ಡಿಸೆಂಬರ್ 25, 2020 ಶುಕ್ರವಾರ [ಬಿಳಿ]
ಕ್ರಿಸ್ತಜಯಂತಿಯ ಮಹೋತ್ಸವ
ಹಗಲಿನ ಪೂಜೆ
ಮೊದಲ ವಾಚನ: ಯೆಶಾಯ 52:7-10
ಕೀರ್ತನೆ 98:1-6. ಶ್ಲೋಕ.3
ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ
ನಮ್ಮ ದೇವ ಸಾಧಿಸಿದ ಜಯಗಳಿಕೆ
ಎರಡನೇ ವಾಚನ: ಹಿಬ್ರಿ 1:1-6
ಶುಭಸಂದೇಶ: ಯೊವಾನ್ನ 1:1-18 (ಸಂಕ್ಷಿಪ್ತ) ಯೊವಾನ್ನ 1:1-5, 9-14
=================="
ಮೊದಲನೇ ವಾಚನ
ಯೆಶಾಯ 52:7-10
7 : ಶುಭಕರ ಸಮಾಚಾರವನು ತರುವ ಶಾಂತಿಸಮಾಧಾನವನು ಸಾರುವ ಸಂತಸದ ಸಂದೇಶವನು ಅರುಹುವ ಜೀವೋದ್ಧಾರವನು ಪ್ರಕಟಿಸುವ ‘ನಿನ್ನ ದೇವರೇ ರಾಜ್ಯಭಾರ ವಹಿಸುವ’ ಎಂದು ಸಿಯೋನಿಗೆ ತಿಳಿಯಪಡಿಸುತ್ತ ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಮಗಳು ಎಷ್ಟೊಂದು ಸುಂದರ !
8 : ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು: ಸರ್ವೇಶ್ವರ ಸಿಯೋನಿಗೆ ಮರಳಿ ಬರುತ್ತಿರುವುದನು ಕಣ್ಣಾರೆ ಕಂಡು ಕೂಡಿಹಾಡುತ್ತಿಹರು ಗೀತವನು.
9 : ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ. ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು.
10 : ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.
===================
ಕೀರ್ತನೆ
ಕೀರ್ತನೆ 98:1-6. ಶ್ಲೋಕ.3
ಶ್ಲೋಕ: ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ
ನಮ್ಮ ದೇವ ಸಾಧಿಸಿದ ಜಯಗಳಿಕೆ||
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು /
ಎಸಗಿಹನಾತನು ಪವಾಡಕಾರ್ಯಗಳನು /
ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು /
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ /
ನಮ್ಮ ದೇವ ಸಾಧಿಸಿದ ಜಯಗಳಿಕೆ //
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು /
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ /
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ /
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು, ತುತೂರಿಯನು /
ಉದ್ಘೋಷಿಸಿರಿ ಪ್ರಭು ರಾಜನನು //
===================
ಎರಡನೇ ವಾಚನ
ಹಿಬ್ರಿ 1:1-6
1 : ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು.
2 : ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.
3 : ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿರುವವರೂ ಇವರೇ.
4 : ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರು ವಾಸಿಯಾದಾತ.
5 : ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ?
6 : ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ: “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ,” ಎಂದಿದ್ದಾರೆ.
==========
ಶುಭಸಂದೇಶ
ಯೊವಾನ್ನ 1:1-18
1 : ಜಗತ್ತು ಉಂಟಾಗುವ ಮೊದಲೇ ‘ದಿವ್ಯವಾಣಿ’ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು;
2 : ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು.
3 : ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ.
4 : ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು.
5 : ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ.
6 : ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ.
7 : ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು.
8 : ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
9 : ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಯೋತಿ ಅವರೇ.
10 : ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆ ಹೋಯಿತು.
11 : ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆ ಹೋದರು.
12 : ಕೆಲವರಾದರೋ ಅವರನ್ನು ಬರಮಾಡಿ ಕೊಂಡರು. ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸ ಇಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು.
13 : ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ, ಶಾರೀರಕ ಇಚ್ಛೆಯಿಂದ ಅಲ್ಲ, ಮಾನವಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು.
14 : ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು. ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.
15 : ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ, “ ‘ಅವರು ನನ್ನ ಬಳಿಕ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದ್ದು ಅವರನ್ನು ಕುರಿತೇ,” ಎಂದು ಘೋಷಿಸಿದನು.
16 : ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ.
17 : ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸುಕ್ರಿಸ್ತರ ಮುಖಾಂತರ ಬಂದವು.
18 : ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಳದಲ್ಲಿರುವ, ಸ್ವತಃ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.
===================
ಚಿಂತನೆ
ಕ್ರಿಸ್ಮಸ್ ಬಂದಿದೆ, ಸಂತಸ ತಂದಿದೆ. ಇಂದು ಕ್ರಿಸ್ಮಸ್ ಹಬ್ಬವು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಈಡೀ ವಿಶ್ವದ ಹಬ್ಬವಾಗಿದೆ. ಕ್ರಿಸ್ಮಸ್ ಇಂತಹ ವಿಶೇಷ ಸ್ಥಾನ ಪಡೆದಿರುವುದು ಕ್ರಿಸ್ತನಿಂದಲೇ ಮತ್ತು ಆತ ನೀಡಿದ ಸಂದೇಶದಿಂದಲೇ. ದೇವರ ಮತ್ತು ಮಾನವರ ನಡುವಿನ ಕಡಿದು ಹೋದ ಸಂಬಂಧ ಮತ್ತೆ ಬೆಸೆಯಲು ಕ್ರಿಸ್ತ ಪುಟ್ಟ ಕಂದನಾಗಿ ಬರಬೇಕಾಯಿತು. ದೇವರು ಈ ಲೋಕವನ್ನು ಎಷ್ಟು ಪ್ರೀತಿಸಿದರೆಂದರೆ ತನ್ನ ಏಕೈಕ ಪುತ್ರನನ್ನೇ ಧಾರೆಯೆರೆದರು (ಯೊವಾನ್ನ 3:15). ದೇವರು ತಮ್ಮ ಅಸ್ತಿತ್ವವನ್ನು ಪೂರ್ವಕಾಲದಲ್ಲಿ ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಪ್ರವಾದಿಗಳ ಮುಖಾಂತರ ತಿಳಿಯ ಪಡಿಸಿದರು. ಆದರೆ ಕಾಲವು ಪರಿಪಕ್ವವಾದಾಗ ತಮ್ಮ ಅಸ್ತಿತ್ವವನ್ನು, ಪ್ರೀತಿಯನ್ನು ತನ್ನ ಸ್ವಂತ ಮಗನನ್ನೇ ಕಳುಹಿಸುವುದರ ಮೂಲಕ ತೋರ್ಪಡಿಸಿದರು. ಮನುಷ್ಯ ದೇವರಾಗಲು ದೇವರು ಮನುಷ್ಯರಾದ ದಿನವೇ ಕ್ರಿಸ್ತ ಜಯಂತಿ.
ನೂರಾರು ಸಮಸ್ಯೆಗಳು ನಮ್ಮನ್ನು ಹಗಲಿರುಳು ಕಾಡುತ್ತದೆ. ನಮ್ಮ ಬದುಕು ಗೊಂದಲಗಳ ಸಮಸ್ಯೆಗಳ ಗೂಡಾಗಿದೆ. ಅಭದ್ರತೆಯಿಂದ, ಯುದ್ದ ಬೀತಿಯಿಂದ, ಭಯೋತ್ಪಾದನೆಯಿಂದ, ಮಾರಕವ್ಯಾಧಿಯಿಂದ ಜೀವನ ತತ್ತರಿಸಿ ಹೋಗಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಆತ್ಮಹತ್ಯೆ, ಭ್ರೂಣಹತ್ಯೆ, ಲಂಪಟತನ, ಕೋಮುವಾದ, ಮೋಸ, ವಂಚನೆ, ಅನ್ಯಾಯ, ಅನೀತಿ, ತಾಂಡವವಾಡುತ್ತದೆ. ಇಂತಹ ಸಮಾಜಕ್ಕೆ ನಾವು ಹೇಗೆ ಕ್ರಿಸ್ತನನ್ನು ಕೊಡಬಹುದು. ಕ್ರಿಸ್ತ ಹೇಗೆ ಸಂತ್ರಸ್ತರ, ನೊಂದವರ, ಶೋಷಿತರ, ದೀನದಲಿತರ ನೋವನ್ನು ಅಳಿಸಿ, ಧರ್ಮ, ಸತ್ಯ ಸಮಾನತೆ ಮೆರೆದರೋ ಆ ಕಾರ್ಯ ಇಂದು ನಮ್ಮಿಂದಾಗಬೇಕಿದೆ. ನಾವು ಮತ್ತೋರ್ವ ಕ್ರಿಸ್ತನಾಗಬೇಕಿದೆ.
===================
No comments:
Post a Comment