Saturday, 21 March 2020

ತಪಸ್ಸು ಕಾಲದ ನಾಲ್ಕನೆಯ ಮಂಗಳವಾರ

ಮಾರ್ಚ್ 24, 2020 ಮಂಗಳವಾರ                         [ನೇರಳೆ]
ಮೊದಲ ವಾಚನ: ಯೆಜೆಕಿಯೇಲ 47.1-9, 12
ಕೀರ್ತನೆ 46:2-3, 5-6, 8-9, ಶ್ಲೋಕ.7
ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು,
ಯಕೋಬ ಕುಲದೇವರು ನಮಗಾಶ್ರಯ ದುರ್ಗವು
ಶುಭಸಂದೇಶ: ಯೊವಾನ್ನ 5.1-3, 5-16.
 -------------------
ಮೊದಲ ವಾಚನ: ಯೆಜೆಕಿಯೇಲ 47.1-9, 12
1 : ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು.
2 : ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು.
3 : ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ವಿೂಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು.
4 : ಅವನು ಪುನಃ ಐನೂರು ವಿೂಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ವಿೂಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು.
5 : ಅವನು ಮತ್ತೆ ಅಳೆದು ಐನೂರು ವಿೂಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು.
6 : ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
7 : ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು.
8 : ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
9 : ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
12 : ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
---------------------- 
ಕೀರ್ತನೆ 46:2-3, 5-6, 8-9, ಶ್ಲೋಕ.7
ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು,
ಯಕೋಬ ಕುಲದೇವರು ನಮಗಾಶ್ರಯ ದುರ್ಗವು
2 : ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ / ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ //
3 : ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು?/ ಅದರೊಡನೆ ಪರ್ವತಗಳು ಅಲುಗಾಡಿದರೇನು?// ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವನು ನಮಗಾಶ್ರಯ ದುರ್ಗವು //
5 : ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ / ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ //
7 : ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವರು ನಮಗಾಶ್ರಯ ದುರ್ಗವು //
6 : ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು / ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು //
8 : ಪ್ರಭುವಿನ ಕಾರ್ಯಗಳ ನೋಡಬನ್ನಿ / ಇಳೆಯೊಳಗೆಸಗಿದ ಪವಾಡಗಳನು ನೋಡಿ //
9 : ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು / ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು / ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು //
---------------------------
ಶುಭಸಂದೇಶ: ಯೊವಾನ್ನ 5:1-16
1 : ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು.
2 : ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ.
3 : ಕುರುಡರು, ಕುಂಟರು, ಪಾಶ್ರ್ವವಾಯು ಪೀಡಿತರು
5 : ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು.
6 : ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣಹೊಂದಲು ಮನಸ್ಸಿದೆಯೇ?” ಎಂದು ಕೇಳಿದರು.
7 : “ಸ್ವಾವಿೂ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದು ಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ.
8 : ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,” ಎಂದರು.
9 : ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.
10 : ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು.
11 : ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು.
12 : ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು.
13 : ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು.
14 : ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು.
15 : ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು.
16 : ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು.
-----------------
ಚಿಂತನೆ
ಯೆಹೂದ್ಯರ ಮೂರು ಪ್ರಮುಖ ಹಬ್ಬಗಳು, ಪಾಸ್ಖಹಬ್ಬ, ಪಂಚಶತ್ತಮ ಹಬ್ಬ ಹಾಗೂ ಪರ್ಣ ಕುಟೀರಗಳ ಹಬ್ಬ. ಈ ಮೂರು ಹಬ್ಬಗಳಿಗೆ ಯೆಹೂದ್ಯರು ಜೆರುಸಲೇಮಿಗೆ ಹೋಗುವುದು ವಾಡಿಕೆ, ವಾಡಿಕೆಯಂತೆ ಯೇಸು ಹಬ್ಬಕ್ಕೆ ತೆರಳುತ್ತಾರೆ. ಹಿಬ್ರೂ ಭಾಷೆಯಲ್ಲಿ `ಬೆತ್ಸಥ’ ಎಂದರೆ `ದಯೆಯ ಮನೆ’ ಅಥವಾ `ಅನುಗ್ರಹದ ಮನೆ’ ಎಂದರ್ಥ. ಆ ಸ್ಥಳ ರೋಗಿಗಳಿಂದ ತುಂಬಿ ಹೋಗಿತ್ತು. ಕಾರಣ ಅಲ್ಲಿದ್ದ ಕೊಳದಲ್ಲಿ ನೀರು ಉಕ್ಕಿದಾಗ ಯಾರು ಆ ನೀರನ್ನು ಮೊದಲು ಸ್ಪರ್ಶಿಸುತ್ತಾರೋ ಅವರು ಗುಣಮುಖರಾಗುತ್ತಿದ್ದರು. ಆತ 58ವರ್ಷದಿಂದ ಅಲ್ಲಿದ್ದರೂ ಯಾರು ಆತನನ್ನು ಪರಿಗಣಿಸಲಿಲ್ಲ. ಪ್ರತಿಯೊಬ್ಬರಿಗೂ ಅವರ ಸಮಸ್ಯೆ, ಖಾಯಿಲೆಗಳೇ ಮುಖ್ಯವಾಗಿದ್ದವು.
ಸ್ವಾರ್ಥ ಎನ್ನುವುದು ಪ್ರಾಣಿಸಹಜ ಗುಣ, ಯಾವ ಮನುಷ್ಯನು ಕೇವಲ ತನಗೋಸ್ಕರ ಇರುವನೋ ಅವನು ಬದುಕಿರುವುದು ಜೀವನವೇ ಅಲ್ಲ. ಇನ್ನೊಬ್ಬರಿಗೋಸ್ಕರ ಬದುಕಿರುವವನ ಜೀವನದಲ್ಲಿ ಸುಖ ಮನೆಮಾಡಿರುತ್ತೆ. ಯೇಸುವಿನ ನಿಸ್ವಾರ್ಥ ಬದುಕು ನಮ್ಮದಾಗಲಿ. 
-----------------------
ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಅಥವಾ ಒಳ್ಳೆಯದಕ್ಕಾಗಿ ದುಡಿಯುವಾಗ ನಮಗೆ ನಿಂದೆ ಅವಮಾನಗಳು ಕಟ್ಟಿಟ್ಟ ಬುತ್ತಿ. ಅಂತಹ ಸಂದರ್ಭದಲ್ಲಿ ನಾವು ಧೈರ್ಯಗೆಡಬಾರದು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡುತ್ತಾ ಸಾಗಬೇಕು. ಇಂದಿನ ಶುಭಸಂದೇಶದಲ್ಲಿ ಗುಣಹೊಂದುವುದಕ್ಕಾಗಿ ೩೮ ವರ್ಷಗಳಿಂದ ಕಾದು ಕುಳಿತಿದ್ದ ರೋಗಿಯನ್ನು ಯೇಸು ಗುಣಪಡಿಸುತ್ತಾರೆ. ಯೇಸು ಆ ವ್ಯಕ್ತಿಯನ್ನು ಗುಣಪಡಿಸುವುದಕ್ಕಿಂತ ಮುಂಚೆ ನಿನಗೆ ಗುಣಹೊಂದಲು ಮನಸ್ಸಿದೆಯೇ ಎಂದು ಕೇಳಿ ಅವನ ವಿಶ್ವಾಸವನ್ನು ಪರೀಕ್ಷಿಸುತ್ತಾರೆ. ಅವನ ವಿಶ್ವಾಸವನ್ನು ಅರಿತ ಯೇಸು ಬಹಳ ವರ್ಷಗಳಿಂದ ರೋಗಪೀಡಿತನಾಗಿದ್ದ ಅವನಿಗೆ ಸ್ವಾಸ್ಥ್ಯವನ್ನು ತಂದುಕೊಡುತ್ತಾರೆ. 
ಒಂದು ಕ್ಷಣ ನಮ್ಮ ಜೀವನವನ್ನು ಅವಲೋಕಿಸಿ ನೋಡೋಣ. ನಮ್ಮ ಹೃದಯಗಳು ಪ್ರಾಪಂಚಿಕ ಆಶಾಪಾಶಗಳಿಂದ ತುಂಬಿದೆಯೇ ಅಥವಾ ದೇವರಿಗೆ ಸಮರ್ಪಿತವಾಗಿದೆಯೇ? ಇಂದಿನ ಮೊದಲನೆಯ ವಾಚನದಲ್ಲಿ ನಾವು ನೋಡುವಂತೆ ಯೆಜೆಕಿಯೇಲನು, ದೇವಾಲಯದಿಂದ ಹರಿದು ಬಂದ ಜೀವಜಲವು ದೇವಾಲಯದ ಸುತ್ತಲೂ ಸಮೃದ್ದಿಪಡಿಸುವುದನ್ನು ಕಂಡನು. ಆ ಜೀವಜಲವು ನಮ್ಮಲ್ಲಿ ಹರಿಯುತ್ತದೆಯೇ? ಯೋಚಿಸಿ ನೋಡೋಣ. ದೇವಾಲಯವುಕಲ್ಲು ಮಣ್ಣುಗಳಿಂದ ಕಟ್ಟಿದ್ದರೂ ದೇವರ ವಾಕ್ಯ ಅದರಲ್ಲಿ ಜೀವಂತವಾಗಿರುವುದರಿಂದ ಅದು ಪ್ರವಾಹದಂತೆ ದೇವರ ಅನುಗ್ರಹವನ್ನು ಮತ್ತು ಅಶೀರ್ವಾದವನ್ನು ನಮ್ಮಲ್ಲಿ ಹರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡುತ್ತದೆ.
------------------------------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment