ಅಕ್ಟೋಬರ್ 21, 2020 ಬುಧವಾರ [ಹಸಿರು]
ಮೊದಲ ವಾಚನ: ಎಫೆಸದವರಿಗೆ 3.2-12
ಕೀರ್ತನೆ ಯೆಶಾಯ 12:2-6. ಶ್ಲೋಕ.3
ಉದ್ಧರಿಸುವ ಒರತೆಗಳಿಂದ, ಸೇದುವಿರಿ ನೀರನ್ನು ಹರುಷದಿಂದ
ಶುಭಸಂದೇಶ: ಲೂಕ 12.39-48
==================
ಮೊದಲನೇ ವಾಚನ
===============
ಎಫೆಸದವರಿಗೆ 3.2-12
2 : ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ.
3 : ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
4 : ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರ ಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೇ ತಿಳಿಯುತ್ತದೆ.
5 : ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ.
6 : ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು; ಇದೇ ಆ ರಹಸ್ಯ.
7 : ಈ ಶುಭಸಂದೇಶಕ್ಕೆ ದಾಸನನ್ನಾಗಿ ದೇವರು ನನ್ನನ್ನು ನೇಮಿಸಿದ್ದಾರೆ. ತಮ್ಮ ಪ್ರಭಾವಮಯ ಶಕ್ತಿಯಿಂದ ಈ ವಿಶೇಷ ವರವನ್ನು ಉಚಿತವಾಗಿ ನನಗೆ ದಯಪಾಲಿಸಿದ್ದಾರೆ.
8 : ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು.
9 : ಸಮಸ್ತವನ್ನು ಸೃಷ್ಟಿಸಿದ ದೇವರ ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು.
10 : ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು.
11 : ತಮ್ಮ ಪೂರ್ವ ಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು.
12 : ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ, ದೇವರ ಸಾನ್ನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ.
===================
ಕೀರ್ತನೆ
ಕೀರ್ತನೆ ಯೆಶಾಯ 12:2-6. ಶ್ಲೋಕ.3
ಉದ್ಧರಿಸುವ ಒರತೆಗಳಿಂದ,
ಸೇದುವಿರಿ ನೀರನ್ನು ಹರುಷದಿಂದ
2 : ದೇವರೇ ಉದ್ಧಾರಕನೆನಗೆ
ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ.
ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ
ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”
3 : ಉದ್ಧರಿಸುವಾ ಒರತೆಗಳಿಂದ
ಸೇದುವಿರಿ ನೀರನು ಹರುಷದಿಂದ.
4 : ಹೇಳುವಿರಿ ನೀವು ಆ ದಿನದಂದು
ಈ ಪರಿ- “ಸಲ್ಲಿಸಿರಿ ಸರ್ವೇಶ್ವರನಿಗೆ
ಕೃತಜ್ಞತೆಯನು ಸ್ಮರಿಸಿರಿ
ಆತನ ಶ್ರೀನಾಮವನು
ಸಾರಿರಿ ಜನತೆಗೆ
ಆತನ ಕಾರ್ಯಗಳನು ಘೋಷಿಸಿರಿ
ಆತನ ನಾಮ ಘನತೆಯನು.
5 : ಹಾಡಿರಿ ಸರ್ವೇಶ್ವರನಿಗೆ
ಸ್ತುತಿಯನು ಎಸಗಿಹನಾತ
ಮಹಿಮಾ ಕಾರ್ಯಗಳನು ತಿಳಿಸಿರಿ
ಜಗದಾದ್ಯಂತಕೆ ಈ ವಿಷಯವನು.
6 : ಸಿಯೋನಿನ ನಿವಾಸಿಗಳೇ,
ಹಾಡಿರಿ, ಮಾಡಿರಿ ಭಜನ
ನಿಮ್ಮ ಮಧ್ಯೆಯಿರುವ ಆ ಘನವಂತನ
ಇಸ್ರಯೇಲಿನಾ ಸ್ವಾಮಿ ಪರಮಪಾವನ.”
===================
ಶುಭಸಂದೇಶ
ಲೂಕ 12.39-48
39 : ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ.
40 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಪ್ರಾಮಾಣಿಕನಾದ ಮೇಸ್ತ್ರಿ (ಮತ್ತಾ. 24.45-51)
41 : ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು.
42 : ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ.
43 : ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.
44 : ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
45 : “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ
46 : ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು.
47 : “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ.
48 : ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.
===================
ಚಿಂತನೆ
ಸ್ವರ್ಗ ಸಾಮ್ರಾಜ್ಯದ ಆಗಮನದ ಬಗ್ಗೆ ಯೇಸು ಮಾತನಾಡುವಾಗಲೆಲ್ಲಾ ಅದಕ್ಕೆ ಯಾವ ರೀತಿಯ ಬದ್ಧತೆ ಬೇಕು ಎಂದು ಹೇಳುತ್ತಲೇ, `ನಿರಂತರವಾಗಿ ಎಚ್ಚರವಾಗಿರಿ’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಈ ಸ್ವರ್ಗ ಸಾಮ್ರಾಜ್ಯಕ್ಕೆ ಯೋಗ್ಯರಾಗಬೇಕಾದರೆ ಲೌಕಿಕತೆಯ ನಶ್ವರತೆ ಅರಿಯಬೇಕು. ಲೌಕಿಕ ಜಗತ್ತಿನೊಂದಿಗೆ ನಂಟನ್ನು ಕಳೆದುಕೊಳ್ಳುವುದು ಅಷ್ಟೇನೂ ಮುಖ್ಯವಲ್ಲ, ದೇವರ ಸಾಮ್ರಾಜ್ಯಕ್ಕೆ ಹತ್ತಿರವಾಗುವುದು ಮುಖ್ಯ. ಜನನ ಮತ್ತು ಮರಣದ ನಡುವಿರುವ ಈ ಜೀನವದಲ್ಲಿ ನಿರಂತರ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಬದುಕಬೇಕು. ದೇವರ ಕರೆ ಯಾವಾಗ ಬರಬಹುದೋ ತಿಳಿದಿಲ್ಲ. ಆದ್ದರಿಂದ ನಿರಂತರ ಎಚ್ಚರಿಕೆ ಅಗತ್ಯ.
===================
No comments:
Post a Comment