Tuesday, 28 May 2019

29 ಮೇ 2019


 ಬಿಳಿ/  ಬುಧ/  ಪಾಸ್ಖ ಕಾಲದಆರನೇ ವಾರ

1ನೇ  ವಾಚನ  -  ಪ್ರೇ.ಕಾ171522-18:1
15 : ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದು ಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು.
22 : ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ.
23 : ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆಅಜ್ಞಾತ ದೇವರಿಗೆಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ.
24 : ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು; ಮಾನವನು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ.
25 : ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ.
26 : ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.
27 : ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು. ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ.
28 : ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ’; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, ‘ನಾವು ನಿಜವಾಗಿ ದೇವರ ಮಕ್ಕಳು.’
29 : “ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು.
30 : ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ.
31 : ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.”
32 : ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.
33 : ಹೀಗೆ ಪೌಲನು ಸಭೆಯಿಂದ ನಿರ್ಗಮಿಸಿದನು.
34 : ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ ಅರಿಯೊಪಾಗದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.
1 : ಇದಾದಮೇಲೆ ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು.


ಕೀರ್ತನೆ  -  148:  1-2,  11-14
1 : ಹೊಗಳಿರಿ ಸ್ವರ್ಗದಿಂದ ಪ್ರಭುವನು / ವಂದಿಸಿ ಮಹೋನ್ನತದಲಿ ಆತನನು
2 : ಆತನ ಸಮಸ್ತ ದೂತರೇ, ಸ್ತುತಿಸಿ ಆತನನು / ಆತನ ಎಲ್ಲಾ ಗಣಗಳೇ, ಹೊಗಳಿ ಆತನನು
11 : ಭೂರಾಜರು, ಎಲ್ಲ ಜನಾಂಗಗಳು / ಅಧಿಕಾರಿಗಳು, ದೇಶಾಧಿಪತಿಗಳು
12 : ಯುವಕರೂ ಯುವತಿಯರೂ / ಮುದುಕರೂ ಮಕ್ಕಳೂ
13 : ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು / ಭೂಮ್ಯಾಕಾಶ ವಿೂರಿದ ಆತನ ಮಹಿಮೆಯನು / ಆತನ ಮಹತ್ತಾದ ಏಕೈಕ ನಾಮವನು
14 : ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ / ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ / ತನ್ನ ಆಪ್ತಜನರಾದ ಇಸ್ರಯೇಲರಿಗೆ / ಅಲ್ಲೆಲೂಯ!


ಶುಭಸಂದೇಶ - ಯೊವಾನ್ನ 16: 12-15
12 : ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು.
13 : ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು.
14 : ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು.
15 : ಪಿತನಿಗೆ ಇರುವುದೆಲ್ಲವೂ ನನ್ನದೇ. ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು

ಚಿಂತನೆ
ಕ್ರಿಸ್ತನ ಮಾತುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಪವಿತ್ರಾತ್ಮರ ಮಧ್ಯಸ್ಥಿಕೆ ನಮಗೆ ಬೇಕೇ ಬೇಕು. ಕ್ರಿಸ್ತರು ಹೇಳಿದ ಪ್ರತಿಯೊಂದನ್ನು ನೆನಪಿಸಿ ಆ ಮಾತುಗಳ ಆಳವಾದ ಅರ್ಥಗಳನ್ನು ವ್ಯಾಖ್ಯಾನಗಳನ್ನು ಅರಿಯಲು ಪವಿತ್ರಾತ್ಮರು ನಮಗೆ ನೆರವಾಗುವರು. ಕ್ರಿಸ್ತರೇ ಎಷ್ಟೂ ಸಲ ತನ್ನ ಶಿಷ್ಯರ ತಿಳುವಳಿಕೆಯಲ್ಲಿ, ಜ್ಞಾನದಲ್ಲಿ ಇರುವ ಕೊರತೆಯ ಬಗ್ಗೆ ಪ್ರಸ್ತಾಪಿಸಿರುವುದನ್ನು ಶುಭಸಂದೇಶದಲ್ಲಿ ಓದುತ್ತೇವೆ. ತಿಳುವಳಿಕೆ ಕೊರತೆಯನ್ನು ಅನುಭವಿಸಿದ ಶಿಷ್ಯರು ಪವಿತ್ರಾತ್ಮರನ್ನು ಪಡೆದ ನಂತರ ಅವರಲ್ಲಿ ಗಣನೀಯ ಬದಲಾವಣೆಗಳು ಕಾಣಿಸಿಕೊಂಡವು. ಶಿಷ್ಯರ ಜ್ಞಾನ ವಿಕಾಸಗೊಂಡಿತ್ತು. ಪ್ರಬುದ್ಧತೆಯಿಂದ ಕ್ರಿಸ್ತನ ಶುಭಸಂದೇಶವನ್ನು ಜನರಿಗೆ ಬೋಧಿಸಿ ಜನರು ಬೆರಗಾಗುವಂತೆ ಮಾಡಿದರು. ಸಾಧಾರಣ ಬೆಸ್ತರಾಗಿದ್ದ ಶಿಷ್ಯರು ದೇವರ ರಕ್ಷಣೆಯ ಯೋಜನೆಯನ್ನು ಕ್ರಿಸ್ತನಲ್ಲಿ ಅನುಭವಿಸಿ ಜನರಿಗೆ ಅದನ್ನು ತಿಳಿಸುವಂತರಾದರು. ಇನ್ನೊಂದು ಕಡೆ ಶುಭಸಂದೇಶದ ರಹಸ್ಯಗಳನ್ನು ಗ್ರಹಿಸಿ ಕ್ರೈಸ್ತ ಸಿದ್ಧಾಂತಗಳನ್ನು ತನ್ನ ಪತ್ರಗಳ ಮೂಲಕ ತಿಳಿ ಹೇಳುವ ಸಾಮಾರ್ಥ್ಯ ಸಂತ ಪೌಲರಿಗೆ ಬಂದಿದ್ದು ಪವಿತ್ರಾತ್ಮರ  ನೆರವಿನಿಂದ. ಎದುರಾಳಿಗಳ ಮುಂದೆ ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಎಂಬ ಚಿಂತೆ ನಮಗೆ ಬೇಡ; ಆ  ಜ್ಞಾನ, ವಿವೇಕವನ್ನು  ಪವಿತ್ರಾತ್ಮರು ನಮಗೆ ಖಂಡಿತವಾಗಿ ದಯಪಾಲಿಸುವರು.

No comments:

Post a Comment