ಹನ್ನೆರೆಡನೇ ಸ್ಥಳ

ಯೇಸು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡುತ್ತಾರೆ

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.


ನನ್ನ ದೇವರೇ ನನ್ನ ದೇವರೇ ನನ್ನನ್ನೇಕೆ ಮರೆತೆ" ಎಂದು ನುಡಿದು ಪ್ರಾಣ ಬಿಟ್ಟರು ನನ್ನ ಯೇಸು. ಬಂಡೆಗಳು ಸಿಡಿದವು, ಸೂರ್ಯನು ಕಾಂತಿ ಮುಕ್ತನಾದನು, ಭೂಮಿ ಕಂಪಿಸಿತು ಆದರೆ ನನ್ನ ಮನವು ಕಿಂಚಿತ್ತೂ ಅಳುಕಲಿಲ್ಲ ಏಕೆ?
ಇದಕ್ಕಿಂತ ಮಿಗಿಲಾದ ಪ್ರೀತಿ ಬೇರೆಯಾರಾದರು ನೀಡ್ಯಾರು? ಮನುಜನ ಪಾಪವ ತೊಳೆಯಲು, ತನ್ನದೆಲ್ಲಾ ನೀಡ್ಯಾನ, ತನ್ನ ಪ್ರಾಣವ ನೀಡ್ಯಾನ, ತನ್ನ ಪ್ರೀತಿಯ ಮಕ್ಕಳಿಗೆ ನಿತ್ಯ ಜೀವ ನೀಡಲು, ಶಿಲುಬೆಯ ಮೇಲೆ ಯಾತನೆ ಪಟ್ಟು, ಪ್ರಾಣ ನೀಡ್ಯಾನ. ಆದರೆ ನಾವೇನು ನೀಡಿದ್ದೇವೆ?
ಏನ ಬರೆಯಲಿ ನಾನು? ಏನ ಹೇಳಲಿ ನಾನು? ಏನೇ ಬರೆದರೂ ವ್ಯರ್ಥ!!! ಏನೇ ಹೇಳಿದರೂ ವ್ಯರ್ಥ!!! ನನ್ನ ಪ್ರಭು ಯಾತನೆ ಪಟ್ಟು, ಪ್ರಾಣಕೊಟ್ಟರು, ಕಿಂಚಿತ್ತು ಚಿಂತಿಸದೆ, ಕಿಂಚಿತ್ತೂ ಮಾನವೀಯತೆ ಇಲ್ಲದೆ. ಕಿಂಚಿತ್ತು ಕನಿಕರವಿಲ್ಲದೆ, ಪದೇ ಪದೇ ಪಾಪವ ಮಾಡುತ್ತಿರುವ ಮನುಜರು ನಾವು, ಇನ್ನು ನಾ ಬರೆದರೆ ಯಾರು ತಾನೆ ಕೇಳ್ಯಾರು? ನೀನೇ ಒಮ್ಮೆ ಕಣ್ಣುಗಳ ಮುಚ್ಚಿ, ಶಿಲುಬೆಯ ಮೇಲೆ ನಿಂತಿರುವ ನನ್ನ ಕ್ರಿಸ್ತನ ನೋಡು, ಯಾತನೆ ನೋಡು. ನಿಜವಾದ ಮನಸ್ಸು ನಿನಗಿದ್ದರೆ, ತಲೆ ಬಾಗುವೆ, ಬೇರೆಯವರ ಮಾತುಗಳು ಬೇಡವೇ ಬೇಡ.
ಕ್ರಿಸ್ತ ನಮಗಾಗಿ ಶಿಲುಬೆಯ ಮೇಲೆ ಪ್ರಾಣ ಬಿಟ್ಟಿದ್ದು ನಮ್ಮ ಪಾಪಗಳನ್ನು ಕ್ಷಮಿಸಲು ಅಲ್ಲವೇ? ಕ್ರಿಸ್ತನ ಅನುಯಾಯಿಗಳಾದ ನಾವು ಮಾಡಬೇಕಾದದ್ದು, ಪರರ ಪಾಪಗಳನ್ನು ಕ್ಷಮಿಸುವುದೇ ಅಲ್ಲವೆ? ಆದರೆ ನಾವು ಅದನ್ನು  ಮಾಡುತ್ತಿದ್ದೇವೆಯೇ? ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳ ಬೇಕಾಗಿದೆ. ನಮ್ಮ ಮನೆಗಳಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳನ್ನೆ ಕ್ಷಮಿಸದೆ, ಪರಸ್ಪರ ಮಾತನಾಡದೆ ನಡೆಯುವ ಮನುಜರು ನಾವು, ಇನ್ನು ಆತನ ಅನುಯಾಯಿಗಳಾಗಲು ಸಾಧ್ಯವೇ?? ಕ್ಷಮಿಸೋಣ ಒಂದು ಬಾರಿಯಲ್ಲ ಏಳುನೂರು ಏಪ್ಪತ್ತೇಳು ಬಾರಿ ಕ್ಷಮಿಸಿ ಬಾಳೋಣ.
ಪ್ರಭು ಯೇಸುವಿನ ಪ್ರಾಣಾರ್ಪಣೆ ನೆನೆಯುವ ಸಮಯದಲ್ಲಿ ನಮಗಾಗಿ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿರುವ, ನಮ್ಮ ದೇಶ ಕಂಡ ಆನೇಕ ವೀರಯೋಧರ ಆತ್ಮ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಾಗಿದೆ, ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಗಾಗಿ ಮತ್ತು ಕುಟುಂಬದ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಿದೆ.
ಪ್ರಾರ್ಥನೆ:-
ನಾನೇ ಸರ್ವವೂ ಎಂಬ ಮನೋಭಾವ ನೀಗಿ, ನಾವು ಕ್ರಿಸ್ತನಲ್ಲಿ ಒಂದೇ ಕುಟುಂಬವೆಂಬ ಭಾವ ಮೂಡಿ ಒಬ್ಬರನೊಬ್ಬರು ಕ್ಷಮಿಸಿ ಬಾಳುವ ಮನಸ್ಸು ನೀಡು ದೇವ


ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್


No comments:

Post a Comment