Sunday, 16 February 2020

ಸಾಧಾರಣ ಕಾಲದ ಆರನೆಯ ಮಂಗಳವಾರ

ಫೆಬ್ರವರಿ 18, 2020/ ಮಂಗಳವಾರ 

ಪವಿತ್ರ ವಾಚನ: ಯಕೋಬ 1: 12-18 
ಕೀರ್ತನೆ : 94:12-13,14-15,18-19
ಶುಭಸಂದೇಶ: ಮಾರ್ಕ 8 : 14-21
ಸ್ಮರಣೆ: ಕುರಿಯಾಕೋಸ್ ಎಲಿಯಾಸ್ ಚಾವರ, ಯಾಜಕ
--------------------------------
ಪವಿತ್ರ ವಾಚನ: ಯಕೋಬ 1: 12-18 
12 : ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ.
13 : ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ.
14 : ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ.
15 : ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ.
16 : ಪ್ರಿಯ ಸಹೋದರರೇ, ಮೋಸಹೋಗಬೇಡಿ.
17 : ಎಲ್ಲಾ ಯೋಗ್ಯ ವರಗಳೂ ಉತ್ತಮಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ.
18 : ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.
--------------------------
ಕೀರ್ತನೆ : 94:12-13,14-15,18-19
12 : ಪ್ರಭು, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ / ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ //
13 : ನೆಮ್ಮದಿ ನೀಡುವೆ ಅವನು ಸಂಕಟದಲಿರುವಾಗ / ದುರುಳರಿಗೆ ನೀನು ಗುಂಡಿಯನು ತೋಡುವಾಗ //
14 : ತಳ್ಳಿಬಿಡಲು ಪ್ರಭು ತನ್ನ ಜನರನು / ಕೈಬಿಡನವನು ತನ್ನ ಸ್ವಕೀಯರನು //
15 : ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ / ನೇರಮನಸ್ಕರೆಲ್ಲ ಮಾಡುವರು ಅದನು ಸಮರ್ಥ //
16 : ದುರುಳರಿಗೆದುರಾಗಿ ನನ್ನ ಪಕ್ಷ ವಹಿಸುವರಾರು? / ಕೆಡುಕರಿಗೆ ವಿರುದ್ಧ ನನ್ನ ಪರ ನಿಲ್ಲುವವರಾರು? //
17 : ನನಗಿಲ್ಲದಿದ್ದರೆ ಪ್ರಭುವಿನ ಮರುಕ / ಮನೆಯಾಗುತ್ತಿತ್ತೆನಗೆ ಅಧೋಲೋಕ //
18 : ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ / ನಿನ್ನ ಅಚಲಪ್ರೀತಿ, ಪ್ರಭು ನೆರವಾಯಿತೆನಗೆ //
19 : ನನ್ನ ಅಂತರಂಗದಲಿ ಏಳಲು ಆಂದೋಲನ / ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ //
-------------------------------
ಶುಭಸಂದೇಶ: ಮಾರ್ಕ 8 : 14-21
14 : ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು.
15 : ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು.
16 : ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು.
17 : ಆ ಚರ್ಚೆಯನ್ನು ಯೇಸು ಗಮನಿಸಿ “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ?
18 : ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?
19 : ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು.
20 : “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು.
21 : ಆಗ ಯೇಸು, “ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು.
------------------------------
ಚಿಂತನೆ
ಪ್ರಲೋಭನೆಗಳು ಸರ್ವೇ ಸಾಮಾನ್ಯ ಹಾಗೆಯೇ ಅವುಗಳನ್ನು ಜಯಿಸುವುದು ಸಹ ಅತೀ ಕಷ್ಟಕರ. ಈ ಪ್ರಪಂಚದಲ್ಲಿ ಹುಟ್ಟಿ ಬೆಳೆಯುವ ಪ್ರತಿಯೊಬ್ಬ ಮಾನವನು ಒಂದಲ್ಲ ಒಂದು ರೀತಿಯಲ್ಲಿ ಪ್ರಲೋಭನೆಗಳಿಗೆ ಸಿಲುಕಿ, ನಲುಗಿ, ನರಳಾಡಿ, ಕೊನೆಯಲ್ಲಿ ಪಾಪವೆಂಬ ಹೊರೆಯನ್ನು ಹೊತ್ತು, ಜಯಿಸಲಾಗದೆ ಕೊನೆಯುಸಿರೆಳೆಯುವುದನ್ನು ಕಾಣುತ್ತೇವೆ. ಯೇಸುವಿನೊಡನೆ ಇದ್ದರೂ ಸಹ ಶಿಷ್ಯರಿಗೆ ಅವರನ್ನು ಗ್ರಹಿಸಿಕೊಳ್ಳಲಾಗಲಿಲ್ಲ. ಹಾಗೆಯೇ ಪ್ರಭುವಿನ ವಾಕ್ಯ ಆಲಿಸುವ ನಾವು ಬಲಿಪೂಜೆಗಳಲ್ಲಿ, ಸಂಸ್ಕಾರಗಳಲ್ಲಿ ಭಾಗವಹಿಸಿದರೂ ಸಂಸ್ಕಾರವಂತರಾಗಿ ಜೀವಿಸದೆ, ಇನ್ನೂ ಅಯೋಗ್ಯತೆಯನ್ನು ಧರಿಸಿಕೊಂಡು, ಯೋಗ್ಯವಂತರೆಂದು ಬಿಂಬಿಸುತ್ತಾ, ಜೀವಿಸುತ್ತಿದ್ದೇವೆ. ಪ್ರತಿಯೊಬ್ಬರ ಬಾಳಲ್ಲಿ ಪ್ರಲೋಭನೆಗಳನ್ನು ಜಯಿಸಲು ತಾಳ್ಮೆ, ಪ್ರಾರ್ಥನೆ, ತ್ಯಾಗ, ಪರಿಶ್ರಮ ಅತ್ಯವಶ್ಯಕ.
----------------------------------
ಇಂದಿನ ಸಂತರು

ಕುರಿಯಾಕೋಸ್ ಎಲಿಯಾಸ್ ಚಾವರ, ಯಾಜಕ
ಭಾರತ ದೇಶದಲ್ಲಿ ’ದೇವರ ಸ್ವಂತ ನಾಡು’ ಎಂದು ಪ್ರಖ್ಯಾತಿ ಪಡೆದಿರುವ ಕೇರಳದಲ್ಲಿ 18೦5ರಲ್ಲಿ ಜನಿಸಿದ ಇವರು ವರ್ಷಗಳು ಉರುಳಿದಂತೆ ದೈವಭಕ್ತಿಯಲ್ಲಿ ಪ್ರವರ್ಧಿಸುತ್ತ ಸಿಎಮ್ಐ ಧಾರ್ಮಿಕ ಸಭೆಯನ್ನು ಸೇರಿದರು. ಈ ಧಾರ್ಮಿಕ ಸಂಸ್ಥೆ ಸಿರೋ ಮಲಬಾರ್ ಧರ್ಮಸಭೆಯ ಆಧ್ಯಾತ್ಮಿಕ ನವೀಕರಣಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ದೈವವಾಕ್ಯವನ್ನು ಆಳವಾಗಿ ಅರಿತುಕೊಂಡು, ಜನರೆಲ್ಲರಿಗೆ ಭೋಧಿಸುತ್ತ ಅವರಲ್ಲಿ ದೈವವಾಕ್ಯದ ಭಕ್ತಿಯನ್ನು ಹೆಚ್ಚಿಸುವಲ್ಲಿ ಅವಿರತ ಶ್ರಮಿಸಿದರು. ಕುಟುಂಬಗಳನ್ನು ಕಟ್ಟುವುದರ ಮುಖಾಂತರ ಧೃಡವಾದ ಕ್ರೈಸ್ತ ಸಮುದಾಯವನ್ನು ನಿರ್ಮಿಸಲು ಸಾಧ್ಯ ಎಂಬ ಸತ್ಯವನ್ನು ಮನಗಂಡ ಈ ಸಂತರು ಆ ಒಂದು ವಿಶೇಷ ಕಾರ್ಯಕ್ಕಾಗಿ ತಮ್ಮ ಸಾಕಷ್ಟು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಮಹತ್ವ ನೀಡಿದ ಸಂತ ಚಾವರ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದರು. ದೇವರ ಅನಂತ ಆಶೀರ್ವಾದದಿಂದ ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದು ದೈವಿಕ ಚಿಂತನೆಯನ್ನು ಎಲ್ಲೆಡೆ ಪಸರಿಸಲು ಯಶಸ್ವಿಯಾದರು. ಅವರ ಮಾದರಿ ಕ್ರೈಸ್ತ ಜೀವನದಿಂದ ನಮ್ಮ ಬದುಕಲ್ಲೂ ಬದಲಾವಣೆಯ ಹೊಸ ಗಾಳಿ ಬೀಸಲಿ.
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment