ಹತ್ತನೇ ಸ್ಥಳ

 ಯೇಸುವಿನ ವಸ್ತ್ರವನ್ನು ಕಳಚುತ್ತಾರೆ ..                             
"ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.


ತುಂಬಿದ ಸಭೆಯಲ್ಲಿ ಆದ ಅವಮಾನ, ಹೆಗಲ ಮೇಲೆ ತಾನು ಮಾಡಿದ ಸತ್ಕಾರ್ಯಕ್ಕೆ ಪ್ರತಿಫಲವಾಗಿ ದೊರೆತ ಶಿಲುಬೆಯ ಭಾರ, ಕನಿಕರವಿಲ್ಲದ ಸೈನಿಕರ ಕ್ರೂರ ಚಾಟಿ ಏಟುಗಳು, ಜಗದ ಒಡೆಯನಾದವನಿಗೆ ಮುಳ್ಳಿನ ಕಿರೀಟ, ಫರಿಸಾಯರ ವ್ಯಂಗ್ಯ ಮಾತುಗಳು, ತನ್ನ ಮೈಮೇಲೆ ಇದ್ದ ಬಟ್ಟೆಯನ್ನು ಕಿತ್ತು, ಚೀಟು ಹಾಕಿ ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರೂ ಶಾಂತಿಯುತ ಮನದವ, ತನ್ನ ಮನದಲ್ಲಿ ನಮ್ಮೆಲ್ಲರ ಬಗ್ಗೆ ಚಿಂತಿಸುತ್ತಾ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು, ನಮ್ರತೆಯಿಂದ ನಿಂತಿರುವನಲ್ಲಾ, "ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"
ಸಕಲ ಸೃಷ್ಠಿಯ ಒಡೆಯ, ಅನಾದಿಪುರುಷ, ರಾಜರ ರಾಜ, ಕರುಣೆಯ ದೈವ, ಸರ್ವಶಕ್ತ ದೇವರ ಏಕೈಕ ಪುತ್ರ, ಇಂದು ನಮ್ಮ ಮೇಲಿನ ಪ್ರೀತಿಗೆ ಬೆತ್ತಲಾಗಿ ನಿಂತಿರುವ, ತಾನೇ ಪೋಷಿಸಿದ ಜನರು, ತನಗೆ ಜೈಕಾರ ಹಾಕಿದ ಜನರು ಇಂದು ಕೇಕೆ ಹಾಕಿ ನಗುತ್ತಿದ್ದಾರೆ. ಇವರೆಲ್ಲರ ಮಧ್ಯೆ ನಾಚಿಕೆಯಾದರೂ, ಅವಮಾನವಾದರೂ ಸುಮ್ಮನೆ ಎಲ್ಲವನ್ನು ಸಹಿಸಿಕೊಂಡು ನಿಂತಿರುವ ಕ್ರಿಸ್ತ ಇವೆಲ್ಲ ಏಕೆ ಸಹಿಸಿಕೊಂಡರು ಎಂದು ಒಮ್ಮೆ ಯೋಚಿಸಿದರೆ ಸಾಕು, ಬಹುಶಃ ಕ್ರಿಸ್ತ ಮಾಡಿದ ಪ್ರತಿಯೊಂದು ತ್ಯಾಗಕ್ಕೂ, ನಾವು ಕೊಂಚವಾದರೂ ಬೆಲೆ ತೆರಬಹುದೇನೊ! ಇನ್ನು ಕ್ರಿಸ್ತನ ಶಿಲುಬೆ ಹಾದಿಯ ಹತ್ತನೇ ಸ್ಥಳದಿಂದ ನಾವೇನು ಕಲಿಯಬಹುದು? ಶಿಲುಬೆ ಹಾದಿಯಲ್ಲಿ, ಕರುಣೆಯೇ ಇಲ್ಲದೆ ಹಿಂಸೆ ಕೊಟ್ಟ ಸೈನಿಕರು ಅವರ ಬಟ್ಟೆಯನ್ನು ಕಿತ್ತುಕೊಂಡು, ತಮ್ಮಲ್ಲೇ ಹಂಚಿಕೊಂಡರೂ ಕ್ರಿಸ್ತ ಸೌಮ್ಯ ಮನೋಭಾವದಿಂದ ತಂದೆಯೇ, ಇವರನ್ನು ಕ್ಷಮಿಸು ಎಂದರಲ್ಲ, ಆ ಕ್ಷಮೆಯ ಮನೋಭಾವ ಈ ದ್ವೇಷ ತುಂಬಿರುವ ಜಗಕ್ಕೆ ಅತಿ ಮುಖ್ಯವಾಗಿದೆ. ಕ್ರಿಸ್ತನು ಹೇಗೆ ಪವಿತ್ರ ರಕ್ತ ತುಂಬಿರುವ ದೇಹದಲ್ಲಿ, ಬಟ್ಟೆ ಇಲ್ಲದೆ ಪರಿಶುದ್ದನಾಗಿ ನಿಂತನೋ, ಹಾಗೆಯೇ ನಾವು ಈ ಸ್ವಾರ್ಥ, ಮದ, ಮತ್ಸರ, ಕಾಮುಕತನ, ದ್ವೇಷ ಎಂಬ ಬಟ್ಟೆಯನ್ನು ಕಿತ್ತು ಹಾಕಿ, ಪರಿಶುದ್ಧ ಆತ್ಮದಿಂದ ಅವನೆಡೆಗೆ ನಡೆಯಬೇಕೆಂಬುವುದೇ ಕ್ರಿಸ್ತನ ಆಶಯವಾಗಿದೆ .

ಪ್ರಾರ್ಥನೆ
ಅಂದು ಕ್ರಿಸ್ತ ನಮ್ಮ ಪಾಪಗಳನ್ನು ಕ್ಷಮಿಸಲು, ತನ್ನ ಬಟ್ಟೆಯನ್ನು ಕಿತ್ತುಕೊಂಡರೂ, ನಮಗಾಗಿ ಆದ ಅವಮಾನವೆಲ್ಲ ಸಹಿಸಿಕೊಂಡರು. ಆದರೆ ಇಂದು ಯಾವುದೇ ಅವಮಾನವಿಲ್ಲದೆ, ಕಿಂಚಿತ್ತೂ ನಾಚಿಕೆಯಿಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬೆತ್ತಲೆಯಾಗಿ ಬೆತ್ತಲೆಯಾಗಿಸಿ ಬೇರೆಯವರ ಮನಸ್ಸು ಕೆಡಿಸುತ್ತಾರಲ್ಲ, ಅವರಿಗೆ ಅರಿವು ಮೂಡಲು ಇಂದು ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ. ಯಾವುದೇ ನಾಚಿಕೆಯಿಲ್ಲದೆ ಅದನ್ನು ನೋಡುವ ನಮ್ಮ ಮನಗಳಿಗೂ ಪ್ರಾರ್ಥಿಸಬೇಕಾಗಿದೆ. ದೇವ ನೀಡಿದ ದೇಹ, ದೇವರ ದೇಗುಲ ಎಂಬುವ ಅರಿವು ನಮಗಾಗಲಿ ಎಂದು ಪ್ರಾರ್ಥಿಸೋಣ. 

ಒಬ್ಬರು: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್



No comments:

Post a Comment