ಹದಿಮೂರನೇ ಸ್ಥಳ

"ಮಾತೆಯ ಮಡಿಲಲ್ಲಿ"

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.


ಇಂದು ಆಕೆ ಭೂಸ್ವರ್ಗಗಳ ರಾಣಿ, ಸಕಲ ದೂತರ ಮತ್ತು ಸಂತರ ರಾಣಿ. ಆದರೆ ಅಂದು ಆಕೆ ಪಟ್ಟ ನೋವು, ಮನಸ್ಸಿಗೆ ಆದ ಹಿಂಸೆ ಬಹುಶಃ ಪ್ರಪಂಚದಲ್ಲಿ ಯಾವ ತಾಯಿಗೂಆಗಿರದ ನೋವು. ಅಂದು ಆಕೆಯ ಮುದ್ದು ಕಂದ ಸತ್ತು ಹೆಣವಾಗಿ ತನ್ನ ಮಡಿಲಲ್ಲಿ ಮಲಗಿದಾಗ ಆದ ನೋವು ಹೇಳಲಸಾಧ್ಯ. ಪವಿತ್ರಾತ್ಮರಿಂದ ವರವಾಗಿ ಬಂದ ಮುದ್ದುಕಂದನನ್ನು ತನ್ನ ಕರಗಳಲ್ಲಿ ಎತ್ತಿ ಆಡಿಸಿ ಪಳಪಳನೆ ಹೊಳೆಯುತ್ತಿದ್ದ ಪುಟ್ಟ ಕಣ್ಣುಗಳ ನೋಡಿದ ತಾಯಿಗೆ, ರಕ್ತಸಿಕ್ತ ಕಣ್ಣುಗಳ ನೋಡಿ ಎಷ್ಟು ಕಣ್ಣೀರು ಬಂದಿರಬಹುದು ಅಲ್ಲವೆ?ತನ್ನ ಪುತ್ರನ ಮೃದುವಾದ ಕೈ ಕಾಲುಗಳನ್ನು ಮುಟ್ಟಿದ್ದ ಆಕೆಗೆ, ಬರೀ ಗಾಯಗಳಿಂದ ಸೀಳಿಹೋದ ಕೈ ಕಾಲುಗಳನ್ನು ಮುಟ್ಟಲು ಎಷ್ಟು ವೇದನೆಯಾಗಿರಬಹುದು? ತನ್ನ ಪುತ್ರನುಮೊದಲು ಉಸಿರಾಡಿದ ಕ್ಷಣದಿಂದಲೂ ಪ್ರೀತಿಯಿಂದ ನೋಡಿದ ತಾಯಿ, ತನ್ನ ಪುತ್ರ ಉಸಿರಿಲ್ಲದೆ ಮಡಿಲಲ್ಲಿ ಮಲಗಿದ ಕ್ಷಣದಲ್ಲಿ ಆಕೆಗೆ ಆಗಿರುವ ನೋವು ನಾವುಊಹಿಸಬಲ್ಲೆವೇನು? ಆದರೂ ತಾಯಿ ಎದೆಗುಂದಲಿಲ್ಲ, ತಾನೇ ಮುಂದೆ ನಿಂತು ಶಿಷ್ಯರಿಗೆ ಶಕ್ತಿಯಾಗಿ ನಿಲ್ಲುತ್ತಾಳೆ.
ನಮ್ಮೆಲ್ಲರ ಒಳಿತಿಗಾಗಿ ಕ್ರಿಸ್ತ ಎಷ್ಟು ತ್ಯಾಗ ಮಾಡಿದರೋ ಮಾತೆ ಮರಿಯಳು ಕೂಡ ಅಷ್ಟೇ ತ್ಯಾಗ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. "ಇಗೋ ನಾನು ದೇವರ ದಾಸಿ,ನಿಮ್ಮ ವಚನದಂತೆ ನನಗಾಗಲಿ" ಎಂದು ನುಡಿದ ಕ್ಷಣದಿಂದ ತಮ್ಮ ಜೀವನವನ್ನೇ ದೇವರಿಗೋಸ್ಕರ ಮುಡಿಪಾಗಿಟ್ಟರು. ಕಲ್ವಾರಿ ಬೆಟ್ಟದಲ್ಲಿ ಯೇಸುವಿಗೆ ಬೆಂಬಲವಾಗಿ ನಿಂತರು, ಶಿಷ್ಯರಿಗೆ ಶಕ್ತಿಯಾಗಿ ಜೊತೆಯಲ್ಲಿದ್ದರು. ಇದೆಲ್ಲ ಮುಗಿದು ಎರಡು ಸಾವಿರ ವರ್ಷಗಳಾದರೂ ಮಾತೆ ಯೇಸುವಿನೆಡೆಗೆ ಮನುಜರ ಮನಗಳನ್ನು ಒಯ್ಯುವುದನ್ನು ನಿಲ್ಲಿಸಿಲ್ಲ. ಅನೇಕ ಬಾರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಭಕ್ತರಿಗೆ ದರ್ಶನ ನೀಡಿ ಭಕ್ತರಿಗೆ ಸಹಾಯವಾಗುತ್ತಲೇ ಇದ್ದಾರೆ, ಮಾತೆ ಪಟ್ಟ ಕಷ್ಟಕ್ಕೆ, ಮಾಡಿದ ಎಲ್ಲಾ ತ್ಯಾಗಕ್ಕೆ, ತೋರಿದಅತಿಯಾದ ಪ್ರೀತಿಗಾಗಿ, ನಾವು ಸಹ ಕ್ರಿಸ್ತನಿಗೆ ನಮ್ಮ ಜೀವನವನ್ನು ಅರ್ಪಿಸುವುದೇ ನಾವು ಆಕೆಗೆ ನೀಡುವ ಅತ್ಯುನ್ನತ ಗೌರವ.
ಮಾತೆ ಮಡಿಲಲ್ಲಿ ಕ್ರಿಸ್ತರು ಉಸಿರಿಲ್ಲದೆ ಮಲಗಿದ ಕ್ಷಣವನ್ನು ನೆನೆಯುವ ಸಮಯದಲ್ಲಿ, ನಮ್ಮ ಸಮಾಜದಲ್ಲಿ ತಾವು ಬದುಕಿರುವಾಗಲೇ ತಮ್ಮ ಮಕ್ಕಳ ಮರಣವನ್ನು ನೋಡಿನೋವಲ್ಲಿ ಬಳಲಿ, ಇಂದು ತಮಗಾಗಿ ಯಾರೂ ಇಲ್ಲದೆ ಅನಾಥರಾಗಿ ಬದುಕಿರುವ ತಾಯಂದಿರಿಗಾಗಿ ಇಂದು ಮೌನದಿಂದ ಪ್ರಾರ್ಥಿಸೋಣ. ಅವರು ತಮಗೆ ಬೇಕಾದಆಸರೆಯನ್ನು ಕ್ರಿಸ್ತನಲ್ಲಿ ಕಂಡು, ಇರುವಷ್ಟು ದಿನ ನೆಮ್ಮದಿಯಾಗಿ ಬಾಳಲೆಂದು ಪ್ರಾರ್ಥಿಸೋಣ. ಇನ್ನೂ ದೌರ್ಭಾಗ್ಯವೆಂದರೆ ಪುತ್ರರಿದ್ದರೂ, ಯಾರೂ ಇಲ್ಲದಂತೆ ಬದುಕುವುದು.ಯಾರು ತಮ್ಮನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸಿ, ಇಂದು ಉತ್ತಮ ಸ್ಥಿತಿಗೆ ತಂದಿರುತ್ತಾರೋ ಅವರನ್ನೇ ತಾಯಿಯೆಂಬ ಕನಿಕರವಿಲ್ಲದೆ ಮನೆಗಳಿಂದ ಆಚೆ ಹಾಕುವಂತಹ ಕಲ್ಲುಮನಸ್ಸಿನ ಮಕ್ಕಳಿಗಾಗಿ ಇಂದು ಪ್ರಾರ್ಥಿಸಬೇಕಿದೆ. ಯಾವ ಮಕ್ಕಳು ತಮ್ಮ ಕೆಟ್ಟ ಚಟಗಳಿಂದ, ಕೆಟ್ಟ ನಡವಳಿಕೆಗಳಿಂದ ತಮ್ಮ ತಾಯಂದಿರನ್ನು ನೋಯಿಸುತ್ತಿರುವರೋ ಅಂಥವರಿಗಾಗಿ ನಾವು ಪ್ರಾರ್ಥಿಸಬೇಕಿದೆ.
ಪ್ರಾರ್ಥನೆ:-
ಮರುಕುವುಳ್ಳ ಮಹಾ ಕನ್ನಿಕೆಯೆ, ಕ್ರಿಸ್ತನ ಹಾದಿಯಲ್ಲಿ ನಮ್ಮನ್ನು ಬೆಳಕಾಗಿ ಮುನ್ನಡೆಸ ಬನ್ನಿರಿ. ನಮ್ಮ ಚಂಚಲ ಮನಸ್ಸಿಗೆ ಧೈರ್ಯವಾಗಿರಲುಎಂದಿಗೂ ಜೊತೆಯಲಿ ಬನ್ನಿರಿ. ನಿಮ್ಮ ಮಡಿಲಲ್ಲಿ ಮಗುವಾಗಿ ಬದುಕುವ ಭಾಗ್ಯವ ನೀಡಿರಿ.

ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್




No comments:

Post a Comment