ಹದಿನಾಲ್ಕನೆಯ ಸ್ಥಳ

ಯೇಸುವಿನ ಪೂಜ್ಯ ಶರೀರವನ್ನು ಸಮಾಧಿ ಮಾಡುತ್ತಾರೆ


ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ಸಂಜೆಯಾಯಿತು, ಅರಿಮತ್ತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು. ಈತ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಅವನಿಗೆ ಕೊಡುವಂತೆ ಅಪ್ಪಣೆ ಮಾಡಿದನು. ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು. ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು. (ಮತ್ತಾಯ ೨೭: ೫೭-೬೦)

ಶ್ಲೋಕ: ಏಕೆನೆ, ದೂಡಲಾರೆ ಪಾತಾಳಕೆ ನೀನೆನ್ನ ಜೀವಾತ್ಮನನು
ಪ್ರತಿಶ್ಲೋಕ: ಕೊಳೆಯ ಬಿಡಲಾರೆ ನೀನೊಲಿದಾತನನು (ಪ್ರೇಷಿತರ ಕಾರ್ಯಕಲಾಪಗಳು ೨: ೨೭)

ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಪ್ರಭು ಯೇಸುವಿನಲ್ಲಿ ದೇವರು ನಮಗೆ ತೀರಾ ಸಮೀಪವಾಗಿದ್ದು ನಮ್ಮೊಂದಿಗೆ ತಂಗುತ್ತಾರೆ. ಪ್ರಭು ಯೇಸು ನಮಗೆ ಈ ಸೂತ್ರವನ್ನು ನೀಡಿದ್ದಾರೆ. ‘ನಾನು ಹಸಿದಿದ್ದೆ, ನನಗೆ ತಿನ್ನಲು ಕೊಟ್ಟಿರಿ. ಎಲ್ಲಿ ಯಾರಾದರೂ ಹಸಿವೆಯಿಂದ ಇದ್ದಾರೆ, ಅಲ್ಲಿ ಪ್ರಭು ಯೇಸು ಇದ್ದಾರೆ. ‘ನಾನು ಬಾಯಾರಿದ್ದೆ, ನನಗೆ ಕುಡಿಯಲು ಕೊಟ್ಟಿರಿ. ನಿಮ್ಮ ಮನೆಯ ಬಾಗಿಲಿಗೆ ಬಂದು ಯಾರಾದರೂ ಕುಡಿಯಲು ನೀರನ್ನು ಕೇಳಿದರೆ, ನಿಮಗೆ ವಿಶ್ವಾಸವಿದ್ದರೆ ಅಲ್ಲಿ ಕ್ರಿಸ್ತರನ್ನೇ ನೀವು ಕಾಣುವಿರಿ. ಕಾಯಿಲೆಯಿಂದ ನರಳುವ ವ್ಯಕ್ತಿ ನಿಮ್ಮ ಭೇಟಿಗಾಗಿ ಹಾತೊರೆಯುವಾಗ, ಅದೋ ಕ್ರಿಸ್ತರು ನುಡಿಯುತ್ತಾರೆ: ‘ನಾನು ರೋಗಿಯಾಗಿದ್ದೆ, ನೀನು ನನ್ನನ್ನು ಸಂಧಿಸಲು ಬಂದೆ. ಅದೇ ರೀತಿ ಬಂಧನದಲ್ಲಿರುವವರ ಭೇಟಿ. ನಿರಪರಾಧಿಗಳ ಪರ ಸಾಕ್ಷಿ ಹೇಳಲು ಇಂದು ಎಷ್ಟು ಮಂದಿ ಸಿದ್ಧರಿದ್ದಾರೆ? ಎಷ್ಟೋ ಮಂದಿ ಇದನ್ನು ಅವಮಾನವೆಂದೇ ಭಾವಿಸುತ್ತಾರೆ. ಸ್ನೇಹಿತರೇ ತೊಂದರೆಗೆ ಸಿಲುಕಿರುವ ಸ್ನೇಹಿತರಿಗೆ ದ್ರೋಹ ಬಗೆಯುವ ಭಯಾನಕ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕೊರತೆಯಲ್ಲಿರುವ ವ್ಯಕ್ತಿ, ಹಿಂಸೆಗೆ ಒಳಗಾಗಿರುವ ವ್ಯಕ್ತಿ, ಬಂಧಿಯಾಗಿರುವ ವ್ಯಕ್ತಿ, ಕೊಲೆಗೀಡಾದ ವ್ಯಕ್ತಿ, ಅವಮಾನಕ್ಕೆ ಒಳಗಾಗಿ ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟ ವ್ಯಕ್ತಿಗಳು-ಇವರೆಲ್ಲರೂ ಕ್ರಿಸ್ತರೇ ಆಗಿದ್ದಾರೆ ಎಂಬ ಅರಿವು ನಮ್ಮಲ್ಲಿ ಇದ್ದಲ್ಲಿ ನಾವು ಅವರನ್ನು ತುಂಬಾ ಕಾಳಜಿಯಿಂದ, ಚಿನ್ನದ ಪದಕವನ್ನು ಎತ್ತಿಕೊಂಡು ಮುತ್ತಿಡುವಂತೆ, ಎತ್ತಿಕೊಂಡು ಉಪಚರಿಸುತ್ತಿದ್ದೆವು ಹಾಗೂ ಅವರ ಬಗ್ಗೆ ನಾವು ನಾಚಿಕೆ ಪಡುತ್ತಿರಲಿಲ್ಲ. ಆದರೆ ಇಂದು ಎಂತಹ ಜನರಿದ್ದಾರೆ. ಮನುಷ್ಯ ಜೀವಿಗಳನ್ನು ಹಿಂಸಿಸಿ ಕೊಲ್ಲುವವರು ಮತ್ತು ಅದರಿಂದ ಸಿಗುವ ಹಣಕಾಸಿನ ಬಂಡವಾಳವು ಮಾನವ ಜೀವಿಗಳಿಗಿಂತ ಹೆಚ್ಚು ಅಮೂಲ್ಯ ಎಂದು ತಿಳಿದುಕೊಂಡಿರುವವರು -ಇವರು ತಿಳಿದುಕೊಳ್ಳಬೇಕಿತ್ತು ಪ್ರಪಂಚದ ಮಿಲಿಯಗಟ್ಟಲೆ ಹಣ ಓರ್ವ ಮಾನವಜೀವಿಯ ಮುಂದೆ ಏನೂ ಅಲ್ಲ ಎಂಬ ಸತ್ಯ. ಮಾನವತಾವಾದಿ ಕ್ರಿಸ್ತರೇ ಆಗಿದ್ದಾರೆ. ಹಾಗೂ ನಾವು ವಿಶ್ವಾಸದಿಂದ ಆ ವ್ಯಕ್ತಿಯನ್ನು ಉಪಚರಿಸುವಾಗ, ಪ್ರಭು ಕ್ರಿಸ್ತರನ್ನೇ ಆ ವ್ಯಕ್ತಿಯಲ್ಲಿ ಕಾಣುತ್ತೇವೆ. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೨೦೨)

ಪ್ರಾರ್ಥಿಸೋಣ: ದಯಾಮಯ ದೇವರೇ, ತೋಟದಲ್ಲಿದ್ದ ಒಂದು ಸಮಾಧಿಯಲ್ಲಿ ನಿಮ್ಮ ದಿವ್ಯ ಕುಮಾರರನ್ನು ಸಮಾಧಿ ಮಾಡಲಾಯಿತು. ಅವರು ಸಬ್ಬತ್ ದಿನದಂದು ವಿಶ್ರಾಂತಿ ಪಡೆದರು. ದೀಕ್ಷಾ ಸ್ನಾನದ ನೀರಿನಲ್ಲಿ ಅವರೊಂದಿಗೆ ಸಮಾಧಿ ಮಾಡಲ್ಪಟ್ಟಿರುವ ನಾವು ಅವರ ಶಾಶ್ವತ ಹಾಗೂ ಮಹಿಮಾ ರಾಜ್ಯದಲ್ಲಿ ಪೂರ್ಣ ವಿಶ್ರಾಂತಿಯನ್ನು ಪಡೆಯುವಂತೆ ಅನುಗ್ರಹಿಸಿರಿ. ಅಲ್ಲಿ ಯುಗ ಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.



    No comments:

    Post a Comment