ಏಳನೆಯ ಸ್ಥಳ

ಕ್ರಿಸ್ತ ಮತ್ತೊಮ್ಮೆ ಮುಗ್ಗರಿಸಿ ಬಿದ್ದಾಗ ...

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.


ಇಗೋ ಕ್ರಿಸ್ತ ಮತ್ತೊಮ್ಮೆ ಬಿದ್ದಿದ್ದಾನೆ. ರಕ್ತದ ಮಡುವಲಿ, ತೊಯ್ದ ಬೆವರಲಿ. ಕಣ್ಣರೆಪ್ಪೆಗಳು ಭಾರವಾಗಿ ಮುಂದಿನ ದಾರಿ ಮಸುಕಾಗಿದೆ. ದೇಹ ನಿಶ್ಚಲವಾಗಿ ಸಂಚಲನವಿಲ್ಲದಾಗಿದೆ. ಆ ಎಲ್ಲಾ ನೆನಪುಗಳೂ ಮರುಕಳಿಸುತ್ತಿವೆ. ನಡೆಯಲಾಗದ ಹೆಳವನಿಗೆ ಕಾಲ್ಗಳ ನೀಡಿ ನಡೆಸಿದೆ. ಪಾರ್ಶ್ವವಾಯು ರೋಗಿಯ ಕೈಹಿಡಿದು ಎಬ್ಬಿಸಿದೆ. ಆದರೀಗ ನಾನು ಅಶಕ್ತನಾಗಿದ್ದೇನೆ . ಮತ್ತೆ ಮುಗ್ಗರಿಸಿ ಬಿದ್ದಿದ್ದೇನೆ. ಇದೆಂಥಹ ಕ್ರೌರ್ಯ??
"ಲೋಕೋದ್ಧಾರಕನಂತೆ ನೀನು . . ಎದ್ದೇಳು . . ಎದ್ದುನಡೆ. ನಿನ್ನನ್ನು ನೀನು ರಕ್ಷಿಸಿಕೊ .."! ಎಂಬ ಸೈನಿಕರ ಅಪಹಾಸ್ಯದ ಮಾತುಗಳು ಒಂದೆಡೆಯಾದರೆ, ಸದಾ ನನ್ನೊಡನಿದ್ದು, ನನ್ನೊಡನೆ ಸುಮಧುರ ಕ್ಷಣಗಳ ಕಳೆದ ನನ್ನ ಸ್ನೇಹಿತರೆಲ್ಲಿ? ಇದೇ ನಿರಾಸೆಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.
ಇಲ್ಲಿ ಕ್ರಿಸ್ತರು ಎರಡನೇ ಬಾರಿಗೆ ಬೀಳುತ್ತಾರೆ. ದೈಹಿಕ ನಿಶ್ಶಕ್ತಿಯಿಂದಲ್ಲ ಬದಲಿಗೆ ನಮ್ಮ ಆಧ್ಯಾತ್ಮಿಕ ನಿಶ್ಶಕ್ತಿ ಅವರನ್ನು ಮತ್ತೆ ಮತ್ತೆ ಕೆಳಗೆ ತಳ್ಳುತ್ತಿದೆ. ಕಲ್ಲು ಬಂಡೆಯಂತಹ ನೆಲದ ಮೇಲೆ ಕ್ರಿಸ್ತ ಸಾಗುವಾಗ ಮುಳ್ಳುಗಳ ಲೆಕ್ಕಿಸಲಿಲ್ಲ, ಹರಿಯುತ್ತಿದ್ದ ನೆತ್ತರ ಲೆಕ್ಕಿಸಲಿಲ್ಲ. ಅವರು ಎದೆಗುಂದದೆ ಮುನ್ನಡೆಯುತ್ತಾರೆ. ಆದರೆ ಈ ಘೋರ ಪಯಣದುದ್ದಕ್ಕೂ ಅವರನ್ನು ಕಾಡುವುದು ನಮ್ಮ ಚಿಂತೆ. ಕಪಟಿಗಳು ನಾವಾಗದೆ, ಸರ್ವೇಶ್ವರನ ಪ್ರೀತಿಯ ಮಕ್ಕಳು ನಾವಾಗಬೇಕೆಂಬುದು ಅವರ ಹೆಬ್ಬಯಕೆ.
ಮುಂದೆ ಮುಂದೆ ನಡೆಯುವಾಗ ದೇಹದಿಂದ ರಕ್ತಹರಿದು, ದೇಹ ಜರ್ಜರಿತವಾಗಿದೆ. ಆದರೂ ಯೇಸು ಎದೆಗುಂದಲಿಲ್ಲ. ನಮ್ಮೆಲ್ಲರ ಶಿಲುಬೆ ಅದೆಷ್ಟೇ ಭಾರವಾಗಿದ್ದರೂ, ಅವರು ಮುಕ್ತ ಮನಸ್ಸಿನಿಂದ ಹೊರುತ್ತಾರೆ. ನಮ್ಮದೇ ಪಾಪಗಳು ಆ ಶಿಲುಬೆಯ ಭಾರವನ್ನು ದುಪ್ಪಟ್ಟುಗೊಳಿಸುತ್ತಿವೆ. ಕ್ರಿಸ್ತ ಎದೆಗುಂದದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇದೊಂದು ಬಾರಿಯಾದರೂ ಅವರನ್ನು ಕೈ ಹಿಡಿದು ಮೇಲೆತ್ತಲು ಅಣಿಯಾಗಬೇಕೆಂಬ ಹಂಬಲ ಅವರದು.
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು ಕಂಪಿಸುತ್ತಿದ್ದವು. ತಡ ಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು, ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ. ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡುಪಾಪಿ. ತಿಳಿದೂ ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ ಬೇಡುತ್ತಿರುವೆ ನನ್ನೊಡೆಯ. . . ಬಾ ಕೈಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ. ಆಮೆನ್

ಒಬ್ಬ : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

No comments:

Post a Comment