ಮಾರ್ಚ್ 26, 2020 ಗುರುವಾರ [ನೇರಳೆ]
ಮೊದಲ
ವಾಚನ: ವಿಮೋಚನಾ 32.7-14
ಕೀರ್ತನೆ
106:19-20, 21-22, 23. ಶ್ಲೋಕ.4
ಮರೆಯಬೇಡೆನ್ನನು
ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ
ಶುಭಸಂದೇಶ:
ಯೊವಾನ್ನ 5.31-47
ಮೊದಲ ವಾಚನ: ವಿಮೋಚನಾ
32.7-14
7
: ಇತ್ತ ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು. ಈಜಿಪ್ಟಿನಿಂದ ನೀನು ಕರೆದುತಂದ
ನಿನ್ನ ಜನರು ಕೆಟ್ಟುಹೋದರು.
8
: ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು
ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ
ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ
9
: “ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು.
10
: ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮಮಾಡುವೆನು.
ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು.
11
: ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ
ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ?
12
: ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು
ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲಮಾಡಬೇಕೆಂದೇ
ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು
ಬಿಟ್ಟು, ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ.
13
: ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ
ಪ್ರಮಾಣಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ
ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು
ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು.
14
: ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
ಕೀರ್ತನೆ
106:19-20, 21-22, 23. ಶ್ಲೋಕ.4
ಮರೆಯಬೇಡೆನ್ನನು ಪ್ರಭೂ,
ನಿನ್ನ ಪ್ರಜೆಗೆ ದಯೆತೋರುವಾಗ
19
: ಹೋರೇಬಿನಲಿ ಮಾಡಿದರು ಬಸವನನು / ಆರಾಧಿಸಿದರು ಆ ಎರಕದ ಶಿಲೆಯನು //
20
: ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು / ಆರಿಸಿಕೊಂಡರು ಹುಲ್ಲುತಿನ್ನುವ ಬಸವನ ವಿಗ್ರಹವನು
//
21
: ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು / ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು //
22
: ಹಾಮನಾಡಿನಲಿ ಮಾಡಿದ ಅದ್ಭುತಗಳನು / ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
23
: ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು / ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು / ಸಂಹರಿಸದಂತೆ
ಶಮನಗೊಳಿಸಿದನಾ ಕೋಪವನು //
ಶುಭಸಂದೇಶ: ಯೊವಾನ್ನ
5.31-47
31
: “ನನ್ನ ಪರವಾಗಿ ನಾನೇ ಸಾಕ್ಷಿ ನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು.
32
: ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ
ಎಂದು ನಾನು ಬಲ್ಲೆ.
33
: ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ.
34
: ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ.
35
: ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ.
36
: ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ,
ಅಂದರೆ, ಪಿತನು ನನಗೆ ಮಾಡಿ ಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ
ಸಾಕ್ಷಿಕೊಡುತ್ತವೆ.
37
: ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು
ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ.
38
: ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ.
39
: ಪವಿತ್ರ ಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ.
ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ.
40
: ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ.
41
: “ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ.
42
: ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ.
43
: ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು
ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ.
44
: ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ.
ಹೀಗಿರುವಲ್ಲಿ, ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಆಪಾದಿಸುತ್ತಿರುವೆನೆಂದು
ಎಣಿಸಬೇಡಿ.
45
: ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ.
46
: ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು
ಬರೆದುದು ನನ್ನನ್ನು ಕುರಿತೇ.
47
: ಆತನು ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?”
------------------
ಚಿಂತನೆ
ಯೇಸುಸ್ವಾಮಿ ಯೊವಾನ್ನ ಮತ್ತು ಮೋಶೆಗಿಂತಲೂ ತಾನು ಶ್ರೇಷ್ಠವಾದ ಸಾಕ್ಷಿ ಎಂದು ನುಡಿಯುತ್ತಾರೆ. ಮೋಶೆಯು `ರಕ್ಷಕನ’ ಕುರಿತು ಬರೆಯಲಾದ ವಿಷಯಗಳನ್ನು ಯೇಸು ಇಲ್ಲಿ ಪ್ರಸ್ತಾಪಿಸುತ್ತಾರೆ. ಮೋಶೆಯಲ್ಲಿ ಮತ್ತು ಪ್ರವಾದಿಗಳ ಮಾತಿನಲ್ಲಿ ಯೆಹೂದ್ಯರು ವಿಶ್ವಾಸವಿಟ್ಟಿದ್ದರೆ ಅವರು ತಮ್ಮನ್ನು ಸ್ವೀಕರಿಸಬೇಕಿತ್ತು ಎಂಬುದು ಯೇಸುವಿನ ವಾದ. ಯೇಸುವಿನ ರಕ್ಷಣಾ ಕಾರ್ಯಗಳನ್ನು, ಅದ್ಬುತಗಳನ್ನು ಗಮನಿಸಿಯೂ ಅನೇಕರು ಅವರನ್ನು ವಿಶ್ವಾಸಿಸದೇ ಹೋದರು. ನಾಲ್ಕು ಶತಮಾನಗಳಿಂದ `ರಕ್ಷಕ’ನಿಗಾಗಿ ಕಾಯುತ್ತಿದ್ದರೂ ಆತನೆ ಧರೆಗಿಳಿದು ಬಂದಾಗ ಸ್ವೀಕರಿಸದೆ ಹೋದರು. ಯೇಸು ತಮ್ಮ ಕಾರ್ಯಗಳ ಮೂಲಕ ತಾವು ಯಾರೆಂದು ಸಾಬೀತು ಪಡಿಸಿದಂತೆ ನಾವು ಸಹ ಒಳ್ಳೆಯ ಕಾರ್ಯಗಳ ಮೂಲಕ ದೇವರಿಗೆ ಸಾಕ್ಷಿಗಳಾಗಿ ಜೀವಿಸೋಣ.
-------------------
ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನ ದಾಸ್ಯದಿಂದ ಬಿಡಿಸಿ ಅವರಿಗೆ ಬೇಕಾದುದೆಲ್ಲವನ್ನು ಒದಗಿಸಿ ಕೊಡುತ್ತಿದ್ದರೂ, ಇಸ್ರಯೇಲರು ಹಠಮಾರಿಗಳಾಗಿ ಚಿನ್ನದ ಹೋರಿಕರುವನ್ನು ಅರಾಧಿಸಿದರು. ಆಗ ಸರ್ವೇಶ್ವರ ಕೋಪಗೊಂಡು ಅವರನ್ನು ನಾಶಮಾಡಬೇಕೆಂದಿದ್ದಾಗ ಮೋಶೆಯು ಆ ಜನರ ಪರವಾಗಿ ಭಿನ್ನವಿಸುತ್ತಾರೆ. ಮೋಶೆಯ ಬೇಡಿಕೆಯ ನಿಮಿತ್ತ ದೇವರ ಕೋಪ ಶಮನವಾಗಿ ಇಂದಿನ ಕೀರ್ತನೆ ಹೇಳುವಂತೆ ಇಸ್ರಯೇಲರಿಗೆ ದೇವರು ದಯೆ ತೋರುತ್ತಾರೆ. ಈ ತಪಸ್ಸುಕಾಲದಲ್ಲಿ ಈ ವಾಚನವು ನಾವು ಮನ ಪರಿವರ್ತನೆಗೊಂಡು ದೇವರೆಡೆಗೆ ತಿರುಗಲು ಕರೆನೀಡುತ್ತದೆ. ಒಳ್ಳೆಯವರು ಕೆಟ್ಟವರೆನ್ನದೆ ದೇವರು ಎಲ್ಲರ ಮೇಲೆ ಮಳೆಸುರಿಸುವರಾಗಿದ್ದಾರೆ. ದೇವರ ನಿಸ್ವಾರ್ಥ ಪ್ರೀತಿಗೆ ಹಾಗೂ ಅವರ ಕರುಣೆಗೆ ಒಳಪಡುವ ನಾವು ನಮ್ಮ ಶರೀರದ ದುರಿಚ್ಛೆಗಳನ್ನು ಕೊಡವಿ ನಮ್ಮ ಪಾಪಮಯ ಜೀವನವನ್ನು ತೊರೆದು ಶುದ್ಧ ಹೃದಯಗಳಿಂದ ದೇವರನ್ನು ಭಜಿಸಿ ಅವರ ಅಪೂರ್ವ ಪ್ರೀತಿಯ ಹಾಗೂ ಕರುಣೆಯ ಸಾಧನಗಳಾಗಿ ಈ ಜಗತ್ತಿನಲ್ಲಿ ಬೆಳಗುವವರಾಗೋಣ.
--------------
© 'ದನಿ' ಮಾಧ್ಯಮ ಮನೆ

No comments:
Post a Comment