ಬಿಳಿ/ ಸೋಮ / ಪಾಸ್ಖ ಕಾಲದ ಐದನೇ ವಾರ
ಐಚ್ಛಿಕ ಸ್ಮರಣೆ - ಸಿಯೆನ್ನದ ಸಂತ ಬೆರ್ನಾಡಿನ್ (ಯಾ)
1ನೇ ವಾಚನ - ಪ್ರೇ.ಕಾ: 14: 5-18
5 : ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಹಾಗೂ ಅವರ ಮೇಲೆ ಕಲ್ಲು ತೂರಲು ಪ್ರಯತ್ನಿಸಿದರು.
6 : ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು.
7 : ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು.
8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದ. ಅವನೊಬ್ಬ ಹುಟ್ಟುಕುಂಟ. ಎಂದೂ ಕಾಲೂರಿ ನಡೆದವನಲ್ಲ.
9 : ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ,
10 : “ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,” ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು.
11 : ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. “ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ,” ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿತು.
12 : ಆ ಜನರು ಬಾರ್ನಬನನ್ನು ‘ಜೆಯುಸ್’ ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನು ‘ಹೆರ್ಮೆ’ ದೇವರೆಂದೂ ಕರೆಯಲಾರಂಭಿಸಿದರು.
13 : ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.
14 : ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿ ಹೇಳಿದರು:
15 : “ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು.
16 : ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು.
17 : ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.”
18 : ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.
ಕೀರ್ತನೆ - 115: 1-4, 15-16
ನಮಗಲ್ಲ ಹೇ ಪ್ರಭು. ನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ
ನಮಗಲ್ಲ ಹೇ ಪ್ರಭು. ನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ
1 : ನಮಗಲ್ಲ ಹೇ ಪ್ರಭು. ನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ / ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ //
2 : ಅನ್ಯ ಜನರು ನುಡಿಯುವುದೆಂತು: / “ಅವರ ದೇವರೆಲ್ಲಿ?” ಎಂದು //
3 : ಪರದಲ್ಲಿಹನು ನಮ್ಮ ದೇವನು / ಗೈವನು ತನಗಿಷ್ಟ ಬಂದುದನು //
15 : ಇಹಪರಗಳನು ಉಂಟುಮಾಡಿದ ಪ್ರಭುವಿಂದ / ಲಭಿಸುವಂತಾಗಲಿ ನಿಮಗೆ ಆಶೀರ್ವಾದ //
16 : ಪ್ರಭುವಿಗೆ ಸ್ವಂತವಾದುದು ಪರಲೋಕ / ನರರಿಗೆ ಕೊಟ್ಟಿಹನಾತನು ಭೂಲೋಕ //
ಶುಭಸಂದೇಶ - ಯೊವಾನ್ನ 14: 21-26
21 : ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿ ಕೊಡುವೆನು.”
22 : ಆಗ ಯೂದನು, (ಈತ ಇಸ್ಕರಿಯೋತಿನ ಯೂದನಲ್ಲ) “ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?” ಎಂದು ಕೇಳಿದನು.
23 : ಆಗ ಯೇಸು, “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು.
24 : ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ.
25 : ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
26 : ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.
ಚಿಂತನೆ
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಬ್ಬ ಸಂತ ಮತ್ತು ಒಬ್ಬ ಸೈತಾನ ಇರುತ್ತಾನೆ. ಜೀವನದ ಪ್ರತಿ ಹಂತದಲ್ಲೂ ಪ್ರತಿಕ್ಷಣದಲ್ಲೂ ಈ ಸಂತ ಮತ್ತು ಸೈತಾನನ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಒಳ್ಳೆಯತನ ಜಾಸ್ತಿ ಇದ್ದು ಅದು ಜಯ ಸಾಧಿಸಿದರೆ ನಮ್ಮಲ್ಲಿರುವ ಸಂತ ಗೆಲ್ಲುತ್ತಾನೆ. ಕೆಟ್ಟತನ ಜಾಸ್ತಿ ಇದ್ದು ಅದು ಜಯ ಸಾಧಿಸಿದರೆ ನಮ್ಮಲ್ಲಿರುವ ಸೈತಾನ ಗೆಲ್ಲುತ್ತಾನೆ. ಕ್ರೈಸ್ತ
ಧರ್ಮದ ವಿಶ್ವಾಸ - ಪ್ರತಿಯೊಂದು ಒಳ್ಳೆಯ ಕಾರ್ಯ ಮಾಡುವವನು ಪವಿತ್ರಾತ್ಮಭರಿತನಾಗಿ ಇರುತ್ತಾನೆ ಎಂದು. ನಾವು ಸೂಕ್ಷ್ಮವಾಗಿ ಪ್ರತಿಯೊಬ್ಬ ಸಂತರ ಜೀವನವನ್ನು ಅವಲೋಕಿಸಿದರೆ ನಮಗೆ ಪವಿತ್ರಾತ್ಮರ ಹೆಜ್ಜೆಗಳನ್ನು ಕಂಡುಹಿಡಿಯಬಹುದಾಗಿದೆ. ಈ ಒಳ್ಳೆಯತನ ಮತ್ತು ಒಳ್ಳೆಯತನಕ್ಕೆ ಬೇಕಾದ ಧೈರ್ಯ ತುಂಬಲು ಒಬ್ಬ ಪೋಷಕರ ಕುರಿತು ಇಂದು ತಮ್ಮ ಶಿಷ್ಯರಿಗೆ ಯೇಸುಸ್ವಾಮಿ ತಿಳಿಸುತ್ತಾರೆ. ಸ್ವಾಮಿ ಹೇಳಿದ್ದನ್ನೆಲ್ಲಾ ನೆನಪಿಟ್ಟು ಅದರಂತೆ ಅವರು ನಡೆಯಲು ಬರೀ ಮಾನವಶಕ್ತಿಯಿಂದ
ಸಾಲದು ಎಂದು ಅರಿತು ಪ್ರಭು ಶಿಷ್ಯರಿಗೆ ತಾವು ಬೋಧಿಸಿದ£Éßಲ್ಲಾ ನೆನಪಿನಲ್ಲಿಟ್ಟು
ಕೊಳ್ಳಲು ಪೋಷಕ ಪವಿತ್ರಾತ್ಮರನ್ನು ನೀಡುತ್ತಿದ್ದಾರೆ. ಇಂತಹ ಶಕ್ತಿಶಾಲಿ ಪವಿತ್ರಾತ್ಮರು ನಮ್ಮ ಜೀವ ಮತ್ತು ಜೀವನದಲ್ಲಿ ನೆಲೆಸಲಿ ಎಂಬ ಪ್ರಾರ್ಥನೆ ನಮ್ಮದಾಗಲಿ.
ಆತ್ಮಾವಲೋಕನ –
1) ನನ್ನ ಜೀವನದ ಸಂಘರ್ಷದಲ್ಲಿ ಯಾರು ಗೆಲ್ಲುವುದು ?ನನ್ನಲ್ಲಿರುವ ಸಂತನೋ? ಸೈತಾನನೋ?
2) ನನ್ನಲ್ಲಿ ಪವಿತ್ರಾತ್ಮನ ವಾಸವಾಗಿದೆಯೇ?
- ಸಹೋ ವಿನಯ್ ಕುಮಾರ್
No comments:
Post a Comment