Saturday, 21 March 2020

ತಪಸ್ಸು ಕಾಲದ ಐದನೆಯ ಭಾನುವಾರ

ಮಾರ್ಚ್ 29, 2020 ಭಾನುವಾರ                             [ನೇರಳೆ]
ತಪಸ್ಸು ಕಾಲದ 5ನೇ ಭಾನುವಾರ
ಮೊದಲ ವಾಚನ: ಯೆಜೆಕಿಯೇಲ 37:12-14
ಕೀರ್ತನೆ 130:1-8 ಶ್ಲೋಕ.7
ಆತನಲ್ಲಿದೆ ಕರುಣೆ, ಪೂರ್ಣವಿಮೋಚನೆ
ಎರಡನೇ ವಾಚನ: ರೋಮನರಿಗೆ 8:8-11
ಶುಭಸಂದೇಶ: ಯೊವಾನ್ನ 11:1-45 [ಅಥವಾ]
(ಸಂಕ್ಷಿಪ್ತ) ಯೊವಾನ್ನ 11:3-7, 17, 20-27, 33-45

ಮೊದಲ ವಾಚನ: ಯೆಜೆಕಿಯೇಲ 37:12-14
12 : ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು.
13 : ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು.
14 : ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”

ಕೀರ್ತನೆ 130:1-8 ಶ್ಲೋಕ.7
ಆತನಲ್ಲಿದೆ ಕರುಣೆ, ಪೂರ್ಣವಿಮೋಚನೆ
1 : ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ
2 : ಆಲಿಸು, ಕಿವಿಗೊಡು ಪ್ರಭೂ, ನನ್ನಾರ್ತ ವಿಜ್ಞಾಪನೆಗೆ
3 : ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭು / ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು ವಿಭು?
4 : ಪಾಪವನು ಕ್ಷಮಿಸುವವನು ನೀನು / ಎಂತಲೆ ಭಯಭಕ್ತಿಗೆ ಪಾತ್ರನು
5 : ಪ್ರಭುವಿಗಾಗಿ ಎನ್ನ ಮನ ಕಾದಿದೆ / ಆತನ ವಾಕ್ಯದಲಿ ನಂಬಿಕೆ ನನಗಿದೆ
6 : ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ / ಆತುರದಿಂದ ಬೆಳಗಾಗುವುದನು ಎದುರು ನೋಡುವುದಕ್ಕಿಂತ / ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ
7 : ಇಸ್ರಯೇಲೇ, ನಂಬಿಕೊಂಡಿರು ಪ್ರಭುವನೆ / ಆತನಲ್ಲಿದೆ ಕರುಣೆ, ಪೂರ್ಣವಿಮೋಚನೆ
8 : ಇಸ್ರಯೇಲನು ಉದ್ಧರಿಸುವನಾತ / ಅದು ಗೈದ ಸಕಲ ದೋಷಗಳಿಂದ //

ಎರಡನೇ ವಾಚನ: ರೋಮನರಿಗೆ 8:8-11
8 : ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ.
9 : ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ.
10 : ಆದರೆ ಕ್ರಿಸ್ತಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮ ಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ.
11 : ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.

ಶುಭಸಂದೇಶ: ಯೊವಾನ್ನ 11:1-45
1 : ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು.
2 : (ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.)
3 : ಈ ಸಹೋದರಿಯರು, ಯೇಸುಸ್ವಾಮಿಗೆ, “ಪ್ರಭುವೇ, ನಿಮ್ಮ ಆಪ್ತಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂದು ಹೇಳಿಕಳುಹಿಸಿದರು.
4 : ಇದನ್ನು ಕೇಳಿದ ಯೇಸು, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು.
5 : ಮಾರ್ತ, ಅವಳ ಸಹೋದರಿ ಮರಿಯ ಮತ್ತು ಲಾಸರ, ಇವರು ಯೇಸುವಿಗೆ ಅಚ್ಚುಮೆಚ್ಚಿನವರು.
6 : ಲಾಸರನ ಕಾಯಿಲೆಯ ಸುದ್ದಿಯನ್ನು ಕೇಳಿದ ಮೇಲೂ ಯೇಸು ತಾವಿದ್ದಲ್ಲಿಯೇ ಇನ್ನೂ ಎರಡು ದಿನ ಉಳಿದುಕೊಂಡರು.
7 : ಅನಂತರ ತಮ್ಮ ಶಿಷ್ಯರಿಗೆ, “ಬನ್ನಿ, ಜುದೇಯಕ್ಕೆ ಮರಳಿ ಹೋಗೋಣ,” ಎಂದರು.
8 : ಆ ಶಿಷ್ಯರು, “ಗುರುದೇವಾ, ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಕಲ್ಲಿನಿಂದ ಹೊಡೆಯಬೇಕೆಂದಿದ್ದರು. ಪುನಃ ಅಲ್ಲಿಗೇ ಹೋಗಬೇಕೆಂದಿರುವಿರಾ?” ಎಂದು ಕೇಳಿದರು.
9 : ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿ ಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ.
10 : ಆದರೆ ರಾತ್ರಿಯಲ್ಲಿ ನಡೆಯುವವನು ಎಡವಿ ಬೀಳುತ್ತಾನೆ. ಕಾರಣ, ಅವನಲ್ಲಿ ಬೆಳಕು ಇಲ್ಲ,” ಎಂದರು.
11 : ಬಳಿಕ ಯೇಸು, “ನಮ್ಮ ಮಿತ್ರನಾದ ಲಾಸರನು ನಿದ್ರೆ ಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲು ನಾನು ಹೋಗಬೇಕು,” ಎಂದು ನುಡಿದರು.
12 : ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿರುವನಾದರೆ ಚೇತರಿಸಿಕೊಳ್ಳುತ್ತಾನೆ,” ಎಂದರು.
13 : ಯೇಸು ಹೇಳಿದ್ದು ಅವನ ಮರಣವನ್ನು ಕುರಿತು. ಶಿಷ್ಯರಾದರೋ ಅದು ಸಾಮಾನ್ಯ ನಿದ್ರೆಯೆಂದು ತಿಳಿದುಕೊಂಡರು.
14 : ಆದುದರಿಂದ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಸರನು ಸತ್ತು ಹೋಗಿದ್ದಾನೆ;
15 : ನಾನು ಅಲ್ಲಿ ಇಲ್ಲದೆ ಹೋದದ್ದು ನಿಮಗೆ ಒಳ್ಳೆಯದೇ ಆಯಿತು. ನಿಮಗೆ ನನ್ನಲ್ಲಿ ವಿಶ್ವಾಸ ಮೂಡುವಂತೆ ಇದೆಲ್ಲಾ ನಡೆದಿದೆ. ಬನ್ನಿ, ಅವನ ಬಳಿಗೆ ಹೋಗೋಣ,” ಎಂದರು.
16 : ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ,” ಎಂದು ಹೇಳಿದನು. ‘ನಾನೇ ಪುನರುತ್ಥಾನ; ನಾನೇ ಜೀವ!’
17 : ಯೇಸುಸ್ವಾಮಿ ಅಲ್ಲಿಗೆ ಬಂದಾಗ ಲಾಸರನನ್ನು ಸಮಾಧಿಯಲ್ಲಿ ಹೂಳಿಟ್ಟು ಆಗಾಗಲೇ ನಾಲ್ಕು ದಿನಗಳಾಗಿದ್ದುವೆಂದು ತಿಳಿಯಿತು.
18 : ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊವಿೂಟರು ದೂರದಲ್ಲಿದೆ.
19 : ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.
20 : ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು
21 : ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ.
22 : ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು.
23 : ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು.
24 : “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ.
25 : ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು.
26 : ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು,
27 : ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು. ಕಂಬನಿಗರೆದ ಯೇಸು
28 : ಹೀಗೆ ಹೇಳಿದ ಮೇಲೆ ಅವಳು ತನ್ನ ಸೋದರಿಯನ್ನು ಕರೆಯಲು ಹೋದಳು. ಅವಳನ್ನು ಕಂಡು, “ಬೋಧಕರು ಬಂದಿದ್ದಾರೆ; ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದಳು.
29 : ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು.
30 : ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು.
31 : ಇತ್ತ ಮನೆಯಲ್ಲಿ ಮರಿಯಳನ್ನು ಸಂತೈಸಿಕೊಂಡಿದ್ದ ಯೆಹೂದ್ಯರು, ಆಕೆ ಅವಸರವಸರವಾಗಿ ಎದ್ದುಹೋಗುವುದನ್ನು ಕಂಡು ಗೋಳಿಡುವುದಕ್ಕಾಗಿಯೇ ಸಮಾಧಿಯ ಕಡೆಗೆ ಹೋಗುತ್ತಿದ್ದಾಳೆಂದು ಎಣಿಸಿ ಆಕೆಯ ಹಿಂದೆಯೇ ಹೋದರು.
32 : ಮರಿಯಳು ಯೇಸುವಿನ ಬಳಿಗೆ ಬಂದಕೂಡಲೇ ಅವರ ಕಾಲಿಗೆ ಬಿದ್ದು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದಳು.
33 : ಆಕೆಯ ಮತ್ತು ಆಕೆಯೊಡನೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದರು. ಅವರ ಮನ ಕರಗಿತು; ದುಃಖ ತುಂಬಿ ಬಂದಿತು.
34 : ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾವಿೂ,” ಎಂದರು.
35 : ಯೇಸು ಕಣ್ಣೀರಿಟ್ಟರು.
36 : ಇದನ್ನು ಕಂಡ ಯೆಹೂದ್ಯರು, “ಅವನ ಮೇಲೆ ಈತನಿಗೆಷ್ಟು ಪ್ರೀತಿಯಿತ್ತು, ನೋಡಿದಿರಾ!” ಎಂದುಕೊಂಡರು.
37 : ಕೆಲವರಾದರೋ, “ಆ ಕುರುಡನಿಗೆ ಕಣ್ಣುಕೊಟ್ಟ ಈತ ಲಾಸರನು ಸಾಯದಂತೆ ಮಡಬಾರದಿತ್ತೆ?” ಎಂದರು. ಲಾಸರನ ಪುನರುಜ್ಜೀವನ
38 : ಯೇಸುಸ್ವಾಮಿ ಮತ್ತೊಮ್ಮೆ ಮನಮರುಗಿ ಸಮಾಧಿಯ ಬಳಿಗೆ ಬಂದರು. ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು.
39 : ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು. ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು.
40 : “ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೆ?” ಎಂದು ಮರುನುಡಿದರು ಯೇಸು.
41 : ಆಗ ಕಲ್ಲನ್ನು ತೆಗೆದುಹಾಕಲಾಯಿತು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ಪಿತನೇ, ನನ್ನ ಪ್ರಾರ್ಥನೆಗೆ ನೀವು ಕಿವಿಗೊಡುತ್ತೀರಿ; ಆದುದರಿಂದ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
42 : ನನ್ನ ಪ್ರಾರ್ಥನೆಗೆ ನೀವು ಯಾವಾಗಲೂ ಕಿವಿಗೊಡುತ್ತೀರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನನ್ನು ಕಳುಹಿಸಿದಾತ ನೀವೇ ಎಂದು ಸುತ್ತಲೂ ನೆರೆದಿರುವವರು ನಂಬುವಂತೆ ನಾನು ಹೀಗೆ ಹೇಳಿದೆನು,” ಎಂದು ನುಡಿದರು.
43 : ಅನಂತರ ಗಟ್ಟಿಯಾದ ಧ್ವನಿಯಿಂದ, “ಲಾಸರನೇ, ಹೊರಗೆ ಬಾ,” ಎಂದು ಕೂಗಿದರು.
44 : ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು. ಯೇಸುವಿನ ವಿರುದ್ಧ ಹಂಚಿಕೆ
45 : ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.
------------------
ಚಿಂತನೆ
ಪ್ರಿಯರೆ, ಇಂದಿನ ವಾಚನಗಳು ನಮಗೆ ತಿಳಿಯಪಡಿಸುವುದೆನೆಂದರೆ; ಪುನತ್ಥಾನದಲ್ಲಿ ಭರವಸೆ ಇಟ್ಟು ಜೀವಿಸಬೇಕು ಹಾಗು ಪಾಪದೋಷಗಳಿಂದ ಆಧ್ಯಾತ್ಮಿಕವಾಗಿ ಮರಣಹೊಂದದೆ, ಒಳ್ಳೆಯ ಕ್ರಿಸ್ತೀಯ ಜೀವನ ಸಾಗಿಸಿ ಕ್ರಿಸ್ತನಲ್ಲಿ ನವ ಜೀವನ ಪಡೆಯಬೇಕೆಂಬುದಾಗಿದೆ.
ಮೊದಲನೆಯ ವಾಚನದಲ್ಲಿ, ದೇವರು ಪ್ರವಾದಿ ಯೆಜೆಕಿಯೇಲನ ಮೂಲಕ ಇಂತೆನ್ನುತ್ತಾರೆ, ನನ್ನ ಜನರೆ ನೋಡಿ ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರ್ರಯೇಲ್ ನಾಡಿಗೆ ಸೇರಮಾಡುವೆನು. ಈ ಸಾಂತ್ವನ ನೀಡುವ ನುಡಿಗಳಿಂದ ಸರ್ವೇಶ್ವರ ದೇವರು ಕಷ್ಟದಲ್ಲಿ ಸಿಲುಕಿರುವ ತನ್ನ ಜನರಿಗೆ ಗುಲಾಮಗಿರಿಯಿಂದ ಅವರನ್ನು ಪಾರುಮಾಡಿ ಅವರಿಗೆ ನವ ಮತ್ತು ಭರವಸೆಯ ಮಾರ್ಗವನ್ನು ತೋರಿಸುತ್ತಾರೆ.
ಎರಡನೆಯ ವಾಚನದಲ್ಲಿ, ಸಂತ ಪೌಲರು ದೇವರ ವಾಕ್ಯವನ್ನು ಸಾರುವುದಕ್ಕೋಸ್ಕರ ಕಷ್ಟನಷ್ಟವನ್ನು ಪಡುತ್ತಿದ ಜನರಿಗೆ ಮುಂಬರುವ ಪುನರುತ್ಥಾನದ ಮಹಿಮೆಯಲ್ಲಿ ಭಾಗಿಯಾಗುವ ಭರವಸೆಯನ್ನು ತಿಳಿಸುತ್ತಾರೆ. ಈ ಪುನರುತ್ಥಾನವನ್ನು ಯೇಸುಸ್ವಾಮಿಯು ತಮ್ಮ ಪಾಡು ಮತ್ತು ಮರಣದ ಮೂಲಕ ನಮಗೆ ನೀಡುತ್ತಾರೆಂಬುವುದನ್ನು ಸಾಬೀತುಪಡಿಸುತ್ತಾರೆ.
ಇಂದಿನ ಶುಭಸಂದೇಶದಲ್ಲಿ ಯೇಸುಸ್ವಾಮಿ ಸತ್ತಾಂತಹ ಲಾಜರನನ್ನು ಜೀವಕ್ಕೆ ಎಬ್ಬಿಸುವ ಬಗ್ಗೆ ನಾವು ಅಆಲಿಸುತ್ತೇವೆ. ತನ್ನ ಆಪ್ತಮಿತ್ರ ಲಾಜರನು ತೀರಿಹೋದನೆಂಬ ಸುದ್ದಿಯನ್ನು ಕೇಳಿ ಯೇಸುಸ್ವಾಮಿಯು ತನ್ನ ಅಳನ್ನು ವ್ಯಕ್ತಪಡಿಸುತ್ತಾರೆ. ಈಗಲೂ ಸಹ ನಾವು ಮಾಡುವ ಪಾಪಗಳನ್ನು ತಪ್ಪುಗಳನ್ನು ನೋಡುವ ಯೇಸುಸ್ವಾಮಿಯು ಅಳುತ್ತಾರೆ ಹಾಗು ದುಃಖಿಸುತ್ತಾರೆ. ಅವರ ರೋದನೆ ಮತ್ತು ವೇದನೆ ನಿಲ್ಲಬೇಕಾದರೆ ನಾವು ಪಾಪಮಯ ಪ್ರವೃತ್ತಿಯನ್ನು ತ್ಯಜಿಸಿ, ಕ್ರಿಸ್ತರ ಸದ್ಗುಣಗಳನ್ನು ಆಳವಡಿಸಿಕೊಳ್ಳಬೇಕಾಗುತ್ತದೆ.
ತಮ್ಮ ಗೆಳೆಯ ಲಾಜರನು ಸತ್ತಾಗ ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಬೆಥನಿಗೆ ಬಂದು ಈಗಾಗಲೆ ಮೂರು ದಿನಗಳ ಕಾಲ ಸಮಾಧಿಯಲ್ಲಿದ್ದ ಲಾಜರನನ್ನು ಜೀವಕ್ಕೆ ಎಬ್ಬಿಸುವುದನ್ನು ನಾವು ನೋಡುತ್ತೇವೆ.
ದುಃಖ ಪಡುತ್ತಿರುವ ಕುಟುಂಬದ ಸದಸ್ಯರಿಗೆ ಸಾಂತ್ವಾನವನ್ನು ನೀಡಲಿಕ್ಕ ಬರುವ ಯೇಸುಸ್ವಾಮಿಯನ್ನು ಭೇಟಿ ಮಾಡಿದ ಮಾರ್ತ ಯೇಸುಸ್ವಾಮಿಯಲ್ಲಿ ತನಗೆ ಇರುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ - "ನೀವೇ ಅಭಿಷಕ್ತರಾದ ಲೋಕೋದ್ಧಾರಕ; ದೇವರ ಪುತ್ರ, ಈ ಲೋಕಕ್ಕೆ ಬರಬೇಕಾದವರು"
ಯೇಸುವು ಪುನರುತ್ಥಾನವು ಜೀವವು ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು ಎಂದು ಹೇಳಿ ಲಾಜರನನ್ನು ಸಮಾಧಿಯಿಂದ ಜೀವಂತವಾಗಿ ಹೊರತರುವುದನ್ನು ನೋಡುತ್ತೇವೆ.
ನಾವು ಸಹ ಪಾಪವೆಂಬ ಸಮಾಧಿಯಲ್ಲಿ ಪರಿತಪಿಸುವಾಗ ಯೇಸುಸ್ವಾಮಿಯು ತಮ್ಮ ಕರಗಳನ್ನು ಚಾಚಿ ನಮ್ಮನ್ನೂ ಸಹ ಹೊರಬರುವಂತೆ ಕರೆ ನೀಡುತ್ತಾರೆ. ಲೌಕಿಕ ಆಶಾಪಾಶಗಳಿಗೆ ಸಿಲುಕಿರುವ ನಾವು ಪಾಪಕೂಪವೆಂಬ ಸಮಾಧಿಯಲ್ಲಿ ಬಂಧನಕ್ಕಿಡಾಗಿದ್ದೇವೆ. ಯೇಸುಸ್ವಾಮಿಯ ಪುನರುತ್ಥಾನ ನಮ್ಮೆಲ್ಲರಿಗೂ ಇಂತಹ ಗುಲಾಮಗಿರಿಯಿಂದ ಬಿಡುಗಡೆ ನೀಡುತ್ತದೆ. 

ಪ್ರಿಯರೇ 'ನಾವೆಲ್ಲ್ಲಾರು ಪುನರುತ್ಥಾನದ ಜನರು; ಅಲ್ಲೆಲೂಯ ನಮ್ಮ ಗೀತೆ' ಆಗಿರಬೇಕೆಂದು ಹೇಳುವ ಸಂತ ಜೌನ್‌ಪೌಲ್‌ರ ಮಾತಿನಂತೆ ಪ್ರಭುವಿನ ಪುನರುತ್ಥಾನದಲ್ಲಿ ಭರವಸೆ ಇಟ್ಟು ಶುಭಸಂದೇಶದ ಜೀವಿಗಳಾಗಿ ಜೀವಿಸೋಣ.
----------
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment