Wednesday, 30 October 2019

ಸಾಧಾರಣ ಕಾಲದ ಮೂವತ್ತೊಂದನೇ ವಾರ ಮಂಗಳವಾರ

5/ಹಸಿರು/ಮಂಗಳ 
1ನೇ ವಾಚನ - ರೋಮ 12: 5-16 
ಕೀರ್ತನೆ - 131: 1, 2, 3 
ಶುಭಸಂದೇಶ - ಲೂಕ 14: 15-24


1ನೇ ವಾಚನ - ರೋಮ 12: 5-16
ಅಂತೆಯೇ, ನಾವು ಅನೇಕ ಮಂದಿ ಇದ್ದರೂ ಕ್ರಿಸ್ತಯೇಸುವಿನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ಒಬ್ಬರಿಗೊಬ್ಬರು ದೇಹದ ವಿವಿಧ ಅಂಗಗಳಂತೆ ಹೊಂದಿಕೊಂಡಿದ್ದೇವೆ. ದೇವರು ಅನುಗ್ರಹಿಸಿರುವ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ನಾವು ಹೊಂದಿರುವ ವರವು ಪ್ರವಾದನೆಯ ವರವಾಗಿದ್ದರೆ ನಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಬೇಕು. ಸೇವಕನು ಸೇವೆಯಲ್ಲಿಯೂ ಬೋಧಕನು ಬೋಧಿಸುವುದರಲ್ಲಿಯೂ ಉಪದೇಶಕನು ಉಪದೇಶಿಸುವುದರಲ್ಲಿಯೂ ನಿರತನಾಗಿರಲಿ. ದಾನಮಾಡುವವನು ಧಾರಾಳವಾಗಿ ದಾನ ಮಾಡಲಿ. ಅಧಿಕಾರ ನಡೆಸುವವನು ನಿಷ್ಠೆಯಿಂದ ನಡೆಸಲಿ. ಕರುಣಾಪೂರಿತ ಕಾರ್ಯಗಳನ್ನು ಕೈಗೊಳ್ಳುವವನು ಹರ್ಷಚಿತ್ತನಾಗಿರಲಿ. ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸಹೋದರ ಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿ ಸತ್ಕಾರದಲ್ಲಿ ತತ್ಪರರಾಗಿರಿ. ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮ ನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ.

ಕೀರ್ತನೆ - 131: 1, 2, 3 
1 : ಹಮ್ಮಿಲ್ಲ ಪ್ರಭು, ನನ್ನೆದೆಯೊಳು / ನನಗಿಲ್ಲ ಸೊಕ್ಕಿನ ಕಣ್ಣುಗಳು // ಶಕ್ತಿವಿೂರಿದ ಕಾರ್ಯಕೆ ನಾ ಕೈ ಹಾಕಿಲ್ಲ / ಅಸಾಧ್ಯವಾದುದನು ನಾ ಕೈಗೊಂಡಿಲ್ಲ
2 : ಎಂದೇ ನನ್ನಾತ್ಮ ಸಮಾಧಾನದಿಂದಿದೆ / ಮೌನದಿಂದಿದೆ ತಾಯ್ಮಡಿಲಾ ಕೂಸಂತೆ / ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ
3 : ಇಸ್ರಯೇಲೆ, ಪ್ರಭುವಿನಲಿ ನಂಬಿಕೆಯಿಂದಿರು / ಇಂದಿಗೂ ಎಂದೆಂದಿಗೂ ಭರವಸೆಯಿಂದಿರು // ಸನಾತನ ರಾಜವೈಭವದ ಪುನಃಸ್ಥಾಪನೆ

ಶುಭಸಂದೇಶ - ಲೂಕ 14: 15-24
ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸುಸ್ವಾಮಿ ಹೇಳಿದ್ದನ್ನು ಕೇಳಿ, “ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು!” ಎಂದನು. ಯೇಸು ಅವನಿಗೆ ಈ ಸಾಮತಿ ಹೇಳಿದರು: “ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ. ಊಟಕ್ಕೆ ವೇಳೆಯಾದಾಗ, ‘ಈಗ ಎಲ್ಲಾ ಸಿದ್ಧವಾಗಿದೆ ಬನ್ನಿ,’ ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕನನ್ನು ಕಳಿಸಿದ. ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು ‘ಕ್ಷಮಿಸಬೇಕು,’ ಎಂದು ಹೇಳಲಾರಂಭಿಸಿದರು. ಒಬ್ಬ, ‘ಕ್ಷಮಿಸಬೇಕು, ಒಂದು ಹೊಲ ಕೊಂಡು ಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ,’ ಎಂದ. ಇನ್ನೊಬ್ಬ, ‘ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು,’ ಎಂದ. ಮತ್ತೊಬ್ಬ, ‘ನನಗೆ ಈಗ ತಾನೆ ಮದುವೆ ಆಗಿದೆ, ಬರುವುದಕ್ಕಾಗುವುದಿಲ್ಲ,’ ಎಂದನು. “ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ. ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, ‘ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ,’ ಎಂದು ಆಜ್ಞೆಮಾಡಿದ. ಸೇವಕನು ಬಂದು, ‘ಸ್ವಾವಿೂ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ,’ ಎಂದು ಹೇಳಿದ. ಅದಕ್ಕೆ ಯಜಮಾನ ‘ಹಾಗಾದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯ ಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ. ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!’ ಎಂದು ಸ್ಪಷ್ಟಪಡಿಸಿದ.”
ಚಿಂತನೆ
ಯೆಹೂದ್ಯರಲ್ಲಿ ನಾವು `ದೇವರ ಸ್ವಂತ ಜನರು, ದೇವರಿಂದ ಆಯ್ಕೆಯಾದವರು, ಅಬ್ರಹಾಮನ ವಂಶಸ್ಥರು, ಸ್ವರ್ಗ ಸಾಮ್ರಾಜ್ಯ ನಮ್ಮ ಆಸ್ತಿ' ಎಂಬ ಧೋರಣೆಯಿತ್ತು. ಯೇಸು ಇಂದಿನ ಶುಭಸಂದೇಶದಲ್ಲಿ ಯೆಹೂದ್ಯರಿಗೆ ಮತ್ತು ಜೆರುಸಲೇಮ್ ನಗರಕ್ಕೆ ಬರುವ ದುರ್ಗತಿಯನ್ನು ಪ್ರವಾದಿಸುತ್ತಾರೆ. 

ದೇವರು ತಮ್ಮ ಪುತ್ರ ಯೇಸುವಿನ ಮುಖಾಂತರ ಸರ್ವರಿಗೂ ಸ್ವರ್ಗ ಸಾಮ್ರಾಜ್ಯದ ಔತಣಕ್ಕೆ ಆಹ್ವಾನವನ್ನು ಕೊಟ್ಟರು. ಸ್ವರ್ಗ ಸಾಮ್ರಾಜ್ಯಕ್ಕೆ ದೇವರು ಕೊಡುವ ಆಮಂತ್ರಣ ಒಂದು ವರದಾನ. ದೇವರು ತಮ್ಮ ಸಾಮ್ರಾಜ್ಯವನ್ನು ಸೇರಲು ಜಾತಿ, ಮತ, ಬಣ್ಣ, ಭಾಷೆಯನ್ನು ನೋಡದೆ ಸರ್ವರಿಗೂ ಆಹ್ವಾನವಿತ್ತಿದ್ದಾರೆ. ಆಮಂತ್ರಣವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಮಾನವರಿಗೆ ಬಿಟ್ಟಿದ್ದಾರೆ. ಆಮಂತ್ರಣವನ್ನು ಸ್ವೀಕರಿಸುವವರು ಆ ಸಾಮ್ರಾಜ್ಯದ ರೀತಿನೀತಿಗೆ ವಿಧೇಯರಾಗಿ ನಡೆದು ಕೊಂಡರೆ ಮಾತ್ರ ಆ ಸಾಮ್ರಾಜ್ಯಕ್ಕೆ ಪ್ರವೇಶ.

No comments:

Post a Comment