿಲ್ಲ. ಜಗದ ಒಡೆಯನಾದರೂ, ಸಮಾಧಿಯಲ್ಲಿ ಇರಿಸುವರು ಎಂಬುದನ್ನು ತಿಳಿದಿದ್ದರೂ ಏನನ್ನು
ಪ್ರಶ್ನಿಸಲಿಲ್ಲ. ಏಕೆಂದರೆ ಪ್ರಭು ಯೇಸುವಿಗೆ ತನ್ನ ಪಿತನಲ್ಲಿ ಸಂಪೂರ್ಣ ವಿಶ್ವಾಸವಿತ್ತು. ತನಗೆ
ಇಂದು ಏನೇ ಯಾತನೆ ನೀಡುತ್ತಿದ್ದರೂ ಅದು ತನ್ನ ತಂದೆಯ ಮಹಿಮೆಗೆ ಎಂಬುದು ಆತನಿಗೆ ತಿಳಿದಿತ್ತು. ಅಂತೆಯೇ
ಯೇಸು ಪುನರುತ್ಥಾನರಾದರು. ನಾವು ಸಹ ಅಂತಹ ನಂಬಿಕೆಯನ್ನು ಪಿತನಲ್ಲಿರಿಸ ಬೇಕಾಗಿದೆ. ಇಂದು ನಮಗೆ ಎಂತಹುದೇ
ಕಷ್ಟವಿದ್ದರೂ ಅದು ನಮ್ಮ ಒಳಿತಿಗೆ ಎಂಬುದನ್ನು ನಾವು ಅರಿತುಕೊಳ್ಳ ಬೇಕಿದೆ.
ಪ್ರಭು ಯೇಸು ಇಂದು ಕಳೆದುಹೋದ ಕುರಿಮರಿಗಾಗಿ ಕಾಯುತ್ತಿದ್ದಾರೆ.
ಆ ಕಳೆದುಹೋದ ಕುರಿಮರಿ ಬೇರಾರೂ ಅಲ್ಲ ಅದು ನೀನೆ!
ಪ್ರಾರ್ಥನೆ:- ನಮ್ಮ ಮನದೊಳಗೆ ನಿನ್ನ ಬೆಳಕ ಬಿಂಬಿಸು ದೇವ, ಅಂತರಂಗದಲ್ಲಿ ಅಡಗಿರುವ ಆ ನನ್ನ ಸ್ವಾರ್ಥ, ದ್ವೇಷ, ಮದ, ಮತ್ಸರವೆಲ್ಲ ಸುಟ್ಟು ಹೋಗಲಿ. ನಿನ್ನಂತಹ ಪ್ರಶಾಂತ ಮನಸ್ಸು ನಮ್ಮದಾಗಲಿ.
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment