Tuesday, 27 August 2019

ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಬುಧವಾರ 

28/ಬಿಳಿ/ಬುಧ/ಸಂತ ಅಗಸ್ಟಿನ್ (ಧರ್ಮಾ ಮತ್ತು ಧ.ಪಂ) (ಸ್ಮರಣೆ)
1ವಾಚನ: 1 ಥೆಸ 2: 9-13
ಕೀರ್ತನೆ- 138: 7-12
ಶುಭಸಂದೇಶ- ಮತ್ತಾಯ 23:27-32

1ವಾಚನ: 1 ಥೆಸ 2: 9-13
ಸಹೋದರರೇ, ನಮ್ಮ ಶ್ರಮೆ ಹಾಗೂ ದುಡಿಮೆಗಳನ್ನು ನೀವು ಮರೆಯುವಂತಿಲ್ಲ. ನಿಮ್ಮಲ್ಲಿ ಯಾರಿಗೂ ನಾವು ಹೊರೆಯಾಗಬಾರದೆಂದು, ಬದುಕಿಗಾಗಿ ಹಗಲಿರುಳೂ ದುಡಿಯುತ್ತಾ ದೇವರ ಶುಭಸಂದೇಶವನ್ನು ಸಾರಿದೆವು. ವಿಶ್ವಾಸಿಗಳಾದ ನಿಮ್ಮ ನಡುವೆ ನಾವು ಎಷ್ಟು ಶುದ್ಧರಾಗಿ, ನೀತಿವಂತರಾಗಿ, ನಿರ್ದೋಷಿಗಳಾಗಿ ನಡೆದುಕೊಂಡೆವು ಎಂಬುದಕ್ಕೆ ನೀವೇ ಸಾಕ್ಷಿಗಳು. ಮಾತ್ರವಲ್ಲದೆ ದೇವರೂ ಸಾಕ್ಷಿಯೇ. ತಂದೆ ಮಕ್ಕಳನ್ನು ಕಾಣುವಂತೆ ನಾವು ಪ್ರತಿಯೊಬ್ಬನನ್ನೂ ಆದರದಿಂದ ಕಂಡೆವು; ಬುದ್ಧಿ ಹೇಳಿದೆವು. ಪ್ರೊತ್ಸಾಹಿಸಿದೆವು. ತಮ್ಮ ರಾಜ್ಯ ಹಾಗೂ ವೈಭವದಲ್ಲಿ ಭಾಗವಹಿಸಲು ಕರೆಯಿತ್ತ ದೇವರು ಮೆಚ್ಚುವಂತೆ ಬಾಳಬೇಕೆಂದು ನಿಮಗೆ ವಿಧಿಸಿದೆವು; ಇದೆಲ್ಲಾ ನಿಮಗೆ ತಿಳಿದಿದೆ. ಇನ್ನೊಂದು ಕಾರಣಕ್ಕಾಗಿಯೂ ನಾವು ಸತತವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನೀವು ದೇವರ ಸಂದೇಶವನ್ನು ನಮ್ಮಿಂದ ಕೇಳಿದಾಗ, ಅದನ್ನು ಮನುಷ್ಯರ ಮಾತುಗಳೆಂದು ಪರಿಗಣಿಸದೆ, ದೇವರ ವಾಕ್ಯವೆಂದೇ ಅರಿತು ಅಂಗೀಕರಿಸಿದಿರಿ. ವಿಶ್ವಾಸಿಗಳಾದ ನಿಮ್ಮಲ್ಲಿ ಚೈತನ್ಯಪೂರ್ಣವಾಗಿರುವ ಈ ವಾಕ್ಯವು, ನಿಜವಾಗಿಯೂ ದೇವರ ಸಂದೇಶವೇ ಸರಿ.

ಕೀರ್ತನೆ- 138: 7-12
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? / ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ / ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ / ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ / ನನ್ನ ಹಿಡಿದಿರುವುದು ನಿನ್ನ ಬಲಗೈ
11 : “ಕಾರ್ಗತ್ತಲೆನ್ನ ಕವಿಯಲಿ” ಎಂದರೂ / “ಸುತ್ತಲ ಬೆಳಕು ಇರುಳಾಗಲಿ” ಎಂದರೂ
12 : ಕತ್ತಲು ಕತ್ತಲಲ್ಲ ನಿನಗೆ / ಇರುಳೂ ಹಗಲಾಗಿದೆ ನಿನಗೆ / ಕತ್ತಲು, ಬೆಳಕು - ಒಂದೇ ನಿನಗೆ

ಶುಭಸಂದೇಶ- ಮತ್ತಾಯ 23:27-32
“ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ. ಬಹಿರಂಗ ನೋಟಕ್ಕೆ ನೀವು ಸತ್ಪುರುಷರು. ಅಂತರಂಗದಲ್ಲಾದರೋ ಕಪಟ, ಕಲ್ಮಷಗಳಿಂದ ತುಂಬಿದವರು. “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟಿಸುತ್ತೀರಿ. ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ. ಹೀಗೆ ಪ್ರವಾದಿಗಳನ್ನು ಕೊಲೆಮಾಡಿದವರ ಪೀಳಿಗೆಗೆ ನೀವು ಸೇರಿದವರು ಎಂದು ನೀವೇ ಸಾಕ್ಷಿಕೊಡುತ್ತೀರಿ. ಒಳ್ಳೆಯದು, ನಿಮ್ಮ ಪೂರ್ವಜರು ಪ್ರಾರಂಭಿಸಿದ್ದನ್ನು ನೀವು ಹೋಗಿ ಪೂರ್ಣಗೊಳಿಸಿರಿ.

ಚಿಂತನೆ
ದೇವರ ವಾಕ್ಯ ಸಾರುವುದು ಸತ್ಯ
ಆಲ್ಫ್ರೆಡ್ ಆಡ್ಲರ್ ಒಬ್ಬ ಮನೋರೋಗಿಗಳ ತಜ್ಞ. ಯಾವುದೇ ಮನೋರೋಗಿಗಳು ಆತನಲ್ಲಿಗೆ ಹೋದರೆ ಅವರನ್ನು ಮೊದಲು ಪ್ರೀತಿಯಿಂದ ಮಾತನಾಡಿಸಿ, ಅವರ ನೋವು ನಲಿವುಗಳನ್ನು ವಿಚಾರಿಸುತ್ತಿದ್ದ. ತಪಾಸಣೆ ಮುಗಿದ ನಂತರ ರೋಗಿಯನ್ನು ಕುರಿತು ನೀನು ಗುಣವಾದ ನಂತರ ಏನು ಮಾಡುವೆ? ಎಂದು ಕೇಳುತ್ತಿದ್ದ. ತನಗರಿವಿದ್ದ ಹಾಗೆ ರೋಗಿಯು ಉತ್ತರ ಕೊಟ್ಟ ಬಳಿಕ ಆಲ್ಫ್ರೆಡ್ ಆತನನ್ನು ಬಾಗಿಲವರೆಗೆ ಕರೆದುಕೊಂಡು ಹೋಗಿ  ನೀವು ಗುಣವಾದ ಬಳಿಕ ಏನನ್ನು ಮಾಡಬೇಕು ಎಂದುಕೊಂಡಿರುವೆಯೋ ಅದನ್ನು ಇಂದೇ ಕಾರ್‍ಯಗತಗೊಳಿಸು ಎನ್ನುತ್ತಲಿದ್ದ. ಇಂದಿನ ಶುಭಸಂದೇಶವನ್ನು ಆಲಿಸಿದ ಬಳಿಕ ನಾವು ಅದರಂತೆಯೇ ನಡೆಯಲು ಪ್ರಯತ್ನಿಸಬೇಕು.

ಇಂದಿನ ಶುಭಸಂದೇಶದಲ್ಲಿ ಪ್ರಭುಯೇಸು ಫರಿಸಾಯರನ್ನು ಕುರಿತು ನೀವು ನೆಲಸಮವಾದ ಗೋರಿಗಳು ಜನರು ಅದನ್ನರಿಯದೆ ಅದರ ಮೇಲೆ ನಡೆದಾಡುತ್ತಾರೆ. ಇದು ಫರಿಸಾಯರ ಮೇಲೆ ಪ್ರಭು ಯೇಸುವಿನ ನೇರ ಖಂಡನೆ. ಫರಿಸಾಯರು ಯಾವುದೇ ರೀತಿಯಲ್ಲಿಯೂ ಮೃತ ಜೀವಿಗಳನ್ನು ಮುಟ್ಟುತ್ತಿರಲಿಲ್ಲ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಮೈಲಿಗೆ ಎಂದವರು ಪರಿಗಣಿಸುತ್ತಿದ್ದರು. ಅವರನ್ನು ಪ್ರಭುಯೇಸು ನೆಲಸಮವಾದ ಗೋರಿಗಳು ಎಂದು ಕರೆಯುತ್ತಾರೆ.

ಯೇಸು ತಮ್ಮ ಜೀವನದುದ್ದಕ್ಕೂ ದೇವರ ಸಾಮ್ರಾಜ್ಯ ಸ್ಥಾಪನೆಯ ಕಾರ್‍ಯದಲ್ಲಿ ತೊಡಗಿದ್ದರು. ದೇವರ ರಾಜ್ಯವು ಸಮೀಪಿಸಿದೆ, ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ದೇವರ ಸಾಮ್ರಾಜ್ಯವನ್ನು ಅಲ್ಲಲ್ಲಿ ಹುಡುಕಬೇಡಿರಿ, ಅದು ನಿಮ್ಮೊಳಗೆ ಇದೆ ಎಂಬ ಮಾತುಗಳಿಂದ ಯೇಸು ದೈವೀರಾಜ್ಯದ ಸ್ಥಾಪನೆಗೆ ಸರ್ವರನ್ನು ಉತ್ಸಾಹಿತರಾಗಿಸಿದರು. ಒಂದು ವೇಳೆ ಯೇಸುಸ್ವಾಮಿ ಅಂದು ಸ್ಥಾಪಿಸಲು ತವಕಪಟ್ಟ ಸ್ವರ್ಗ ಸಾಮ್ರಾಜ್ಯ ನಮ್ಮೀ ಪ್ರಪಂಚದಲ್ಲಿ ಸ್ಥಾಪಿತವಾಗಿದೆಯಾದರೆ ಆ ರಾಜ್ಯದ ಗುಣಲಕ್ಷಣಗಳು, ಪ್ರೀತಿ, ಪ್ರೇಮ, ನ್ಯಾಯ, ನೀತಿ, ದಾನ-ಧರ್ಮ- ದಯೆಗಳು ನಮ್ಮಲ್ಲಿ ಕಂಡು ಬರಬೇಕು. ಇಲ್ಲದಿದ್ದರೆ ಯೇಸುವಿನ ಖಂಡನೆ ಖಚಿತ.

ನಾವು ದೈವವಾಕ್ಯದ ಬಗೆಗೆ ಮಹತ್ತರವಾದ ಜ್ಞಾನವನ್ನು ಹೊಂದಿರಬಹುದು. ಧರ್ಮಸಭೆಯ ವಿಷಯಗಳನ್ನು, ವಿವರಗಳನ್ನು ಅರಿತಿದ್ದರೂ, ನಾವು ಅವುಗಳನ್ನು ಫರಿಸಾಯರಂತೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳದೆ ಹೋದರೆ ಫರಿಸಾಯರರಂತೆ ನಾವು ಸಹ ನೆಲಸಮವಾದ ಗೋರಿಗಳಂತೆ; ತಿಳಿದೂ ತಿಳಿಯದಂತೆ.

ಆಡ್ಲರ್ ತನ್ನ ರೋಗಿಗಳಿಗೆ ನೀನು ಗುಣವಾದರೇನು  ಮಾಡುವೆ? ಎಂದು ಕೇಳುವಂತೆಯೇ ಇಂದು ಪ್ರಭು ಯೇಸು ನಮ್ಮನ್ನು ದೈವವಾಕ್ಯವನ್ನು ಅರಿತಿರುವ ನೀನು ಏನು ಮಾಡುತ್ತಿರೆವೆ? ಎಂದು ಕೇಳುತ್ತಲಿದ್ದಾರೆ. ನಮಗೆ ತಿಳಿದಿದ್ದನ್ನೇ ಬೇರೆಯವರಿಗೆ ಸಾರಲು, ದೈವವಾಕ್ಯದ ಅನುಸಾರವಾಗಿ ನಡೆಯಲು, ನಮ್ಮ ದಿನ ನಿತ್ಯದ ಜೀವನದಲ್ಲಿ ಅದನ್ನು ಪರಿಪಾಲಿಸಲು ಸಿದ್ಧರಾಗೋಣ.


ಕುಯುಕ್ತಿಯಿಂದ ಶಾಶ್ವತ ಸಾಫಲ್ಯ ಸಾಧ್ಯವಿಲ್ಲ

No comments:

Post a Comment