Friday, 6 March 2020

ತಪಸ್ಸು ಕಾಲದ ಎರಡನೆಯ ಬುಧವಾರ

ಮಾರ್ಚ್ 11, 2020 ಬುಧವಾರ [ನೇರಳೆ]
ಮೊದಲ ವಾಚನ: ಯೆರೆಮೀಯ 18.18-20
ಕೀರ್ತನೆ 31:4-5, 13, 14-15 ಶ್ಲೋಕ.16
ಪ್ರಭೂ, ಕಾಪಾಡಲಿ ಎನ್ನನು ನಿನ್ನ ಅನಂತ ಪ್ರೇಮವು
ಶುಭಸಂದೇಶ: ಮತ್ತಾಯ 20.17-28
---------------------
ಮೊದಲ ವಾಚನ: ಯೆರೆಮೀಯ 18.18-20
18 : ಆಗ ಜನರು, “ಬನ್ನಿ, ಈ ಯೆರೆವಿೂಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.
19 : ಯೆರೆವಿೂಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.
20 : ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.
------------
ಕೀರ್ತನೆ 31:5-6, 14, 15-16 ಶ್ಲೋಕ.16
ಪ್ರಭೂ, ಕಾಪಾಡಲಿ ಎನ್ನನು ನಿನ್ನ ಅನಂತ ಪ್ರೇಮವು
5 : ನನಗಾಧಾರ ನೀನಲ್ಲವೆ? ನನ್ನಾತ್ಮವನು ನಿನಗೊಪ್ಪಿಸಿರುವೆ / ನಂಬಿಕಸ್ತನಾದ ದೇವನೆ, ನೀಯೆನ್ನ ಮುಕ್ತಗೊಳಿಸಿರುವೆ//
6 : ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ / ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ //
14 : ನಾನಾದರೋ ಪ್ರಭೂ, ನಿನ್ನಲೆ ಭರವಸೆಯಿಟ್ಟಿರುವೆ / ನೀನೆ ನನ್ನ ದೇವರೆಂದು ಪ್ರಭು ಸಾರುವೆ //
15 : ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ / ಬೆನ್ನಟ್ಟಿಬರುವ ವೈರಿಯಿಂದ ರಕ್ಷಿಸೆನ್ನ //
16 : ಬೆಳಗಿಸಲಿ ದಾಸನನು ನಿನ್ನ ಮುಖತೇಜವು / ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು //
---------------------------
ಶುಭಸಂದೇಶ: ಮತ್ತಾಯ 20.17-28
17 : ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು,
18 : “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು.
19 : ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು, ಕೊರಡೆಗಳಿಂದ ಹೊಡೆಯುವರು, ಮತ್ತು ಶಿಲುಬೆಗೇರಿಸುವರು. ಆತನಾದರೋ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದರು. ಆಳಾಗಬಲ್ಲವ ಅರಸಾಗಬಲ್ಲ (ಮಾರ್ಕ 10.35-35)
20 : ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. “ತಮ್ಮಿಂದ ನನಗೊಂದು ಉಪಕಾರ ಆಗಬೇಕು,” ಎಂದು ಸ್ವಾಮಿಯ ಪಾದಕ್ಕೆರಗಿದಳು.
21 : “ನಿನ್ನ ಕೋರಿಕೆ ಏನು?” ಎಂದರು ಯೇಸು. ಅದಕ್ಕೆ ಅವಳು, “ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು,” ಎಂದು ಕೋರಿದಳು.
22 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು.
23 : ಆಗ ಯೇಸು, “ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು.
24 : ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
25 : ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, “ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ.
26 : ಇದು ನಿಮಗೆ ಗೊತ್ತು. ನೀವು ಹಾಗಿರಬಾರದು.
27 : ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ.
28 : ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಹೇಳಿದರು.
------------------
ಚಿಂತನೆ 
ಯೇಸುಸ್ವಾಮಿ 3ನೇ ಬಾರಿ ತಮ್ಮ ಮರಣದ ಬಗ್ಗೆ ಮತ್ತು ಕೊನೆ ಗಳಿಗೆಯ ಕ್ಷಣಗಳನ್ನು ತಿಳಿಸುತ್ತಾರೆ. ಶಿಷ್ಯರು ಯೇಸುವಿನ ಜೊತೆ ಮೂರು ವರ್ಷ ಕಳೆದಿದ್ದರೂ ಅವರನ್ನು ಸಂಪೂರ್ಣವಾಗಿ ಗ್ರಹಿಸಲು ವಿಫಲರಾಗಿದ್ದರು. ಅವರು ಸ್ಥಾಪಿಸಲಿಚ್ಚಿಸಿದ ಸಾಮ್ರಾಜ್ಯವನ್ನು ಲೌಕಿಕ ಸಾಮ್ರಾಜ್ಯವೆಂದುಕೊಂಡರು. ಹಾಗಾಗಿ ಯಕೋಬ ಮತ್ತು ಯೊವಾನ್ನರ ತಾಯಿ ಸಲೋಮೆಯು ಮಕ್ಕಳಿಗಾಗಿ ಉತ್ತಮ ಸ್ಥಾನಗಳನ್ನು ಕೇಳಿಕೊಳ್ಳುತ್ತಾಳೆ. ಯೇಸುವಿನ ಮಹಿಮೆ ಪ್ರಕಟವಾಗುವುದು ಶಿಲುಬೆಯ ಮೇಲೆ ಎಂಬುದನ್ನು ಆಕೆ ಗ್ರಹಿಸಲು ಎಡವಿದ್ದಳು. ಯೇಸುವಿನ ಜನಪ್ರಿಯತೆ ತನ್ನ ಮಕ್ಕಳಿಗೂ ಸಿಗಲಿ ಎಂಬುದು ಆಕೆಯ ಆಶಯವಾಗಿತ್ತು. ಯೇಸುವಿನ ಮಹಿಮೆಯಲ್ಲಿ ಪಾಲುಗಾರರಾಗಬೇಕಾದರೆ ಅವರಂತೆ ಶಿಲುಬೆ ಹೊರಲು ಸಿದ್ದರಿರಬೇಕು. ಯೇಸುವಿನಂತೆ ಸೇವೆ ಮಾಡುವ ಮನೋಭಾವವಿರಬೇಕು. ಲೌಕಿಕವಾದವುಗಳನ್ನು ತ್ಯಜಿಸಿ ಆಧ್ಯಾತ್ಮಿಕದ ಕಡೆಗೆ ಗುರಿ ನೆಟ್ಟಿರಬೇಕು.
-----------------
ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ಎಲ್ಲರ ಸೇವಕನಾಗಿರಲಿ......
ಯೇಸು ಪ್ರಪಂಚದ ಮೌಲ್ಯ ವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡುತ್ತಾರೆ. ಅವರು ಒಬ್ಬ ವ್ಯಕ್ತಿಯ ಮಹತ್ವವನ್ನು ಪ್ರಪಂಚದಿಂದ ವಿಭಿನ್ನವಾಗಿ ಅಳೆಯುತ್ತಾರೆ. ಪ್ರಪಂಚವು ಒಬ್ಬ ವ್ಯಕ್ತಿಯ ಶ್ರೇಷ್ಠತೆಯನ್ನು ತಾನು ಹೊಂದಿರುವ ಅಧಿಕಾರ, ಪದವಿ, ಹಣ, ಹಾಗೂ ಎಷ್ಟು ಮಂದಿಯನ್ನು ಅವನ ಅಧೀನದಲ್ಲಿದ್ದಾರೆ ಎಂಬ ಸಂಖ್ಯೆಯಿಂದ ಅಳೆಯುತ್ತದೆ. ಆದರೆ ಯೇಸುವಿನ ಪರಿಗಣನೆಯಲ್ಲಿ ಒಂದೇ ಒಂದು ವಿಷಯ ಶೇಷ್ಠತೆಯನ್ನು ಅಳೆಯುತ್ತದೆ, ಅದುವೇ ಪರರ ಸೇವೆ.
ಮಂಥನ
ನಾವು ಯಾರ ಮೌಲ್ಯ ವ್ಯವಸ್ಥೆಯನ್ನುಅನುಸರಿಸುತ್ತೇವೆ?
ಕ್ರೈಸ್ತರು ದೇವಾಲಯಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಆಸ್ಪತ್ರೆಗೆ ಭೇಟಿ ನೀಡಲಿ. 
ಅವರು ಬೈಬಲ್ ಓದುವ ಮೊದಲು ಭಿಕ್ಷುಕನಿಗೆ ಸಹಾಯ ಮಾಡಲಿ - ಟೊಯೊಹಿಕೊ ಕಾಗಾವಾ  
------------------------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment