ಆರನೇ ಸ್ಥಳ

ವೆರೋನಿಕ ಕ್ರಿಸ್ತನೆಡೆಗೆ ...

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ವೆರೋನಿಕ ಕ್ರಿಸ್ತನೆಡೆಗೆ ಸಾಗುತ್ತಾಳೆ. ಅಲ್ಲಿ ಕ್ರಿಸ್ತ ಸಂಯಮದಿಂದ ಸಾಗುತ್ತಿದ್ದಾನೆ. ಸಿಪಾಯಿಗಳ ಚಾಟಿಯೇಟುಗಳು, ನಿಂದನೆ, ನೋವು ಇದ್ಯಾವುದೂ ಅವರನ್ನು ಬಾಧಿಸುತ್ತಿಲ್ಲ. ಅವರು ಬಯಸುವುದು ನಮ್ಮ ಮನಪರಿವರ್ತನೆ. ಅಲ್ಲಿ ಕ್ರಿಸ್ತ ದೈಹಿಕವಾಗಿ ಜರ್ಜರಿತವಾಗುತ್ತಿದ್ದಾಗ ಬೆವರು ಮತ್ತು ರಕ್ತ ಅವರ ವದನವನ್ನು ತೋಯಿಸುತ್ತಿತ್ತು. ಮುಂದಿನ ದಾರಿ ಕಾಣದೆ ಕ್ರಿಸ್ತನ ಕಣ್ಣು ಮಂಜಾಗಿದೆ. ಅದೆಷ್ಟೋ ಜನರು ಬದಿಯಲ್ಲಿದ್ದರೂ ಯಾರೂ ಮುಂದೆ ಬರುತ್ತಿಲ್ಲ.
ಆಗ ಅಲ್ಲಿಗೆ ಬಂದವಳೇ ವೆರೋನಿಕ. ಅವಳೂ ಒಬ್ಬ ತಾಯಿಯಲ್ಲವೇ? ಅವಳಿಗೆ ಕ್ರಿಸ್ತ ಮಗನಂತೆ ಕಂಡಿರಬಹುದು. ಯಾವ ತಾಯಿ ತಾನೆ ತನ್ನ ಮಗನ ಘೋರ ಯಾತನೆಯನ್ನು ಸಹಿಸುತ್ತಾಳೆ? ಓಡೋಡಿ ಬಂದಳು ಆ ಮಾತೆ. ಕ್ರಿಸ್ತನ ರಕ್ತಸಿಕ್ತವಾದ ಮುಖವನ್ನು ಅತೀವ ಪ್ರೀತಿಯಿಂದ ಮತ್ತು ಅದೇ ದುಃಖದಿಂದ ಒರೆಸುತ್ತಾಳೆ. ಆ ಕರವಸ್ತ್ರದಲ್ಲಿ ಕ್ರಿಸ್ತನ ಕೋಮಲ ಮುಖ ಅಚ್ಚಾಗುತ್ತದೆ. ಯಾವ ಬದುಕಿನ ಮಧುರಸ್ಮೃತಿಯ ಸೆಳೆತವೋ ಅವಳನ್ನು ಪ್ರೇರೇಪಿಸಿದ್ದು ,ಆಕೆಯ ಮನಸ್ಸು ಕ್ರಿಸ್ತನ ಯಾತನೆಯನ್ನು ಸಹಿಸಲಿಲ್ಲ. ಈ ಮಧ್ಯೆ ಅವಳು ಆ ಕ್ರೂರ ಸೈನಿಕರನ್ನೂ ಲೆಕ್ಕಿಸಲಿಲ್ಲ. ಯಾವ ಗಂಡಸಿಗೂ ಇಲ್ಲದ ಎದೆಗಾರಿಕೆ ವೆರೋನಿಕಾಳಲ್ಲಿತ್ತು!
ಆದರೆ ಇಂದು ನಮ್ಮ ಬದುಕಿನಲ್ಲಿ ಅದೆಷ್ಟೋ ಬಾರಿ ನಮ್ಮ ಗೆಳೆಯರು, ನೆರೆಹೊರೆಯವರು ಬದುಕಿನ ಹೊರೆ ಹೊತ್ತು, ಬೆಂಡಾಗಿರುವುದನ್ನು ಕಾಣುತ್ತೇವೆ. ನಮ್ಮಲ್ಲಿ ಎಷ್ಟು ಜನ ವೆರೋನಿಕಳಾಗುತ್ತೇವೆ? ನಮ್ಮಲ್ಲಿ ಸಮಾಜದ ಅಸ್ಪ್ರಶ್ಯತೆಯನ್ನು ಎದುರಿಸುವ ದಿಟ್ಟತನ ಯಾರಿಗಿದೆ? ನಮ್ಮ ಸ್ನೇಹಿತ ನರಳುವಾಗ ಅವನು ಕ್ರಿಸ್ತನಾಗಿರಬಹುದಲ್ಲವೇ? ಅಂತಹ ಸಂರ್ಭಗಳಲ್ಲಿ ನಾವು ವೆರೋನಿಕಳಾಗಿ ಅವರ ನೋವು ನರಳುವಿಕೆಗಳಿಗೆ ಸ್ಪಂದಿಸಿ ಉಪಶಮನ ನೀಡುವುದಾದರೇ ಅದು ಶಿಲುಬೆಯಡಿ ಘಾಸಿಗೊಂಡ ಆ ಕ್ರಿಸ್ತನಿಗೆ ಶುಶ್ರೂಷೆ ಮಾಡಿದಂತೆ.
ವೆರೋನಿಕ, ಮಮತೆ ವಾತ್ಸಲ್ಯಭರಿತ ತಾಯಿಯ ಹೃದಯಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ. ಕೊರಡೆಯ ಹೊಡೆತಗಳಿಗೆ ಕ್ರಿಸ್ತನ ರಕ್ತ ಹೊನಲಂತೆ ಚಿಮ್ಮುವಾಗ ಅವಳ ಹೃದಯ ನುಚ್ಚು ನೂರಾಗಿರಬೇಕು. ಅದೆಷ್ಟು ನೋವು ಹೃದಯದಲ್ಲಿ ಕನಲಿತೊ, ಒಮ್ಮೆಲೆ ಕ್ರಿಸ್ತನತ್ತ ಧಾವಿಸಿಬಿಟ್ಟಳು! ಇಂದು ರಸ್ತೆಗಳಲ್ಲಿ ಅಪಘಾತಗಳಾದಾಗ ಅನೇಕರು ನಿಂತು ನೋಡುತ್ತೇವೆಯೇ ವಿನಃ ಯಾರೂ ಅವರ ನೆರವಿಗಾಗಿ ಧಾವಿಸುವುದಿಲ್ಲ. ಮುಂದಿನ ಸಮಸ್ಯೆಗಳೆಂಥದೊ ಎಂದು ಚಿಂತಿಸಿ ಹಿಂದೆ ಸರಿಯುತ್ತೇವೆ. ಅದೇ ಸ್ಥಳದಲ್ಲಿ ನಮ್ಮ ಕುಟುಂಬಸ್ಥರು, ಬಂಧು ಮಿತ್ರರಿದ್ದರೇ ಹೀಗೆ ಯೋಚಿಸುತ್ತೇವೆಯೇ? ಆದರೆ ವೆರೋನಿಕಾ ಹಾಗೆ ಮಾಡಲಿಲ್ಲ. ಆಕೆ ಕ್ರಿಸ್ತನ ಸಂಬಂಧಿಕಳಲ್ಲ, ತಾಯಿಯಂತೂ ಅಲ್ಲವೇ ಅಲ್ಲ! ಆದರೂ ಆಕೆ ಕ್ರಿಸ್ತನಿಗಾಗಿ ಮರುಗುತ್ತಾಳೆ. ಮಾನವ ಪ್ರೇಮದ ಉಜ್ವಲ ಸಂಕೇತ ಅವಳು!

ಪ್ರಾರ್ಥನೆ
ದಯಾಮಯ ಕ್ರಿಸ್ತ, ನನ್ನಕೈಯಲಾಗದ ಕೆಲಸವಲ್ಲದಿದ್ದರೂ, ಇತರರಿಗಾಗಿ ಮರುಗುವ ಹೃದಯನೀಡು. ಅವರಿಗಾಗಿ ಸದಾ ಪ್ರಾರ್ಥಿಸುವ ಮನಸ್ಸು ನೀಡು. ಆಮೆನ್.


ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

No comments:

Post a Comment