ಅಕ್ಟೋಬರ್ 12, 2020 ಸೋಮವಾರ [ಹಸಿರು]
ಮೊದಲ ವಾಚನ: ಗಲಾತ್ಯರಿಗೆ 4.22-24, 26-27, 31 - 5.1
ಕೀರ್ತನೆ 113: 1-6, 7 ಶ್ಲೋಕ.2
ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ
ಶುಭಸಂದೇಶ: ಲೂಕ 11.29-32
==================
ಮೊದಲನೇ ವಾಚನ
ಗಲಾತ್ಯರಿಗೆ 4.22-24, 26-27, 31 - 5.1
22 : ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು.
23 : ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು.
24 : ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳಿಗೆ ಸದೃಶ್ಯರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು.
26 : ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ, ಸ್ವತಂತ್ರಳು, ಈಕೆಯೇ ನಮ್ಮ ತಾಯಿ.
27 : “ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು ಪ್ರಸವ ವೇದನೆಯನರಿಯದವಳೇ, ಹರ್ಷೋದ್ಗಾರಮಾಡು ಗಂಡನುಳ್ಳವಳಿಗಿಂತ ಕೈ ಬಿಟ್ಟವಳ ಸಂತಾನ ಹೆಚ್ಚು,” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ.
31 : ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು.
5:1 :ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.
===================
ಕೀರ್ತನೆ
ಕೀರ್ತನೆ 113: 1-6, 7 ಶ್ಲೋಕ.2
ಪ್ರಭುವಿನ ಸಿರಿನಾಮವು ಇಂದಿಗೂ
ಎಂದೆಂದಿಗೂ ಪೂಜ್ಯ
1 : ಪ್ರಭುವಿನ ದಾಸರೇ,
ಸ್ತುತಿಮಾಡಿ /
ಪ್ರಭುವಿನ
ನಾಮಸ್ತುತಿಯನು ಮಾಡಿ //
2 : ಪ್ರಭುವಿನ
ಸಿರಿನಾಮವು ಪೂಜ್ಯ /
ಇಂದಿಗೂ
ಎಂದೆಂದಿಗೂ ಪೂಜ್ಯ //
3 : ಪ್ರಭುವಿನಾ
ಸಿರಿನಾಮವು ಸ್ತುತ್ಯ /
ಪೂರ್ವ ಪಶ್ಚಿಮದವರೆಗೂ
ಸ್ತುತ್ಯ //
4 : ಸಕಲ ಜಾತಿಜನಾಂಗಗಳಲಿ
ಪ್ರಭು ಶ್ರೇಷ್ಠ /
ಆತನ ಮಹಿಮೆ ಗಗನಕ್ಕಿಂತಲೂ
ಉತ್ಕೃಷ್ಟ //
5 : ನಮ್ಮ ಪ್ರಭು ದೇವನಂತೆ
ಯಾರು ಸಮರ್ಥ /
6 : ಇಹಪರಗಳನು
ವೀಕ್ಷಿಸಲಾತ ಶಕ್ತ //
7 : ದೀನರನು ಎಬ್ಬಿಸುವನು
ಧೂಳಿನಿಂದ /
ಬಡವರನು ಎತ್ತುವನು
ತಿಪ್ಪೆಯಿಂದ //
===================
ಶುಭಸಂದೇಶ
ಲೂಕ 11.29-32
29 : ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.
30 : ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.
31 : “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
32 : ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
===================
ಚಿಂತನೆ
ಯೋನ ಪ್ರವಾದಿಯು ನಿನೆವೆ ಜನರಿಗೆ ತಮ್ಮ ಪಾಪದ ಜೀವವನ್ನು ತೊರೆದು, ಮನಃಪರಿವರ್ತನೆಗೆ ಕರೆನೀಡಿದಾಗ ಆ ಜನರು ಸೂಚಕ ಕಾರ್ಯಗಳನ್ನು ಅಪೇಕ್ಷಿಸದೆ ಯೋನನ ಮಾತನ್ನು ಗಂಭೀರವಾಗಿ ಸ್ವೀಕರಿಸಿದರು. ಇಲ್ಲಿ ಗಮನಿಸಬೇಕಾದುದು ನಿನೆವೆ ಜನರು ಅನ್ಯದೇವರನ್ನು ಪೂಜಿಸುತ್ತಿದ್ದರೂ ಸರ್ವೇಶ್ವರ ಸ್ವಾಮಿಯ ಪ್ರವಾದಿಯ ಮಾತಲ್ಲಿ ವಿಶ್ವಾಸವಿರಿಸಿ ತಮ್ಮ ಬದುಕನ್ನು ಮಾರ್ಪಡಿಸಿಕೊಂಡರು.ದೇವರು ಆಯ್ದುಕೊಂಡ ಜನಾಂಗವಾದರೂ, ರಕ್ಷಕನಿಗಾಗಿ 400 ವರ್ಷಗಳಿಂದ ಕಾಯುತ್ತಿದ್ದವರು ಕೊನೆಗೆ ಬಂದ `ರಕ್ಷಕ’ನನ್ನು ತಿರಸ್ಕರಿಸಿದರು.
ದಕ್ಷಿಣ ಅರೇಬಿಯ, ಶೆಬದ ರಾಣಿ (1 ಅರಸು 10:1-13) ಸೋಲೋಮನ್ ಅರಸನ ಜ್ಞಾನೋಕ್ತಿಗಳನ್ನು ಕೇಳುವುದಕ್ಕೆ ದೂರದ ದೇಶದಿಂದ ಪ್ರಯಾಣ ಬೆಳೆಸಿದಳು. ಆದರೆ ಯಹೂದ್ಯರು ದೇವರ ಪುತ್ರನನ್ನೇ ಅರಿಯಲು ವಿಫಲರಾದರು. ಶೆಬದ ರಾಣಿ ಮತ್ತು ನಿನೆವೆ ನಗರದ ಜನರು ತೀರ್ಪಿನ ದಿನದಂದು ತನ್ನನ್ನು ತಿರಸ್ಕರಿಸಿದ ಪೀಳಿಗೆಯನ್ನು ದೂಷಿಸುವರು ಎನ್ನುತ್ತಾರೆ ಯೇಸು.
===================
No comments:
Post a Comment