13/ಹಸಿರು/ಬುಧ
1ನೇ ವಾಚನ - ಸುಜ್ಞಾನ 6: 2-11
ಕೀರ್ತನೆ - 82: 3-4, 6-7
ಶುಭಸಂದೇಶ - ಲೂಕ 17: 11-19
1ನೇ ವಾಚನ - ಸುಜ್ಞಾನ 6: 2-11
ಬಹುಜನಗಳ ಮೇಲೆ ದೊರೆತನ ಮಾಡುವವರೇ, ಆಲಿಸಿ ಅನೇಕ ರಾಷ್ಟ್ರಗಳ ಮೇಲೆ ಹೆಚ್ಚಳಪಡುವವರೇ, ಕಿವಿಗೊಡಿ: ನಿಮಗೆ ಒಡೆತನ ದೊರೆತದ್ದು ಸರ್ವೇಶ್ವರನಿಂದ ನಿಮ್ಮ ಪ್ರಭುತ್ವ ಬಂದುದು ಆ ಮಹೋನ್ನತನಿಂದ. ನಿಮ್ಮ ಕಾರ್ಯಗಳನ್ನು ಶೋಧಿಸುವವನು ಆತನೆ ನಿಮ್ಮ ಸಂಕಲ್ಪಗಳನ್ನು ಪರಿಶೀಲಿಸುವವನು ಆತನೆ. ಆತನ ರಾಜ್ಯದ ರಾಯಭಾರಿಗಳು ನೀವೆಲ್ಲ: ಸರಿಯಾಗಿ ನೀವು ನ್ಯಾಯತೀರಿಸಲಿಲ್ಲ ಆತನ ಆಜ್ಞೆಗಳನ್ನು ಪರಿಪಾಲಿಸಲಿಲ್ಲ ಆ ದೇವರ ಸಂಕಲ್ಪದಂತೆ ನಡೆದುಕೊಳ್ಳಲಿಲ್ಲ. ಆತ ನಿಮ್ಮ ಮೇಲೆರಗುವನು ತ್ವರೆಯಾಗಿ, ಭೀಕರವಾಗಿ ಉನ್ನತಸ್ಥಾನದಲ್ಲಿರುವ ನಿಮಗೆ ತೀರ್ಪಿಡುವನು ಕ್ರೂರವಾಗಿ. ದೀನರಿಗೆ ದಯಾಪೂರಿತ ಕ್ಷಮೆ ದೊರಕಬಹುದು ಬಲಾಢ್ಯರಿಗಾದರೋ ಕಠಿಣಪರೀಕ್ಷೆ ಕಾದಿರುವುದು. ಸರ್ವರಿಗೂ ದೊರೆಯಾದ ಸರ್ವೇಶ್ವರ ಮುಖದಾಕ್ಷಿಣ್ಯ ತೋರುವವನಲ್ಲ ದೊಡ್ಡಸ್ತಿಕೆಯನ್ನು ಗಮನಿಸುವವನಲ್ಲ. ಹಿರಿದುಕಿರಿದುಗಳೆರಡನ್ನು ಮಾಡಿದಾತ ಎಲ್ಲರನ್ನು ಸಮನಾಗಿ ನೋಡಿಕೊಳ್ಳಬಲ್ಲ. ಆದರೂ ಬಲವಂತರಿಗಾಗುವ ಪರೀಕ್ಷೆ ಇರುವುದು ಕಠಿಣತರವಾಗಿಯೇ. ಎಂದೇ ಅರಸುಕುವರರೇ, ನನ್ನೀ ಬೋಧನೆಗಳೆಲ್ಲ ನಿಮಗಾಗಿಯೇ; ಸುಜ್ಞಾನಿಗಳಾಗಿ, ನೀವು ಸನ್ಮಾರ್ಗ ಬಿಡಬಾರದೆಂದೇ ಇದ ನುಡಿದಿರುವೆ. ಶುದ್ಧಾಚಾರಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಪರಿಶುದ್ಧರಾಗುವರು ಅವುಗಳಲ್ಲಿ ಸುಶಿಕ್ಷಿತರಾದವರು ಸರಿಯಾಗಿ ಉತ್ತರಿಸಬಲ್ಲರು. ಆದುದರಿಂದ ನನ್ನೀ ನುಡಿಗಳನು ಬಯಸಿರಿ, ಅವುಗಳಿಗಾಗಿ ಹಂಬಲಿಸಿರಿ; ಆಗ ಸುರಕ್ಷಿತರಾಗುವಿರಿ.
ಕೀರ್ತನೆ - 82: 3-4, 6-7
2 : “ಎಲ್ಲಿಯತನಕ ನೀಡುವಿರಿ ಅನ್ಯಾಯವಾದ ತೀರ್ಪನು? / ಎಲ್ಲಿಯವರೆಗೆ ತೋರುವಿರಿ ದುಷ್ಟರಿಗೆ ಪಕ್ಷಪಾತವನು?//
3 : ಅಬಲರಿಗೆ, ಅನಾಥರಿಗೆ ದೊರಕಿಸಿರಿ ನ್ಯಾಯವನು / ಕಾದಿರಿಸಿರಿ ದೀನದಲಿತರ ಹಕ್ಕು ಬಾಧ್ಯತೆಯನು //
4 : ಬಿಡುಗಡೆಮಾಡಿರಿ ದೀನ ಬಡಬಗ್ಗರನು / ದುರುಳರ ಕೈಯಿಂದ ರಕ್ಷಿಸಿರಿ ಅವರನು //
6 : ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ /
7 : ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” //
ಶುಭಸಂದೇಶ - ಲೂಕ 17: 11-19
ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಠರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, ‘ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,’ ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, “ಹತ್ತುಮಂದಿ ಗುಣ ಹೊಂದಿದರಲ್ಲವೆ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?” ಎಂದರು. ಅನಂತರ ಆ ಸಮಾರಿಯದವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು.
ಚಿಂತನೆ
ಕುಷ್ಟರೋಗದಿಂದ ಗುಣಹೊಂದಿದ ಸಮಾರಿಯದವನು ಯೇಸುವಿಗೆ ವಂದನೆ ಸಲ್ಲಿಸಲು ಹಿಂದಿರುಗಿದ ಯೆಹೂದ್ಯರು ಸಮಾರಿಯದವರನ್ನು ದ್ವೇಷಿಸುತ್ತಿದ್ದರು ಹಾಗೂ ಅವರೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ಕ್ರಿ.ಪೂ ೭೨೨ ಅಸ್ಸೀರಿಯದವರು ಸಮಾರಿಯದ ಮೇಲೆ ದಂಡೆತ್ತಿ ಬರುತ್ತಾರೆ. ಸಮಾರಿಯದವರನ್ನು ಸೋಲಿಸಿ ಅಲ್ಲಿ ತಮ್ಮ ಆಡಳಿತ ಪ್ರಾರಂಭಿಸುತ್ತಾರೆ. ಸಮಾರಿಯದವರು ಈ ಅನ್ಯ ರಾಷ್ಟ್ರಗಳೊಂದಿಗೆ ಸಂಬಂಧವಿರಿಸಿಕೊಂಡು, ಅವರೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಯೆಹೂದ್ಯರು ಸಮಾರಿಯದವರನ್ನು ಧರ್ಮ ಭ್ರಷ್ಟರೆಂದು ಪರಿಗಣಿಸಿದ್ದರು. ಜೆರುಸಲೇಮಿಗೆ ಹೋಗುವಾಗಲೂ ಸಮಾರಿಯದ ಮೂಲಕ ಹೋಗದೆ ಬೇರೆ ಮಾರ್ಗವಾಗಿ ಹೋಗುತ್ತಿದ್ದರು. ಸಮಾರಿಯದವರು ಕೂಡ ಯೆಹೂದ್ಯರನ್ನು ದ್ವೇಷಿಸುತ್ತಿದ್ದರು. ಜೆರುಸಲೇಮ್ ದೇವಾಲಯಕ್ಕೆ ಹೋಗದೆ ಗೆರಿಜ಼ಿಮ್ ಬೆಟ್ಟದ ಮೇಲೆ ದೇವಾಲಯ ಕಟ್ಟಿಕೊಂಡಿದ್ದರು. ಆದರೆ ಯೇಸು ಸಮಾರಿಯದವರನ್ನು ದ್ವೇಷಿಸದೆ ಅವನನ್ನು ಗುಣಪಡಿಸಿದರು. ತಾನು ಬಂದದ್ದು ಕಳೆದುಹೋದ ಕುರಿಗಳನ್ನು ಹುಡುಕಿಕೊಂಡು ಹಾಗೂ ಅವುಗಳ ರಕ್ಷಣೆಗಾಗಿ ಎಂಬುದನ್ನು ತಿಳಿಸುತ್ತಾರೆ.
No comments:
Post a Comment