Sunday, 22 November 2020

ಸೆಪ್ಟೆಂಬರ್ 19, 2020 ಶನಿವಾರ

 ಸೆಪ್ಟೆಂಬರ್ 19, 2020 ಶನಿವಾರ                        [ಹಸಿರು]
ಸಂತ ಜನುವಾರಿಯುಸ್ ಧರ್ಮಾಧ್ಯಕ್ಷ ಮತ್ತು ರಕ್ತ ಸಾಕ್ಷಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ 15.35-37, 42-49.
ಕೀರ್ತನೆ 56:9-13. ಶ್ಲೋಕ.12
ನಿನ್ನ ಮುಂದೆ ಜೀವನಜ್ಯೋತಿಯಲಿ 
ನಾ ನಡೆಯ ಮಾಡಿರುವೆ
ಶುಭಸಂದೇಶ: ಲೂಕ 8.4-15
=================
ಮೊದಲ ವಾಚನ: 
1 ಕೊರಿಂಥಿಯರಿಗೆ 15.35-37, 42-49
35 : ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.
36 : ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.
37 : ನೀನು ಬಿತ್ತುವುದು ಗೋದಿಯನ್ನು ಅಥವಾ ಇನ್ನಾವುದೋ ಕಾಳನ್ನು; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ.
2 : ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನ ಹೊಂದುವಂಥದ್ದು, ಬಲಿಷ್ಠವಾದುದು.
43 : ಬಿತ್ತದ್ದು ಕುರೂಪಿಯಾದುದು; ಪುನರುತ್ಥಾನ ಹೊಂದುವುದು ಕೋಮಲವಾದುದು.
44 : ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದೂ ಸತ್ಯ.
45 : ಪವಿತ್ರ ಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ.
46 : ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು.
47 : ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು.
48 : ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ.
49 : ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ.
===================
ಕೀರ್ತನೆ 
ಕೀರ್ತನೆ 56:9-13. ಶ್ಲೋಕ.12
ನಿನ್ನ ಮುಂದೆ ಜೀವನಜ್ಯೋತಿಯಲಿ ನಾ ನಡೆಯ ಮಾಡಿರುವೆ
9 : ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ ಹಿಂದಕೆ /
 ದೇವನಿರುವುದು ನನ್ನ ಕಡೆ, ಇದು ಗೊತ್ತಿದೆ ನನಗೆ //
10 : ನಾ ಹೆಮ್ಮೆಪಡುವುದು ದೇವನಲಿ, ಆತನ ವಾಗ್ದಾನದಲಿ / 
ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ ವಾಗ್ದಾನದಲಿ //
11 : ದೇವರಲ್ಲೇ ನಿರ್ಭೀತ ನಂಬಿಕೆ ನನಗೆ / 
ನರಮಾನವರು ಏನು ಮಾಡಿಯಾರೆನಗೆ //
12 : ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ / 
ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ /
 ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ //
13 : ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ / 
ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ //
===================
ಶುಭಸಂದೇಶ
ಲೂಕ 8.4-15
4 : ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು. ಜನ ಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು:
5 : ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು.
6 : ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿ ಹೋದವು.
7 : ಇನ್ನೂ ಕೆಲವು ಮುಳ್ಳುಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು.
9 : ಶಿಷ್ಯರು, ‘ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ, ಯೇಸು ಇಂತೆಂದರು:
10 : “ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು.”
11 : “ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.
12 : ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ.
13 : ಕಲ್ಲು ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪ ಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ.
14 : ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲ ಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿ ಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ.
15 : ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.
===================
ಚಿಂತನೆ
ದೇವರ ವಾಕ್ಯ ಪ್ರಭುಯೇಸುವೇ ಆಗಿದ್ದಾರೆ. ಅವರನ್ನು ಕೇಳುವುದೇ ಒಂದು ಭಾಗ್ಯ, ಯೇಸುಪ್ರಭು ಬಿತ್ತುವವನ ಸಾಮತಿಯನ್ನು ಇಂದಿನ ಶುಭಸಂದೇಶದಲ್ಲಿಬೋಧಿಸುತ್ತಾರೆ. ಈ ಸಾಮತಿಯಲ್ಲಿ ನಾಲ್ಕು ಬಗೆಯ ಕೇಳುಗರನ್ನು ಕಾಣುತ್ತೇವೆ.
1. ಪೂರ್ವಾಗ್ರಹ ಪೀಡಿತ ಕೇಳುಗರು: ಇಂತವರ ಮನಸ್ಸು ಮುಚ್ಚಿದೆ. ಇವರಿಗೆ ಬೋಧಿಸುವುದು ಕಷ್ಟ.
2. ಆಳವಿಲ್ಲದ ಕೇಳುಗರು: ಕೇಳಿದ ವಿಷಯಗಳ ಬಗ್ಗೆ ವಿಮರ್ಶಿಸಿ, ಧ್ಯಾನಿಸಲು ಆಸಕ್ತರಾಗಿರುತ್ತಾರೆ. ಮತ್ತು ಇವರಲ್ಲಿ ಆಧ್ಯಾತ್ಮಿಕ ಆಳದ ಅಭಾವ ಇರುತ್ತದೆ.
3. ಮೂರನೇ ವಿಧವಾದ ವ್ಯಕ್ತಿಗಳು ಕೇಳುತ್ತಾರೆ. ಇವರಲ್ಲೊ ನೈಜ ಆಧ್ಯಾತ್ಮಿಕತೆ ಇರುವುದಿಲ್ಲ. ಇವರಿಗೆ ಪ್ರಾರ್ಥನೆ ಮಾಡಲು, ದೇವರ ವಾಕ್ಯವನ್ನು ಓದಿ ಪಾಲಿಸಲು ಸಮಯವಿಲ್ಲ.
4. 4ನೇ ವಿಧವಾದ ವ್ಯಕ್ತಿಗಳು: ಮುಕ್ತ ಮನಸ್ಸಿನ ವ್ಯಕ್ತಿಗಳಾಗಿದ್ದಾರೆ. ಉತ್ಸುಕತೆಯಿಂದ ಕೇಳುತ್ತಾರೆ. ಪಾಲಿಸುತ್ತಾರೆ. 30%, 60%, 100% ಫಲವನ್ನು ನೀಡುತ್ತಾರೆ.
===================

No comments:

Post a Comment