ತಾಯಂದಿರ ಮಮತೆ ...
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಹೆಂಗರುಳ ಪ್ರೀತಿ ವಾತ್ಸಲ್ಯ ಮತ್ತೊಮ್ಮೆ ಸಾಬೀತಾಯಿತು. ಜೆರುಸಲೇಮಿನ
ಆ ತಾಯಂದಿರ ಮಡುಗಟ್ಟಿದ ಶೋಕದ ಅನುಕಂಪದಲ್ಲಿ ಹೆಣ್ತನದ ಪರಾಮರ್ಶೆಯಾಯಿತು. ಅವರು ಕ್ರಿಸ್ತನ
ಅನುಯಾಯಿಗಳಲ್ಲ, ಸಂಬಂಧಿಕರಾಗಿರಬಹುದು ಆದರೆ ಅದಕ್ಕೆ ಪುರಾವೆಗಳಿಲ್ಲ, ಆದರೂ ಕ್ರಿಸ್ತನ ಕಲ್ವಾರಿ
ಯಾತನೆಯ ಪಯಣದ ಒಂದು ಭಾಗವಾಗುತ್ತಾರೆ ಆ ಮಹಿಳೆಯರು.
ಶಿಲುಬೆ ಹೊತ್ತು ನಡೆದು ಬರುವ ಕ್ರಿಸ್ತನನ್ನು ನೋಡಿ ಅತ್ತು
ಪ್ರಲಾಪಿಸುತ್ತಾರೆ ಆ ಸ್ತ್ರೀಯರು. ತಮ್ಮ ಸ್ವಂತ ಮಗನೇನೋ ಎಂಬ ಆತ್ಮೀಯ ಮಮತೆಯಿಂದ ಆತನಿಗಾಗಿ
ಕಣ್ಣೀರಿಡುತ್ತಾರೆ. ಇವರ ಈ ವಿದ್ರಾವಕ ರೋದನೆಯನ್ನು ಕುರಿತು
ಕ್ರಿಸ್ತ ಯೇಸು "ನನಗೋಸ್ಕರ ಅಳಬೇಡಿ, ನಿಮಗಾಗಿ ನಿಮ್ಮ ಮಕ್ಕಳಿಗಾಗಿ ಪ್ರಲಾಪಿಸಿರಿ"
ಎಂದು ಹೇಳುತ್ತಾನೆ.
ಈ ನೋವಿನ ಸಮಯದಲ್ಲೂ ಕ್ರಿಸ್ತನಿಗೆ ನಮ್ಮದೇ ಚಿಂತೆ - ನಮ್ಮ ಹೃದಯಗಳ
ಚಿಂತೆ. "ನಿಮ್ಮ ಮಕ್ಕಳಿಗಾಗಿ ಅಳಿರಿ" ಎಂಬ ಆತನ ಮಾತುಗಳಲ್ಲಿ ಹಿರಿಯರಾಗಿ, ತಂದೆ -
ತಾಯಿಗಳಾಗಿ, ಮಾರ್ಗದರ್ಶಕರಾಗಿ ನಾವು ಹೇಗೆ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂಬ
ಪಿಸುಮಾತಿದೆ.
ಅತಿ ಬೇಗನೆ ಬದಲಾಗುತ್ತಿರುವ ಈ ಬಣ್ಣದ ಪ್ರಪಂಚದಲ್ಲಿ ಹೇಗೆ ನಾವು
ಮತ್ತು ನಮ್ಮ ಮಕ್ಕಳು ಕಳೆದು ಹೋಗಬಹುದಾದ ಸಂಭವ, ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸಬೇಕು.
ಆಧ್ಯಾತ್ಮಿಕತೆ ಎಂಬುದು ಬರೀ ಪುಸ್ತಕದ ಉಲ್ಲೇಖಗಳಿಗೆ ಸೀಮಿತವಾಗದಂತೆ ನಿಗಾ ವಹಿಸುವ ಅವಶ್ಯಕತೆ
ಹಾಗು ಸವಾಲು ನಮ್ಮ ಮುಂದಿದೆ.
ನಮ್ಮ ಎಷ್ಟೋ ಮಕ್ಕಳು ಇಂದು ಪ್ರಾಪಂಚಿಕ ಆಮಿಷಗಳಿಗೆ ಬಲಿಯಾಗಿದ್ದಾರೆ.
ನಮ್ಮದೇ ಆಗುಹೋಗುಗಳ ನಡುವೆ ಅವರಬೇಕು ಬೇಡಗಳನ್ನೇ ನಾವು ಮರೆತಿದ್ದೇವೆ. ಅಂತಹ ಕಳೆದು ಹೋದ
ಕುರಿಗಳನ್ನು ಮಂದೆಗೆ ತರುವ ನಿಟ್ಟಿನಲ್ಲಿ ಅತ್ತು ಪ್ರಲಾಪಿಸಿರಿ ಎಂಬ ಕ್ರಿಸ್ತನ ಮಾತುಗಳು
ಅಮೂಲ್ಯವಾಗಿವೆ.
ನಮಗೆ ನಿಜವಾಗಿಯೂ ಕಲ್ವಾರಿ ಕ್ರಿಸ್ತನಿಗೆ ಸಾಂತ್ವನ ಹೇಳುವ
ಬಯಕೆಯಿದ್ದರೆ ಅದು ನಮ್ಮ ಮಕ್ಕಳನ್ನೂ, ನಮ್ಮನ್ನೂ ಆತನ ಪ್ರೀತಿಗೆ ಸೇವೆಗೆ ಯೋಗ್ಯರನ್ನಾಗಿ
ರೂಪಿಸುವುದೇ ಆತನಿಗೆ ನಾವೀಯುವ ಅತಿ ದೊಡ್ಡ ಸಾಂತ್ವನ. ಕ್ರಿಸ್ತನ ಪ್ರತಿ ಹೆಜ್ಜೆಯೂ ನಮ್ಮದೇ
ಆಲೋಚನೆಗಳಿಂದ ಕೂಡಿದೆ. ಅತೀವ ನೋವಿನಲ್ಲೂ, ಶಿಲುಬೆಯ ಭಾರ ಲೆಕ್ಕಿಸದೆ ನಮ್ಮದೇ ಚಿಂತೆಯಲ್ಲಿ
ಹೆಜ್ಜೆ ಸವೆಸುತ್ತಿದ್ದಾರೆ ಕ್ರಿಸ್ತ. ಈಗ ನಮ್ಮದೇನಿದ್ದರೂ ಆತನೊಂದಿಗೆ ಹೆಜ್ಜೆ ಹಾಕುವುದು,
ಕಲ್ವಾರಿ ಪಯಣದ ಜೊತೆಯಾಗುವುದು.
ಪ್ರಾರ್ಥನೆದಯಾಮಯ ಕ್ರಿಸ್ತರೇ, ಬದುಕಿನ ಸತ್ವವೆಲ್ಲ ಇಂಗಿ ಹೋಗಿದೆ. ನಿಮ್ಮ ಪ್ರೇಮಧಾರೆಯ ಸ್ಪರ್ಶ ನಮಗೀಗ ಅತ್ಯವಶ್ಯಕವಾಗಿದೆ. ಬನ್ನಿ ನಮ್ಮ ಹೃದಯಗಳಲ್ಲಿ ನೆಲೆಗೊಂಡು ಬದುಕ ಹಾದಿ ರೂಪಿಸಿ, ಸದಾ ಕೈ ಹಿಡಿದು ಮುನ್ನಡೆಸಿ. ಆಮೆನ್.
ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment