ಸ್ವಾಮಿ ಯೇಸುವನ್ನು ಶಿಲುಬೆಗೆ ಜಡಿಯುತ್ತಾರೆ"
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಯಾರಿಗೆ ಬೇಕಯ್ಯ ಆ ನೋವು? ಯಾರಿಗಾಗಿ ಸಹಿಸಿಕೊಂಡೆ ದೇವ ಆ ನೋವು? ಒಂದು ಸಣ್ಣ ಗಾಯಕ್ಕೆ ನರಳುವ ಮನುಜನ ದೇಹವಿದು, ಹೇಗಯ್ಯ ಸಹಿಸಿಕೊಂಡೆ ಆ ಮೂಳೆ ಪುಡಿಯಾಗುವ ನೋವು? ದೇವಾಲಯಕ್ಕೆ ಬಂದು ಭಕ್ತಿಯಿಂದ ದೇವರಿಗೆ ಕೈ ಮುಗಿಯಲು ಪ್ರತಿಷ್ಠೆಯೆಂಬ ಭಾವದಿಂದ ಸುಮ್ಮನೆ ನಿಲ್ಲುತ್ತಾರಲ್ಲ ಅವರಿಗಾಗಿ ನೀ ದೊಡ್ಡ ಮೊಳೆಗಳಿಂದ ಹಸ್ತಗಳ ಮೂಳೆ ಪುಡಿ ಪುಡಿಯಾಗುವಂತಹ ನೋವನ್ನು ಸಹಿಸಿಕೊಂಡೆಯಾ? ಪರಮ ಪ್ರಸಾದದ ಮುಂದೆ ಭಕ್ತಿಯಿಂದ ಮೊಣಕಾಲೂರದೆ ಅಹಂಕಾರದಿಂದ ನಿಂತಿರುತ್ತಾರಲ್ಲ, ಅವರಿಗಾಗಿಯೇ ನೀ ಮೊಣಕಾಲು ಕಿತ್ತು ಹೋದರೂ ಆ ನೋವು ಸಹಿಸಿಕೊಂಡೆಯಾ? ಬಲಿಪೂಜೆಯ ಸಮಯದಲ್ಲಿ ದೇವಾಲಯದೊಳಗೆ ಬರದೆ ಶೋಕಿಯೆಂಬ ಹುಚ್ಚಾಟದಿಂದ ಹೊರಗಡೆಯೇ ನಿಲ್ಲುತ್ತ, ದೇವರ ಬಳಿಗೆ ಬಾರದ ಆ ಕಲ್ಲುಗಳಿಗಾಗಿಯೇ ನೀ ನಿನ್ನ ಪಾದಗಳ ಮೂಳೆ ಪುಡಿಯಾದರೂ ನೋವ ಸಹಿಸಿಕೊಂಡದ್ದು? ನಮ್ಮಂತಹ ಕೃತಜ್ಞತಾ ಭಾವವಿಲ್ಲದವರಿಗೇನಾ ನೀ ಆ ನೋವು ಸಹಿಸಿಕೊಂಡಿದ್ದು? ಈ ದುಷ್ಟ ಮಾನವರಿಗಾಗಿಯೇ ನಿನ್ನನ್ನು ಶಿಲುಬೆಗೆ ಜಡಿದಿದ್ದು?
ಎಲೈ ಮನುಜ! ಅಗೋ ನೋಡು ಕೈ-ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡು, ತಲೆ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿಕೊಂಡು, ಅರೆಬೆತ್ತಲೆಯಾಗಿ, ರಕ್ತದ ಕಣ್ಣೀರು ಸುರಿಯುತ್ತಿರುವ, ಮೈತುಂಬಾ ಗಾಯಗಳಿರುವ ನನ್ನ ದೇವನ ಒಮ್ಮೆ ನೋಡು. ನಿನಗಾಗಿ ಅಷ್ಟು ಪಾಡು ಪಡುತ್ತಿರುವ ನನ್ನ ಕ್ರಿಸ್ತನ ಒಮ್ಮೆ ನೋಡು. ನೀನೇ ಕುಸಿದು ಬೀಳುವೆ ಆ ಪ್ರೀತಿಗೆ. ನೀನೇ ಭಾವುಕನಾಗುವೆ ಆ ತ್ಯಾಗಕ್ಕೆ. ಮೊದಲೇ ಕೈ ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡಿರುವ ಆತನ ಮನಸ್ಸಿಗೆ, ದಯಮಾಡಿ ನಿನ್ನ ಪಾಪಗಳಿಂದ ನೋಯಿಸಬೇಡ. ಏಳು, ನಿನ್ನ ಶಿಲುಬೆಯನ್ನೆತ್ತಿಕೊಂಡು ನಡೆ, ಆತನನ್ನು ಹಿಂಬಾಲಿಸು, ಆತನ ಪ್ರೀತಿಗೆ ಕಿಂಚಿತ್ತಾದರೂ ಪುನಃ ಪ್ರೀತಿ ನೀಡುವುದಾದರೆ ನಡೆ, ಆತನ ಹೆಜ್ಜೆಯಲ್ಲೇ ನಡೆ.
ನಮಗೆ ತಿಳಿದ ಪ್ರಕಾರ ಜಗತ್ತಿನಲ್ಲಿ ಅಪರಾಧಿಗಳ ಕೈಗಳಿಗೆ ಬೇಡಿಗಳನ್ನು ಹಾಕಿ ಬಂಧಿಸುತ್ತಾರೆ. ಆದರೆ ನಮ್ಮ ಮೇಲಿನ ಪ್ರೀತಿಗೆ ಯಾವ ತಪ್ಪುಗಳನ್ನು ಮಾಡದ ದೇವಕುಮಾರನಿಗೆ ಬೇಡಿಗಳಿಂದಲ್ಲ, ಕಠೋರ ಮೊಳೆಗಳ ಬಂಧನ. ಅನಂತವಾಗಿ ನಮ್ಮನ್ನು ಪ್ರೀತಿಸುವ ಕ್ರಿಸ್ತನಿಗೇ ಈ ಪರಿಯ ನೋವು ನೀಡಿದ್ದೇವೆಂದರೆ, ಇನ್ನು ನಮ್ಮ ಕುಟುಂಬಗಳ್ಯಾವ ಲೆಕ್ಕ? ಊಹಿಸಿಕೊಳ್ಳಲು ಅಸಾಧ್ಯವಾದ ನಮ್ಮವರ ಮನ ನೋಯಿಸಿದ್ದೇವೆ, ಅತಿ ಚಿಕ್ಕ ಕಾರಣಗಳಿಗೆ ಜರೆದಿದ್ದೇವೆ. ಹೌದು! ಯೋಚಿಸಬೇಕು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಸ್ನೇಹಿತರಿಗೆ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಎಷ್ಟೊ ಬಾರಿ ನಮ್ಮ ಕೆಟ್ಟ ನಡವಳಿಕೆಯಿಂದ ಅವರ ಮನಸ್ಸುಗಳನ್ನು ನೋಯಿಸಿರುತ್ತೇವೆ. ಕೊಂಚ ಸೌಜನ್ಯ ಮತ್ತು ವಿವೇಕದಿಂದ ವರ್ತಿಸಲು ನಾವು ಕಡ್ಡಾಯವಾಗಿ ಕಲಿಯಬೇಕಿದೆ. ಯೇಸು ಪಟ್ಟ ಅಗಾಧ ನೋವಿಗಾಗಿ ನಾವು ಬೇರೆಯವರನ್ನು ನೋಯಿಸದೆ ನಡೆಯಬೇಕಾಗಿದೆ.
ಪ್ರಾರ್ಥನೆ
ಚಂಚಲ
ಮನಸ್ಸು, ಅಜ್ಞಾನಿ
ಮನಸ್ಸು, ಸೌಜನ್ಯವಿಲ್ಲದ ನಡವಳಿಕೆಯಿಂದ,
ನಮ್ಮ ಪಾಪಗಳೆಂಬ
ಮೊಳೆಗಳಿಂದ ಯಾರನ್ನೂ
ನೋಯಿಸದೆ, ನಿಮ್ಮ
ಪ್ರೀತಿಯ ಪರಿಮಳವನ್ನು
ಎಲ್ಲೆಡೆಯೂ ಹರಡುವ
ಮನೋಭಾವವನ್ನು ನೀಡಿರೆಂದು
ಪ್ರಭು ಕ್ರಿಸ್ತರೇ
ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
No comments:
Post a Comment