ಅಕ್ಟೋಬರ್ 15, 2020 ಗುರುವಾರ [ಬಿಳಿ]
ಅವಿಲದ ಸಂತ ತೆರೇಸ, ಕನ್ಯೆ ಮತ್ತು ಧರ್ಮಸಭೆಯ ಪಂಡಿತೆ (ಸ್ಮರಣೆ)
ಮೊದಲ ವಾಚನ: ಎಫೆಸದವರಿಗೆ 1.1, 3-10.
ಕೀರ್ತನೆ 98:1-6 ಶ್ಲೋಕ.2
ಪ್ರಕಟಿಸಿಹನು ಪ್ರಭು ತನ್ನ ಮುಕ್ತಿವಿಧಾನವನು
ಶುಭಸಂದೇಶ: ಲೂಕ 11.47-54
==================
ಮೊದಲನೇ ವಾಚನ
===============
ಎಫೆಸದವರಿಗೆ 1.1-10.
1 : ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಎಫೆಸದ ದೇವಜನರಿಗೆ - ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾಗಿ ನೇಮಕಗೊಂಡ ಪೌಲನು ಬರೆಯುವ ಪತ್ರ.
2 : ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ!
3 : ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ.
4 : ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು.
5 : ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು.
6 : ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿಸಲ್ಲಿಸೋಣ.
7 : ಯೇಸುಕ್ರಿಸ್ತರು ಸುರಿಸಿದ ರಕ್ತಧಾರೆಯ ಮೂಲಕ ನಮಗೆ ಪಾಪಕ್ಷಮೆ ದೊರಕಿತು; ವಿಮೋಚನೆಯೂ ಲಭಿಸಿತು.
8 : ಇದು ದೇವರ ಅನುಗ್ರಹದ ಶ್ರೀಮಂತಿಕೆಯೇ ಸರಿ. ಇದನ್ನು ನಮ್ಮ ಮೇಲೆ ಅವರು ಯಥೇಚ್ಛವಾಗಿ ಸುರಿಸಿದ್ದಾರೆ.
9 : ದೇವರು ಸಮಗ್ರ ಜ್ಞಾನ-ವಿವೇಕಗಳಿಂದ ತಮ್ಮ ರಹಸ್ಯ ಯೋಜನೆಯನ್ನು ನಮಗೆ ತಿಳಿಯಪಡಿಸಿದ್ದಾರೆ. ಮೊದಲೇ ನಿರ್ಧರಿಸಿದ್ದಂತೆ ಅದನ್ನು ಯೇಸುಕ್ರಿಸ್ತರ ಮೂಲಕ ಪರಿಪೂರ್ಣಗೊಳಿಸಬೇಕೆಂಬುದು ಅವರ ಸಂಕಲ್ಪವಾಗಿತ್ತು.
10 : ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತ ಯೇಸುವಿನಲ್ಲಿ ಒಂದುಗೂಡಿಸುವುದೇ ಈ ಯೋಜನೆಯ ಇಂಗಿತ:
===================
ಕೀರ್ತನೆ
ಕೀರ್ತನೆ 98:1-6 ಶ್ಲೋಕ.2
ಪ್ರಕಟಿಸಿಹನು ಪ್ರಭು
ತನ್ನ ಮುಕ್ತಿವಿಧಾನವನು
1 : ಹಾಡಿರಿ ಪ್ರಭುವಿಗೆ
ಹೊಸಗೀತೆಯೊಂದನು /
ಎಸಗಿಹನಾತನು
ಪವಾಡಕಾರ್ಯಗಳನು /
ಗಳಿಸಿತಾತನ ಕೈ ಪೂತಭುಜ
ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ
ಮುಕ್ತಿವಿಧಾನವನು /
ರಾಷ್ಟ್ರಗಳಿಗೆ ತೋರಿಸಿಹನು
ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು
ಜಗದ ಎಲ್ಲೆಎಲ್ಲೆಗೆ /
ನಮ್ಮ ದೇವ ಸಾಧಿಸಿದ
ಜಯಗಳಿಕೆ //
ಸ್ಮರಿಸಿಕೊಂಡನಾ
ಪ್ರಭು ತನ್ನ ಪ್ರೀತಿಯನು /
ಇಸ್ರಯೇಲ್ ಕುಲದ
ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ,
ಮಾಡಿರಿ ಜಯಕಾರ ಪ್ರಭುವಿಗೆ /
ಮುದದಿ ಹಾಡಿರಿ,
ಮಾಡಿರಿ ಸುಮಧುರ ಭಜನೆ //
5 : ಪ್ರಭುವನು ಸ್ತುತಿಸಿರಿ
ಕಿನ್ನರಿಯೊಂದಿಗೆ /
ಭಜಿಸಿರಿ ಆತನನು
ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು,
ತುತೂರಿಯನು /
ಉದ್ಘೋಷಿಸಿರಿ
ಪ್ರಭು ರಾಜನನು //
===================
ಶುಭಸಂದೇಶ
==========
ಲೂಕ 11.47-54
47 : ಯೇಸು ಧರ್ಮಸ್ತ್ರಜ್ಞರನ್ನುದ್ದೇಶಿಸಿ ಹೀಗೆಂದರು : 'ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ.
48 : ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು.
49 : ಈ ಕಾರಣದಿಂದಲೇ ‘ದೇವರ ಜ್ಞಾನವು’ ಹೇಳಿರುವುದೇನೆಂದರೆ - ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆ ಮಾಡುವರು; ಕೆಲವರನ್ನು ಚಿತ್ರಹಿಂಸೆಪಡಿಸುವರು.
50 : ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ!
51 : ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ!
52 : ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,” ಎಂದರು.
53 : ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ,
54 : ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚು ಹಾಕುತ್ತಿದ್ದರು. ರಟ್ಟಾಗದ ಗುಟ್ಟಿಲ್ಲ (ಮತ್ತಾ. 10.26-27)
===================
ಚಿಂತನೆ
ಯೇಸು ಧರ್ಮಶಾಸ್ತ್ರಿಗಳ ಕಪಟತನವನ್ನು ಖಂಡಿಸುತ್ತಾರೆ. ಧರ್ಮಶಾಸ್ತ್ರಿಗಳು ಪ್ರವಾದಿಗಳನ್ನು ಗೌರವಿಸುವಂತೆ, ಅಭಿಮಾನವಿರುವಂತೆ ನಟಿಸುತ್ತಿದ್ದರು. ಧರ್ಮಶಾಸ್ತ್ರಿಗಳಿಗೆ ನಿಜವಾದ ಗೌರವ, ಅಭಿಮಾನ ಇದ್ದಿದ್ದರೆ ಪ್ರವಾದಿಗಳ ಪ್ರವಾದನೆಯಲ್ಲಿ ನಂಬಿಕೆಯಿಡುತ್ತಿದ್ದರು, ಯೇಸುವನ್ನು ಒಪ್ಪಿಕೊಳ್ಳುತ್ತಿದ್ದರು. ಹಳೆಯ ಒಡಂಬಡಿಕೆಯಲ್ಲಿ ಪ್ರವಾದಿಗಳು ದೇವರ ಸಂದೇಶವನ್ನು ರವಾನಿಸುತ್ತಿದ್ದರು. ಆದರೆ ಈ ಪ್ರವಾದಿಗಳ ಕಠಿಣ, ನಿಷ್ಟುರ ಮಾತುಗಳನ್ನು ಕೇಳಲಾರದೇ ಅವರನ್ನು ಹಿಂಸಿಸುತ್ತಿದ್ದರು ಅಥವಾ ಕೊಲ್ಲಿಸುತ್ತಿದ್ದರು. ಸಾವನ್ನಪ್ಪಿದ ಪ್ರವಾದಿಗಳ ಮೇಲೆ ಗೋರಿಗಳನ್ನು ಕಟ್ಟಿಸಿ ತಾವು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತಿದ್ದರು. ಅವರ ಪೂರ್ವಿಕರಂತೆ ಧರ್ಮಶಾಸ್ತ್ರಿಗಳು ಕೂಡ ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟುತ್ತಾರೆಯೇ ಹೊರತು ಅವರ ಮಾತುಗಳನ್ನು ಆಲಿಸಿ ಅದರಂತೆ ನಡೆಯರು ಎಂದು ಯೇಸು ಖಂಡಿಸುತ್ತಿದ್ದಾರೆ.
===================
No comments:
Post a Comment