12/ ಹಸಿರು/ ಶುಭ / ಸಾಧಾರಣ ಕಾಲದ ಹದಿನಾಲ್ಕನೇ ವಾರ
1ನೇ ವಾಚನ - ಆದಿ 46: 1-7, 28-3೦
1ನೇ ವಾಚನ - ಆದಿ 46: 1-7, 28-3೦
1 : ಯಕೋಬನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು ಪ್ರಯಾಣ ಮಾಡಿ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ತಂದೆ ಇಸಾಕನ ದೇವರಿಗೆ ಬಲಿದಾನಗಳನ್ನು ಅರ್ಪಿಸಿದನು.
2 : ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, “ಯಕೋಬನೇ, ಯಕೋಬನೇ,” ಎಂದು ಕರೆಯಲು, ಅವನು, “ಇಗೋ, ಸಿದ್ಧನಿದ್ದೇನೆ,” ಎಂದನು
3 : ಆಗ ದೇವರು, “ನಾನೇ ದೇವರು, ನಿನ್ನ ತಂದೆ ಆರಾಧಿಸಿದ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು;
4 : ನಾನೇ ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಅಲ್ಲಿಂದ ನಿನ್ನನ್ನು ನಿಶ್ಚಯವಾಗಿ ವಾಪಸ್ಸು ಕರೆದುಕೊಂಡು ಬರುವೆನು. ನೀನು ಸಾಯುವ ಕಾಲದಲ್ಲಿ ಜೋಸೆಫನು ಹಾಜರಿದ್ದು ನಿನ್ನ ಕಣ್ಣುಗಳನ್ನು ಮುಚ್ಚುವನು,” ಎಂದರು.
5 : ಬಳಿಕ ಯಕೋಬನು ಬೇರ್ಷೆಬದಿಂದ ಪ್ರಯಾಣ ಮಾಡಿದನು. ಯಕೋಬನ ಮಕ್ಕಳು ತಮ್ಮ ತಂದೆಯಾದ ಯಕೋಬನನ್ನು ಮತ್ತು ತಮ್ಮ ಮಡದಿಮಕ್ಕಳನ್ನು ಫರೋಹನು ಕಳಿಸಿದ್ದ ಬಂಡಿಗಳಲ್ಲಿ ಕೂರಿಸಿಕೊಂಡು ಹೊರಟರು.
6 : ಕಾನಾನ್ ನಾಡಿನಲ್ಲಿ ತಾವು ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನೂ ದನಕುರಿಗಳನ್ನೂ ತೆಗೆದುಕೊಂಡು ಈಜಿಪ್ಟ್ ದೇಶವನ್ನು ತಲುಪಿದರು.
7 : ಹೀಗೆ ಯಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ ಮೊಮ್ಮಕ್ಕಳನ್ನೂ ತನ್ನ ಕುಟುಂಬದವರೆಲ್ಲರನ್ನೂ ತನ್ನ ಸಂಗಡವೇ ಕರೆದುಕೊಂಡು ಈಜಿಪ್ಟಿಗೆ ಬಂದನು.
28 : ಗೋಷೆನ್ ಪ್ರಾಂತ್ಯದಲ್ಲಿ ಜೋಸೆಫ್ ತನ್ನನ್ನು ಭೇಟಿಯಾಗಬೇಕೆಂದು ತಿಳಿಸಲು ಯಕೋಬನು ಯೆಹೂದನನ್ನು ಮುಂದಾಗಿ ಜೋಸೆಫನ ಬಳಿಗೆ ಕಳಿಸಿದನು. ಅವರೆಲ್ಲರು ಗೋಷೆನ್ ಪ್ರಾಂತ್ಯವನ್ನು ಬಂದು ಸೇರಿದರು.
29 : ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಭೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು.
30 : ಯಕೋಬನು ಜೋಸೆಫನಿಗೆ, “ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ದಾಯಿತು,” ಎಂದನು.
ಕೀರ್ತನೆ - 37: 3-4, 18-19, 27-28, 39-4೦
3 : ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು / ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು //
4 : ಪ್ರಭುವಿನಿಂದಲೆ ಬಯಸು ನಿನ್ನಾನಂದವನು / ನೆರವೇರಿಸುವನಾತ ನಿನ್ನ ಮನದಾಸೆಯನು //
18 : ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ / ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ //
19 : ಮಾನನಷ್ಟವಿರದು ಕಷ್ಟಕಾಲದಲಿ / ಕುಂದುಕೊರತೆಯಿರದು ಬರಗಾಲದಲಿ //
27 : ಕೆಟ್ಟದನು ಬಿಡು, ಒಳ್ಳೆಯದನು ಮಾಡು / ಸಿರಿನಾಡಿನಲಿ ಚಿರಕಾಲ ಬಾಳು //
28 : ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು / ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು //
39 : ಸಜ್ಜನರ ಜೀವೋದ್ಧಾರ ಪ್ರಭುವಿನಿಂದ / ಆಪತ್ಕಾಲದಲಿ ಆಶ್ರಯ ಆತನಿಂದ //
40 : ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು / ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು //
ಶುಭಸಂದೇಶ - ಮತ್ತಾಯ 1೦: 16-23
16 : "ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮ ಬುದ್ದಿಯುಳ್ಳವರೂ ಪಾರಿವಾಳಗಳಂತೆ ಸರಳ ಜೀವಿಗಳೂ ಆಗಿರಿ.
17 : ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು.
18 : ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಮದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.
19 : ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು.
20 : ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು.
21 : ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿ ಬಿದ್ದು ಅವರನ್ನು ಕೊಲ್ಲಿಸುವರು.
22 : ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
23 : ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆ ಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ. ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.
ಚಿಂತನೆ
ಇಂದಿನ ೨ನೇ ವಾಚನ ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶದ
ಬಗ್ಗೆ ತಿಳಿಸುತ್ತದೆ. ಇಂದಿನ ತೋಳಗಳ ಸಮಾಜದಲ್ಲಿ ಕುರಿಗಳಾಗಿರಲು ಕಳುಹಿಸುತ್ತಿದ್ದಾರೆ. ಅಲ್ಲದೆ
ಸರ್ಪಗಳಂತೆ ಸೂಕ್ಷ್ಮ ಬುದ್ಧಿವುಳ್ಳವರಾಗಿಯೂ ಪಾರಿವಾಳಗಳಂತೆ ಸರಳಜೀವಿಗಳಾಗಿಯೂ ಇರಿ ಎಂಬ ಕರೆ
ಕೊಡುತ್ತಿದ್ದಾರೆ. ಹಲವೊಮ್ಮೆ ಮನುಷ್ಯ ಎಷ್ಟೇ ಮೃದುವಾಗಿರುತ್ತಾನೆ ಅಷ್ಟೇ ಕ್ರೂರಿಯಾಗುವ
ಸಾಧ್ಯತೆಗಳಿವೆ.ಮನುಷ್ಯನ ನಡೆವಳಿಕೆಯನ್ನು ನಿಖರವಾಗಿ ಸ್ಪಷ್ಟೀಕರಿಸಲು ಸಾಧ್ಯವಿಲ್ಲ. ಆದ್ದರಿಂದ
ದೇವರ ಸಾಮ್ರಾಜ್ಯವನ್ನು ಕಟ್ಟಲು ಮತ್ತು ಕ್ರಿಸ್ತನ ನೈಜ ಶಿಷ್ಯರಾಗಿ ಬಾಳಬೇಕಾದರೆ ತೋಳಗಳಂತಿರುವ
ಸಮಾಜವನ್ನು ನಾಶಪಡಿಸಿ ಪಾರಿವಾಳದಂತೆ ಎಲ್ಲರಲ್ಲೂ ಸರಳತೆ ಮತ್ತು ಸಮಾನತೆಯ ಸಮುದಾಯವನ್ನಾಗಿ
ಪರಿವರ್ತಿಸಬೇಕು. ಇದಕ್ಕೆ ಬೇಕಾದ ಸಹಾಯ ನಮಗೆ ಪವಿತ್ರಾತ್ಮರಿಂದ ದೊರೆಯುತ್ತದೆ. ಇದರಿಂದ ನಾವು
ಸಹ ಯೇಸುವಿನ ನೈಜ ಶಿಷ್ಯರಾಗಿ ಬಾಳಿ, ಉತ್ತಮ ಸಾಕ್ಷಿಗಳಾಗಿ ಕ್ರಿಸ್ತನ ಪ್ರತಿರೂಪಗಳಾಗುವಂತೆ
ಬುದ್ಧಿವಾದವನ್ನು ನೀಡುತ್ತಾರೆ. ಇದಲ್ಲದೆ ಪ್ರಸ್ತುತ ಸಮಾಜವು ಕ್ರೈಸ್ತ ಸಮ್ರಾಜ್ಯದ ಮೌಲ್ಯಗಳ
ವಿರುದ್ಧ ಪ್ರತಿರೋಧ ತೋರಿಸುವಾಗ ನಾವು ಸೈರಣೆಯಿಂದಿದ್ದು ಜೀವೋದ್ಧಾರವನ್ನು ಪಡೆಯಬೇಕು. ಇದಕ್ಕೆ
ಹಿಂಸೆ ಮಂತ್ರವನ್ನು ಪಠಿಸದೆ ಶಾಂತಿ ಪತಾಕೆಯ ಮಂತ್ರವನ್ನು ಎಲ್ಲೆಲ್ಲೂ ಸಾರಿರಿ ಎಂದು
ಬೋಧಿಸುತ್ತಾರೆ.
No comments:
Post a Comment