ಚಿಂತನೆ
“ದುಡಿದು, ಭಾರಹೊತ್ತು, ಬಳಲಿ, ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ.
ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ, ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ
ನೊಗ ಹಗುರ, ನನ್ನ ಹೊರೆ ಸುಗಮ”.
ಪೀಠಿಕೆ:
ಈ ಸಾಧಾರಣಕಾಲದ 14ನೆಯ ಭಾನುವಾರದಂದು, ಯೇಸುವಿನ ದೀನತೆ ಮತ್ತು ವಿನಯಶೀಲತೆ
ಗುಣಗಳ ಕುರಿತು ಚಿಂತಿಸಲು ಧರ್ಮಸಭೆ ಕರೆನೀಡುತ್ತದೆ. ದೀನತೆ ಮತ್ತು ವಿನಯಶೀಲತೆ, ಈ ಅವಳಿ ಸದ್ಗುಣಗಳು ನಮ್ಮ ಕ್ರಿಸ್ತೀಯ
ಪ್ರಯಾಣಕ್ಕೆ ಬಹಳ ಅವಶ್ಯಕ. ನಮ್ಮ ಜೀವನದಲ್ಲಿ ನಾವು ಎಷ್ಟು ಎತ್ತರಕ್ಕೆ ಬೆಳೆದಿದ್ದೀವಿ ಎಂಬುದು
ಮುಖ್ಯವಲ್ಲ, ದೀನತೆ ಮತ್ತು ವಿನಯಶೀಲತೆಯಿಂದ ಜೀವನ ನಡೆಸುವುದು ಮುಖ್ಯ. ಇಂತಹ ಜೀವನಕ್ಕೆ ಯೇಸು ನಮ್ಮ
ಆದರ್ಶ ಮತ್ತು ಸ್ಫೂರ್ತಿಯಾಗಿದ್ದಾರೆ. ಸ್ವರ್ಗ ಮತ್ತು ಭುವಿಯ ಸೃಷ್ಟಿಕರ್ತ ಮತ್ತು
ಒಡೆಯನಾಗಿದ್ದರೂ ಕ್ರಿಸ್ತ ತಮ್ಮನ್ನು ತಾವೇ ತಗ್ಗಿಸಿಕೊಂಡು ಸಾಧಾರಣ ವ್ಯಕ್ತಿಯಾಗಿ ಜೀವಿಸಲು
ಆರಿಸಿಕೊಂಡರು. ಅದರಿಂದ ಇಂದು ಪ್ರಭುಯೇಸು ತನ್ನಿಂದ ಕಲಿತುಕೊಳ್ಳಲು ಕರೆನೀಡುತ್ತಾರೆ. “ ದುಡಿದು, ಭಾರಹೊತ್ತು, ಬಳಲಿ, ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ.
ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ, ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ
ನೊಗ ಹಗುರ, ನನ್ನ ಹೊರೆ ಸುಗಮ”.
ಜೆಕರ್ಯ 9.9-10
ಮೊದಲನೆಯ ವಾಚನ ಬರಲಿರುವ ಕ್ರಿಸ್ತರಾಜನ ದೀನತೆಯನ್ನು ಮುನ್ಸೂಚಿಸುತ್ತದೆ.
ಈ ವಾಚನ ದೀನದಲಿತರಿಗೆ, ಬಡವರಿಗೆ ಭರವಸೆಯನ್ನು ಉಂಟುಮಾಡುತ್ತದೆ; “ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ.....ಇಗೋ, ಬರುತಿಹನು ನಿಮ್ಮ ಅರಸನು, ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು”.
ಸಹಜವಾಗಿ, ಅವರು ಇಸ್ರಯೇಲರ ಬಡ ಮತ್ತು ತುಳಿತಕ್ಕೊಳಗಾದವರಿಗೆ ಸಹಾಯ ಮತ್ತು ನ್ಯಾಯವನ್ನು ನೀಡಲು
ಬರುತ್ತಾರೆ. ಹಾಗೂ ದೇವ ಜನರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಲು, ಪ್ರವಾದಿ ದೈವಪ್ರೇರಿತರಾಗಿ ದೇವರ ವಿಶೇಷ
ದಯೆಯ ಬಗ್ಗೆ ಇನ್ನೂ ಗಮನ ಸೆಳೆವ ಉದಾಹರಣೆಯನ್ನು ಘೋಷಿಸುತ್ತಾರೆ, ಅದೇನೆಂದರೆ, ಬರಲಿರುವ ಮೆಸ್ಸೀಯ ಅಥವಾ ಅರಸ. ಇದರ
ಬಗ್ಗೆ ಹೊಸ ಒಡಂಬಡಿಕೆಯ ಎರಡು ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ (ಮತ್ತಾಯ 21:5, ಯೊವಾನ್ನ 12:15).
ರೋಮನರಿಗೆ 8.9, 11-13
ಎರಡನೆಯ ವಾಚನದಲ್ಲಿ ಸಂತ ಪೌಲನು ದೇವರಾತ್ಮ ಜೊತೆ ಬದುಕುವ
ಅಗತ್ಯವನ್ನು ನೆನಪಿಸುತ್ತಾರೆ. ಏಕೆಂದರೆ ಆತ್ಮವು ದೀನತೆ ಮತ್ತು ವಿನಯವನ್ನು ಬೆಳೆಸುತ್ತದೆ, ಶರೀರವಾದರೂ ಅದಕ್ಕೆ ವಿರುದ್ಧವಾಗಿ
ಅಹಂಕಾರ ಮತ್ತು ಎಲ್ಲ ರೀತಿಯ ಲೌಕಿಕತೆಯನ್ನು ವೃದ್ದಿಸುತ್ತದೆ. ದೇವರಾತ್ಮ ಮತ್ತು ದುರಾತ್ಮ ಎರಡು
ನಮ್ಮಲ್ಲಿ ನೆಲೆಸಿರುತ್ತವೆ. ನಾವು ಯಾವುದನ್ನು ಅಧಿಕವಾಗಿ ಪ್ರೋಷಿಸುತ್ತೇವೋ
ಕೊನೆಯಲ್ಲಿ ಅದು ಪಡೆಯುವುದು ಗೆಲುವು. ಅದರಿಂದ
ಶರೀರ ಸ್ವಭಾವದ ಅನುಸಾರವಾಗಿ ಬಾಳದೆ, ದೇವರ ಆತ್ಮದ ನೆರವಿನಿಂದ ಜೀವಿಸಲು ಸಂತ ಪೌಲರು
ಕರೆನೀಡುತ್ತಾರೆ.
ಶುಭಸಂದೇಶದಲ್ಲಿ ಯೇಸು, ದೇವರ ಹೃದಯದ ಕೀಲಿಯನ್ನು ಬಹಿರಂಗಪಡಿಸಿ
ನಮಗೆ ನೀಡುತ್ತಾರೆ. ಈ ಮಾಸ್ಟರ್ ಕೀಲಿಯಿಂದ ದೇವರ ಅಂತರಂಗಕ್ಕೆ ನಾವು ಹೋಗಬಲ್ಲೆವು. ದೀನತೆ
ಮತ್ತು ವಿನಯ ಆ ಕೀಲಿಯ ಹೆಸರು. ದೇವರ ಸಾಮ್ರಾಜ್ಯ ರಹಸ್ಯಗಳನ್ನು ಜ್ಞಾನಿ-ಮೇಧಾವಿಗಳಿಂದ ಮರೆಮಾಡಿ
ಚಿಕ್ಕ ಮಕ್ಕಳಂಥವರಿಗೆ ಅವುಗಳನ್ನು ತಿಳಿಯಪಡಿಸಲಾಗಿದೆ ಎಂದು ಯೇಸು ಘೋಷಿಸುತ್ತಾರೆ. ಯೇಸು ತಮ್ಮ
ಕಾಯಕದಲ್ಲೆ ಅತೀವ ವಿರೋಧ ಮತ್ತು ನಿರಾಕರಣೆಯನ್ನು ವಿಶೇಷವಾಗಿ ಪ್ರಬುದ್ದರೆಂದನಿಸಿದ ಶಾಸ್ತ್ರಿಗಳ
ಮತ್ತು ಫರಿಸಾಯರಿಂದ ಎದುರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಡವರು, ಅನ್ಯಜನರು, ಅಶುದ್ದರು, ಸುಂಕವಸೂಲಿ ಮಾಡುವವರು ಮತ್ತು ಪಾಪಿಗಳು
ಅವರ ಸಂದೇಶವನ್ನು ಅತಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು. ದೇವರು ಇತಿಹಾಸದುದಕ್ಕೂ ತಮ್ಮ
ಮಾರ್ಗದಲ್ಲಿ ನಡೆಯಲೂ, ನಡೆಸಲೂ ದುರ್ಬಲ, ದೀನ, ತಿರಸ್ಕಾರಕೊಳ್ಳಪಟ್ಟವರನ್ನು ಆರಿಸಿಕೊಂಡಿದ್ದಾರೆ.
ಅಧಿಕಾರ, ಸಂಪತ್ತು, ಹೆಸರು, ಪ್ರತಿಷ್ಟೆ, ಯಶಸ್ಸು ಇವುಗಳನ್ನು ಅರಸುವಂತವರನ್ನು ಹಿಂಬಾಲಿಸದೆ, ನಿಸ್ವಾರ್ಥ, ದೀನತೆ, ವಿನಯ ಇವುಗಳ ಮಾರ್ಗವನ್ನು ತೋರಿದ
ಯೇಸುವನ್ನು ಹಿಂಬಾಲಿಸಲು ನಮಗೆ ಬೇಕಾದ ಧೈರ್ಯಕ್ಕಾಗಿ ಪ್ರಾರ್ಥಿಸೋಣ. ಆಮೆನ್!
ಫಾದರ್ ಪ್ರತಾಪ್ ಚಂದ್ರು ಯೇ.ಸ
---------------------------
@ದನಿ ಮಾಧ್ಯಮ ಮನೆ
No comments:
Post a Comment