Saturday, 14 March 2020

ತಪಸ್ಸು ಕಾಲದ ಮೂರನೆಯ ಬುಧವಾರ

ಮಾರ್ಚ್ 18, 2020 ಬುಧವಾರ                   [ನೇರಳೆ]
ಜೆರುಸಲೇಮಿನ ಸಂತ ಸಿರಿಲ್ [ಧರ್ಮಾಧ್ಯಕ್ಷ/ಧರ್ಮಪಂಡಿತ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಧರ್ಮೋ 4.1, 5-9
ಕೀರ್ತನೆ 147: 12, 13. 15-16. 19-20
ಜೆರುಸಲೇಮೇ, ಕೀರ್ತಿಸು ಪ್ರಭುವನು
ಶುಭಸಂದೇಶ: ಮತ್ತಾಯ 5.17-19
---------------------------
ಮೊದಲ ವಾಚನಧರ್ಮೋ 4.1, 5-9
1 : “ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು.
5 : “ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.
6 : ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ‘ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ ಜನಾಂಗ’, ಎಂದು ಮಾತಾಡಿಕೊಳ್ಳುವರು.
7 : ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸವಿೂಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸವಿೂಪವಾಗಿರುತ್ತಾರೆ?
8 : ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆಯಾವ ಜನಾಂಗಕ್ಕೆ ಉಂಟು?
9 : “ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿ ಇಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ.
----------------------------
ಕೀರ್ತನೆ 147: 12, 13. 15-16. 19-20
ಜೆರುಸಲೇಮೇಕೀರ್ತಿಸು ಪ್ರಭುವನು
12 : ಜೆರುಸಲೇಮೇ, ಕೀರ್ತಿಸು ಪ್ರಭುವನು / ಸಿಯೋನೇ, ಸ್ತುತಿಸು ನಿನ್ನ ದೇವರನು
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ / ನೀಡುವನು ನಿನಗೆ ಅತ್ಯುತ್ತಮ ಗೋದಿ
15 : ಕಳಿಸುವನು ಧರೆಗೆ ತನ್ನ ಆಣತಿ / ಸಿದ್ಧಿಯಾಗುವುದದು ಬಲು ಶೀಘ್ರದಿ
16 : ಸುರಿಸುವನು ಹಿಮವನು ಉಣ್ಣೆಯಂತೆ / ಹರಡುವನು ಇಬ್ಬನಿಯನು ಬೂದಿಯಂತೆ
17 : ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ / ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ
18 : ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ / ಹರಿಯುವುದು ನೀರು ಆತ ಕಳುಹಿಸುವ ಗಾಳಿಗೆ
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ / ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ / ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ /
---------------------------------
ಶುಭಸಂದೇಶಮತ್ತಾಯ 5.17-19
17 : "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ.
18 : ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
19 : ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ವಿೂರುವವನು, ವಿೂರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.
---------------------------
ಚಿಂತನೆ
ನಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಆಜ್ಞೆಗಳನ್ನು ನಾವು ಪಾಲಿಸಿಯೇ ತೀರುತ್ತೇವೆ, ಮಕ್ಕಳಾಗಿದ್ದಾಗ ತಂದೆ-ತಾಯಿಯಗಳ ಆಜ್ಞೆಗಳನ್ನು, ಶಾಲೆಯಲ್ಲಿ ಶಿಕ್ಷಕರ ಆಜ್ಞೆಗಳನ್ನು,, ಬೆಳೆದು ದೊಡ್ಡವರಾದಾಗ ಕಚೇರಿಯ ಅಥವ ನಮಗೆ ನೌಕರಿ ಕೊಟ್ಟಿರುವ ಸoಸ್ಥೆಗಳ ಆಜ್ಞೆಗಳನ್ನು, ಹೀಗೆ ಆಜ್ಞೆಗಳನ್ನು, ಪಾಲಿಸುವುದಕ್ಕೆ ನಾವೂ ಒಗ್ಗಿಕೊಂಡು ಬಿಟ್ಟಿದ್ದೇವೆ. ಇವೆಲ್ಲ ನಮ್ಮ ಜೀವನದಲ್ಲಿ ಶಿಸ್ತು ಮೂಡಿಸುವ ಆಯಾಮಗಳು. ಆದರೆ ಇಂದಿನ ವಾಚನಗಳು ನಮ್ಮ ಭೂಲೋಕದ ಜೀವನದಲ್ಲಿ ಮಾತ್ರವಲ್ಲ, ಈ ಲೋಕದ ಪಯಣ ಮುಗಿದ ನಂತರ ಮತ್ತೊಂದು ಲೋಕವನ್ನು ಪ್ರವೇಶಿಸಲು ಪಾಲಿಸ ಬೇಕಾದ ದೇವರ ಆಜ್ಞೆಗಳ ಬಗ್ಗೆ ಮಾತನಾಡುತ್ತದೆ. ಶುಭಸಂದೇಶದಲ್ಲಿ ಪ್ರಭು ಕ್ರಿಸ್ತರು ‘ನಾನು ಬಂದದ್ದು ಮೋಶೆಯ ಧರ್ಮಶಾಸ್ಥ್ರವನ್ನು ಸಿದ್ಧಿಗೆ ತರಲು' ಎಂದು ಹೇಳುತ್ತಾರೆ. ಈಗಾಗಲೆ ಕ್ರಿಸ್ತರು ಬಂದದ್ದಾಗಿದೆ, ಪರರನ್ನು ಪ್ರೀತಿಸೆoಬ ಮಾಹಾದಾಜ್ಞೆಯನ್ನು ನೀಡಾಗಿದೆ. ಈ ನಿಟ್ಟಿನಲ್ಲಿ ಸ್ವರ್ಗ  ಸಾಮ್ರಾಜ್ಯದ ಭಾಗ್ಯಸ್ತರಾಗಲು ಈ ಆಜ್ಞೆಗಳನ್ನು ಕ್ರಿಸ್ತೀಯ ಜೀವನದಲ್ಲಿ ಅಳವಡಿಸಕೊಳ್ಳಬೇಕು ಹಾಗು ಪಾಲಿಸಬೇಕು. ನಶಿಸಿಹೋಗುವ ಈ ಲೋಕದ ಆಜ್ಞೆಗಳನ್ನು ಪಾಲೀಸಬೇಕಾದರೆ, ಸ್ವರ್ಗಲೋಕಕ್ಕೋಯ್ಯೂವ ಆಜ್ಞೆಗಳನ್ನು ನಾವೆಷ್ಟು ಮುತುವರ್ಜಿಯಿಂದ ಪಾಲಿಸಬೇಕೇಂಬುದನ್ನು ನಾವು ಅರಿತುಕೊಳ್ಳಬೇಕು.
-------------------
ದೇವರ ಕಟ್ಟಳೆಗಳಿಗೆ ನಿಜವಾದ ಒಳ ಅರ್ಥವನ್ನು ನೀಡಲು ಯೇಸು ಪ್ರಯತ್ನಿಸಿದರು. ಮೋಶೆಯ ಕಟ್ಟಳೆಗಳನ್ನು ರದ್ದು ಮಾಡಲು ಅಲ್ಲ ಸಿದ್ಧಿಗೆ ತರಲು ಬಂದಿದ್ದೇನೆ ಎಂದಾಗ ಬಹುಶ: ಅನೇಕರಿಗೆ ಹಾಸ್ಯಾಸ್ಪದವಾಗಿ ಕಾಣಬಹುದು. ಕಾರಣ ಅನೇಕ ಬಾರಿ ಫರಿಸಾಯರು ಯೇಸುವನ್ನು ಖಂಡಿಸಿದ್ದು ಕಾನೂನು ಬಾಹಿರ ಕೆಲಸಗಳನ್ನು ಮಾಡಿದ್ದಕ್ಕೆ. ಆದರೆ ಯೇಸು ಆ ಕಾನೂನಿನ ಹಿಂದಿರುವ ಉದ್ದೇಶವನ್ನು ಅರ್ಥೈಸಲು ಪ್ರಯತ್ನಿಸುತ್ತಿದ್ದರು. ಆದರೆ ಯೆಹೂದ್ಯರು ಕಾನೂನನ್ನು ಪಾಲಿಸುವವನು ಮಾತ್ರ ದೇವರ ಪ್ರೀತಿ ಪಾತ್ರನು ಎಂದು ತಿಳಿದಿದ್ದರು. ಆದರೆ ಯೇಸು ಕಾನೂನಲ್ಲಿ ಪ್ರೀತಿಯೊಂದೇ ದೇವರು ಬಯಸುವುದು ಎಂದು ಸ್ಪಷ್ಠಿಕರಿಸುತ್ತಾರೆ. ಯೇಸು ದೇವರಿಂದ ಬಂದವರಾಗಿದ್ದರಿಂದ ದೇವರ ಸಂಕಲ್ಪವನ್ನು ಮಾನವರಿಗೆ ಮನದಟ್ಟು ಮಾಡಿದರು. ಪರಿಸಾಯರು ಮತ್ತು ಸದ್ದುಕಾಯರು ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಯೊವಾನ್ನ 1:18ರಲ್ಲಿ ತಿಳಿಸುವಂತೆ ಯೇಸು ಮಾತ್ರ ನಿಜದೇವರನ್ನು ಅರಿತಿರುವವರು ಹಾಗೂ ಅವರೇ ಪಿತನ ಏಕೈಕ ಪುತ್ರ.
----------------------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment