Thursday, 26 November 2020

ಅಕ್ಟೋಬರ್ 19, 2020 ಸೋಮವಾರ

ಅಕ್ಟೋಬರ್ 19, 2020 ಸೋಮವಾರ                        [ಹಸಿರು]

ಶಿಸಂತ ಜಾನ್ ದಿ ಬ್ರೆಬಫ್ ಮತ್ತು ಸಂತ ಐಸಕ್ ಜೋಗ್ಸ್ 

ಯಾಜಕರು ಮತ್ತು ಸಂಗಡಿಗರು, ರಕ್ತಸಾಕ್ಷಿಗಳು (ಐಚ್ಛಿಕ ಸ್ಮರಣೆ)

ಶಿಲುಬೆಯ ಸಂತ ಪೌಲ, ಯಾಜಕ

ಮೊದಲ ವಾಚನ: ಎಫೆಸದವರಿಗೆ 2.1-10

ಕೀರ್ತನೆ 100:1-4. ಶ್ಲೋಕ.3

ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು

ಶುಭಸಂದೇಶ: ಲೂಕ 12.13-21

==================

ಮೊದಲನೇ ವಾಚನ

ಎಫೆಸದವರಿಗೆ 2.1-10

1 : ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ.

2 : ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದ್ದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ.

3 : ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು.

4 : ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ,

5 : ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು (ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರ ಹೊಂದಿದ್ದೀರಿ).

6 : ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು.

7 : ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು.

8 : ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ.

9 : ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ.

10 : ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.

===================

ಕೀರ್ತನೆ 

ಕೀರ್ತನೆ 100:1-4. ಶ್ಲೋಕ.3

ಪ್ರಭುವಿನ ಜನ, ಆತನೇ 

ಮೇಯಿಸುವ ಕುರಿಗಳು ನಾವು


1 : ಭೂನಿವಾಸಿಗಳೇ, 

ಜಯಘೋಷಮಾಡಿ ಪ್ರಭುವಿಗೆ /


2 : ಅತಿ ಸಂತೋಷದಿಂದ 

ಸೇವೆ ಮಾಡಿ ಆತನಿಗೆ / 

ಹಾಡುತ, ಪಾಡುತ, 

ಬನ್ನಿ ಆತನ ಸನ್ನಿಧಿಗೆ //


3 : ಪ್ರಭುವೇ ದೇವರೆಂಬುದನು 

ಮರೆತುಬಿಡಬೇಡಿ ನೀವು / 

ನಮ್ಮ ಸೃಷ್ಟಿಕರ್ತ ಆತನು, 

ಆತನವರು ನಾವು / 

ಆತನ ಜನ, ಆತನೆ 

ಮೇಯಿಸುವ ಕುರಿಗಳು, ನಾವು //


4 : ಆತನ ಗೃಹದ್ವಾರವನು 

ಪ್ರವೇಶಿಸಿ ಧನ್ಯವಾದದೊಂದಿಗೆ /

ಆತನ ಆವರಣದಲಿ ನಿಲ್ಲಿರಿ 

ಸ್ತುತಿಸ್ತೋತ್ರಗಳೊಂದಿಗೆ / 

ಆತನ ನಾಮವನು ಕೊಂಡಾಡಿ 

ಉಪಕಾರಸ್ಮರಣೆಯೊಂದಿಗೆ //


5 : ಹೌದು, ಪ್ರಭುವೆನಿತೋ 

ಒಳ್ಳೆಯವನು / 

ಇರುವುದಾತನ ಪ್ರೀತಿ 

ಯುಗಯುಗಕು / 

ಆತನ ಸತ್ಯತೆ 

ತಲತಲಾಂತರಕು //

==========

ಶುಭಸಂದೇಶ

ಲೂಕ 12.13-21

13 : ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು.

14 : ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು.

15 : ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು.

16 : ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು.

17 : ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ,

18 : ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.

19 : ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ”, ಎಂದುಕೊಂಡ.

20 : ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.

21 : “ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು. 

===================

ಚಿಂತನೆ

ಯಾವ ಆಸ್ತಿ ಶಾಶ್ವತವಾದದ್ದು, ಯಾವುದು ನಶ್ವರ? ಭೂಮಿಯ ಮೇಲೆ ಸಂಪಾದಿಸಿದ ಆಸ್ತಿಯೇ ಅಥವಾ ಸ್ವರ್ಗದಲ್ಲೇ ? ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಆದರೂ, ಅಳಿದು ಹೋಗುವ, ನಶಿಸಿಹೋಗುವ ಆಸ್ತಿಗಾಗಿಯೇ ಎಲ್ಲರೂ ಹೋರಾಡುತ್ತಿರುವುದು, ಅನೇಕ ಬಾರಿ ಈ ಹೋರಾಟದಲ್ಲಿ ವಂಚನೆ, ಮೋಸ, ಅನ್ಯಾಯ ಇರಬಹುದು. ಈ ಮೋಸ, ವಂಚನೆ ಸ್ವರ್ಗದಲ್ಲಿ ಗೆಲ್ಲಲಾರದು ಎಂಬುದನ್ನು ಅರಿಯಲು ನಾವು ಮರೆಯುತ್ತೇವೆ. ದೇವರು ಕೊಟ್ಟಿದ್ದು ಬಚ್ಚಿಡುವುದಕ್ಕಲ್ಲ, ಪರರ ಸಹಾಯಕ್ಕೆ ಧನಿಕ ಸ್ವಾರ್ಥಿಯಾಗಿದ್ದ, ಲೌಕಿಕತೆಯಲ್ಲಿ ಮುಳುಗಿದ್ದ. `ತಿನ್ನು, ಕುಡಿ, ಸುಖಪಡು’ ಎಂದುಕೊಂಡ, ಸುಖಪಡಲು ಸಂಪತ್ತು, ಆಸ್ತಿಯಿದೆ ಆದರೇ ಅವನೇ ಇಲ್ಲವಾದ.

===================

No comments:

Post a Comment