ನಾಲ್ಕನೇ ಸ್ಥಳ

ನನ್ನವ್ವನ ಕಂಡಾಗ...

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಮತ್ತೋರ್ವನಿಗಾಗಿ ನಿರಪರಾಧಿ ತಾನಾದರೂ ಶಿಕ್ಷೆಯೊಪ್ಪಿಕೊಂಡು, ನಿರಂತರ ಕೊರಡೆಯ ಹೊಡೆತಗಳಿಗೆ ಹೈರಾಣಾಗಿ, ದೇಹದಿಂದ ಮಾಂಸ ಕಿತ್ತು ಬಂದರೂ, ಅದೇ ಮತ್ತೋರ್ವನ ನಿತ್ಯ ರಕ್ಷೆಗೆ ಸಾತ್ವಿಕ ಎದೆಗಾರಿಕೆಯೊಳು ಸೆಣಸುತ್ತಿರುವ ಒಂದು ಜೀವ ಇಲ್ಲಿಯಾದರೆ... ತಾನೇ ಹೆತ್ತು ಸಾಕಿ ಸಲಹಿದ ಕಂದಮ್ಮನ ಹೃದಯ ವಿದ್ರಾವಕ ಪರಿಸ್ಥಿತಿಯ ಕಂಡು, ಮಾತು ಹೊರಳದೆ, ಮಡುಗಟ್ಟಿದ ಶೋಕಸಾಗರದಲ್ಲಿ ತಾನೊಬ್ಬಳೇ ಒಂಟಿಯಾಗಿ ಮನದ ನೂರು ದ್ವಂದ್ವಗಳ ಹಿಮ್ಮೆಟ್ಟಿಸುವ ನಿರಂತರ ಪ್ರಯತ್ನದ ಇನ್ನೊಂದು ಜೀವ...!
ಈ ಎರಡು ಜೀವಗಳ ಬಿಗಿಯಾಗಿ ಬೆಸೆದಿರುವ ಕೊಂಡಿ ಕರುಳಬಳ್ಳಿ. ಅತ್ತ ರಕ್ತಸಿಕ್ತ ಕ್ರಿಸ್ತ, ಇತ್ತ ಒಡೆದ ಹೃದಯದ ಮರಿಯ. ಕಲ್ವಾರಿಯೊಳು ಎದುರುಗೊಂಡ ಅಮ್ಮ- ಕಂದನ ಹೃದಯಾಳದ ಭಾವನೆಗಳ ಮನ ಕಲಕುವ ಸಂಭಾಷಣೆ!!!
ಕ್ರಿಸ್ತಕಂದ: [ಅಮ್ಮನ ಕಂಗಳನೇ ದಿಟ್ಟಿಸಿ] ಯಾಕಮ್ಮಾ ರೋದಿಸುತ್ತಿರುವೆ? ಒಂದಲ್ಲಾ ಒಂದು ದಿನ ಈ ಘಳಿಗೆ ಬಂದೀತು ಎಂದು ನಿನಗೆ ತಿಳಿದಿರಲಿಲ್ಲವೆ? ಇದು ನನ್ನದೇ ಕೈಂಕರ್ಯ. ನನ್ನ ಹೊರತು ಇದನ್ನಾರೂ ಮಾಡಲಾರರು...!
ತಾಯಿ ಮರಿಯ: ಅರ್ಹನಲ್ಲದ ಶಿಕ್ಷೆಗೆ ನೀನೇಕೆ ಕಂದ? ನೀ ಮಾಡಿದ ತಪ್ಪಾದರೂ ಏನು? ಅಂಧರಿಗೆ ದೃಷ್ಟಿ ನೀಡಿದ್ದು, ಹೆಳವನಿಗೆ ಕಾಲ್ಗಳ ಕರುಣಿಸಿದ್ದು,  ಸತ್ತವರನ್ನು ಮತ್ತೆ ಜೀವಕ್ಕೆ ಎಬ್ಬಿಸಿದ್ದೇ ಮಹಾಪರಾಧವಾಯಿತೆ?
ಕ್ರಿಸ್ತಕಂದ: ತಪ್ಪು ಮಾಡಿ ಅನುಭವಿಸುವ ಶಿಕ್ಷೆಯನ್ನು ತ್ಯಾಗವೆನ್ನುವುದಿಲ್ಲ ತಾಯಿ. ನನ್ನದು ಸರ್ವೇಶ್ವರ ತಂದೆಯ ಆಜ್ಞೆಯ ಪಾಲಿಸುವ ಕೆಲಸ. ಜಗದಲಿ ನೆಲೆಸುವ ಪಾಪಿಗಳಿಗೋಸ್ಕರ, ಈ ಘೋರ ಶಿಕ್ಷೆಯ ತಿಳಿದೂ, ಇವರ ರಕ್ಷಣೆಗಾಗಿ ಬಂದಿದ್ದೇನೆ. ಅಮ್ಮಾ... ಧೈರ್ಯವಂತಳಾಗು. ಸೃಷ್ಟಿಕರ್ತನಿಗಿಂತ ಮಿಗಿಲಾದುದು ಯಾವುದೂ ಇಲ್ಲ.. ಅಲ್ಲವೇ?
ತಾಯಿ ಮರಿಯ: ಕಂದ ಯೇಸು... ಅಂದು ದೇವಾಲಯದಲ್ಲಿ ನೀನು ಕಾಣೆಯಾದಾಗ, ನಾನೆಷ್ಟು ದಿಗಿಲಾಗಿದ್ದೆ. ಆ ಮೂರು ದಿನಗಳು ಅತಿ ದೊಡ್ಡ ಕಳವಳವನ್ನುಂಟು ಮಾಡಿದ್ದವು. ಇನ್ನೆಂದಿಗೂ ನಾನು ಹೀಗಾಗುವುದಿಲ್ಲವೆಂದು ತಿಳಿದಿದ್ದೆ. ಆದರೆ ಇಗೋ ನಾ ಹೆತ್ತ ಕಂದ ರಕ್ತದ ಮಡುವಿನಲ್ಲಿದ್ದಾನೆ. ಅವನ ದೇಹ ಹರಿದು ಹೋಗಿ ನೆತ್ತರ ಧಾರೆ ಹರಿಯುತ್ತಿದೆ.
ಅಯ್ಯೋ   ನಾನೆಂಥ ತಾಯಿ! ರಣಭಾರದ ಶಿಲುಬೆಯ  ಹೊತ್ತು ರಕ್ತ   ಬೆವರಿನಿಂದ ತೊಯ್ದು ಹೋಗಿರುವ ನನ್ನ ಕಂದನ ಕೋಮಲ ಮುಖವನ್ನು ಒರೆಸಿ, ಕೊನೆಗೊಂದಿಷ್ಟು ಸಾಂತ್ವನದ ನುಡಿಗಳನ್ನಾಡಲು ಕೂಡ ಸಾಧ್ಯವಾಗುತ್ತಿಲ್ಲವಲ್ಲ... ನಾನೆಷ್ಟು ನತದೃಷ್ಟೆ!
ಕ್ರಿಸ್ತಕಂದ: ಅಮ್ಮಾ... ನೀನೇಕೆ ಮರುಗುವೆ? ನಾನಿದನ್ನು ತಿರಸ್ಕರಿಸಿದರೆ ನೀನು ನನಗೆ ಮಾತ್ರ ತಾಯಾಗುವೆ. ನಾನಿದನ್ನು ಪುರಸ್ಕರಿಸಿದ್ದೇ ಆದಲ್ಲಿ ಮುಂದೆ ಯುಗಯುಗಾಂತರಕ್ಕೂ ನೀನು ಇಡೀ ವಿಶ್ವಕ್ಕೆ ತಾಯಾಗುವೆ. ಧೈರ್ಯದಿಂದಿದ್ದು ಇತರರಿಗೂ ಧೈರ್ಯ ತುಂಬು.
ಪ್ರಾರ್ಥನೆ
ತಂದೆಯೇ, ವಿಶ್ವದ ಎಲ್ಲಾ ತಂದೆ ತಾಯಂದಿರು ಮತ್ತು ಮಕ್ಕಳು, ತಮ್ಮ ಜವಾಬ್ದಾರಿಗಳನ್ನರಿತು, ಪರಸ್ಪರ ಅನ್ಯೋನ್ಯತೆಯಿಂದ ಜೀವಿಸಲಿ. ಆಮೆನ್.

ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

No comments:

Post a Comment