Friday, 27 September 2019

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಬುಧವಾರ

2/ಬಿಳಿ/ಬುಧ/ಸಂರಕ್ಷರ ದೂತರ(ಸ್ಮರಣೆ)
1ನೇ ವಾಚನ - ವಿಮೋ: 23: 2೦-23
ಕೀರ್ತನೆ - 91: 1-6, 1೦-11 
ಶುಭಸಂದೇಶ - ಮತ್ತಾಯ 18: 1-5, 1೦-11


1ನೇ ವಾಚನ - ವಿಮೋ: 23: 2೦-23
“ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳಿಸುತ್ತೇನೆ. ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ ಆತ ನಿಮ್ಮನ್ನು ಕ್ಷಮಿಸಲಾರನು. ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು. ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲಮಾಡುವೆನು.

ಕೀರ್ತನೆ - 91: 1-6, 1೦-11
 1 : ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು / ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
2 : ನಾನಾತನಿಗೆ, ‘ನೀನೇ ನನ್ನ ರಕ್ಷಕನೂ / ದುರ್ಗವೂ ನಾ ನಂಬಿದ ದೇವನು’ ಎನ್ನುವೆನು //
3 : ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ / ರಕ್ಷಿಸುವನು ಮಾರಕವಾದ ವ್ಯಾಧಿಯಿಂದ //
4 : ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ / ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲಿ / ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ //
5 : ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ / ಹಗಲಿನಲಿ ಹಾರಿಬರುವ ಬಿರುಸು ಬಾಣಕೆ //
6 : ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ / ನಡುಹಗಲಲೆ ಪೀಡಿಸುವ ಜಾಡ್ಯಕೆ //
10 : ಹಾನಿಯೊಂದೂ ನಿನಗೆ ಸಂಭವಿಸದು / ಕೆಡಕು ನಿನ್ನ ಗುಡಾರದ ಬಳಿ ಸುಳಿಯದು //
11 : ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ / ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ //

ಶುಭಸಂದೇಶ - ಮತ್ತಾಯ 18: 1-5, 1೦-11
ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ." "ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ.


ಚಿಂತನೆ
ಸ್ಮರಣೆ: ಸಂರಕ್ಷಕ ದೂತರು
ಹೀಬ್ರೂ ಭಾಷೆಯಲ್ಲಿ `ಮಲಾಕ್’ ಎಂದರೆ ಸಂದೇಶಕ, ಸಂದೇಶ ರವಾನೆ ಮಾಡುವವ ಎಂದರ್ಥ. ದೇವದೂತರ ಪ್ರಮುಖ ಕಾರ್ಯ ರಕ್ಷಣೆ, ಮಾರ್ಗದರ್ಶನ ಮತ್ತು ದೇವರ ಸಂದೇಶ ಹೊತ್ತು ತರುವುದು. ಪ್ರಮುಖವಾದ, ಮಹತ್ವವಾದ ಸಂದೇಶವನ್ನು ಹೊತ್ತು ತರುವವರು ಪ್ರಧಾನ ದೂತರು. ಅಷ್ಟು ಮಹತ್ವವಲ್ಲದ ವಿಷಯಗಳನ್ನು ರವಾನೆ ಮಾಡುವವರು ದೂತರು. ಸಂರಕ್ಷಕ ದೂತರ ಸ್ಮರಣೆಯನ್ನು ಸ್ಪೇನ್ ದೇಶದ ವಾಲೆನ್ಸಿಯಾದಲ್ಲಿ ಕ್ರಿ.ಶ. ೧೪೧೧ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ೧೬೦೮ರಲ್ಲಿ ಜಗದ್ಗುರು ಐದನೇ ಪೌಲರು ಈ ಹಬ್ಬವನ್ನು ಕಥೋಲಿಕ ಪಂಚಾಂಗದಲ್ಲಿ ಸೇರಿಸಿ, ಅಕ್ಟೋಬರ್ ೨ರಂದು ಹಬ್ಬ ಆಚರಿಸಲು ಕರೆನೀಡುತ್ತಾರೆ. ನಮ್ಮ ಜನನದಿಂದಲೇ ದೇವರು ನಮ್ಮ ರಕ್ಷಣೆಗಾಗಿ , ಮಾರ್ಗದರ್ಶನಕ್ಕಾಗಿ ಪ್ರತಿಯೊಬ್ಬರಿಗೂ ಒಬ್ಬ ಸಂರಕ್ಷಕ ದೂತರನ್ನು ನೀಡಿದ್ದಾರೆ. ನಮ್ಮ ಪ್ರಾರ್ಥನೆಗಳನ್ನು ಅವರು ದೇವರಿಗೆ ತಲುಪಿಸುತ್ತಾರೆ ಮತ್ತು ದೇವರಿಂದ ಅನುಗ್ರಹವನ್ನು ನಮಗೆ ಹೊತ್ತು ತರುತ್ತಾರೆ. ದಿನನಿತ್ಯ ಅವರಲ್ಲಿ ನಾವು ಪ್ರಾರ್ಥಿಸಬೇಕಿದೆ.

No comments:

Post a Comment