Thursday, 26 November 2020

ಅಕ್ಟೋಬರ್ 26, 2020 ಸೋಮವಾರ

 ಅಕ್ಟೋಬರ್ 26, 2020 ಸೋಮವಾರ                        [ಹಸಿರು]

ಮೊದಲ ವಾಚನ: ಎಫೆಸದವರಿಗೆ 4.32 - 5.8

ಕೀರ್ತನೆ 1:1-4, 6. ಶ್ಲೋಕ.ಎಫೆಸದವರಿಗೆ 5:1

ಪ್ರಭುವಿನಲ್ಲೇ ಭರವಸೆ ಇಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 13.10-17

==================

ಮೊದಲನೇ ವಾಚನ

ಎಫೆಸದವರಿಗೆ 4.32 - 5.8

32 : ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ.

1 : ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ.

2 : ಕ್ರಿಸ್ತಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ, ನೀವೂ ಪ್ರೀತಿಯಿಂದ ಬಾಳಿರಿ.

3 : ನೀವು ದೇವಜನರಾಗಿರುವುದರಿಂದ ನಿಮ್ಮಲ್ಲಿ ಲೈಂಗಿಕ ಪಾಪವಾಗಲಿ, ಅಶುದ್ಧ ಕೃತ್ಯಗಳಾಗಲಿ ಮತ್ತು ದುರಾಶೆಯಾಗಲಿ ಇರಬಾರದು. ಇಂಥ ಸುದ್ದಿಗೂ ನೀವು ಅವಕಾಶ ಕೊಡಬಾರದು.

4 : ಹೊಲಸು ಮಾತುಗಳು, ಬರಡು ನುಡಿಗಳು, ಕುಚೋದ್ಯ ಪದಗಳು ಯಾವುವೂ ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ಞತಾ ಸ್ತುತಿಮಾಡಿರಿ.

5 : ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ (ದುರಾಶೆ ವಿಗ್ರಹಾರಾಧನೆಯ ಒಂದು ರೂಪ) ಕ್ರಿಸ್ತ ಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ.

6 : ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ.

7 : ಅಂಥವರ ಸಹವಾಸವೇ ನಿಮಗೆ ಬೇಡ.

8 : ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ.

===================

ಕೀರ್ತನೆ 

ಕೀರ್ತನೆ 1:1-4, 6. ಶ್ಲೋಕ.ಎಫೆಸದವರಿಗೆ 5:1


ಪ್ರಭುವಿನಲ್ಲೇ ಭರವಸೆ ಇಟ್ಟು 

ನಡೆವಾತನು ಧನ್ಯನು


1 : ದುರ್ಜನರ 

ಆಲೋಚನೆಯಂತೆ ನಡೆಯದೆ / 

ಪಾಪಾತ್ಮರ ಪಥದಲಿ

 ಕಾಲೂರದೆ / 

ಧರ್ಮನಿಂದಕರ ಕೂಟದಲಿ 

ಕೂರದೆ //


2 : ಪ್ರಭುವಿನ ಧರ್ಮಶಾಸ್ತ್ರದಲಿ 

ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ 

ಹಗಲಿರುಳೆನ್ನದೆ ಅದನೆ ಧ್ಯಾನಿಸು 

ತಿರುವವನಾರೋ - ಅವನೇ ಧನ್ಯನು //


3 : ನದಿಯ ಬದಿಯಲೇ 

ಬೆಳೆದಿಹ ಮರದಂತೆ / 

ಸಕಾಲಕೆ ಫಲವೀವ 

ವೃಕ್ಷದಂತೆ / 

ಎಲೆಬಾಡದೆ ಪಸಿರಿರುವ 

ತರುವಂತೆ / 

ಸಿಗುವುದು ಅವನ ಕಾರ್ಯಗಳಿಗೆ 

ಸಫಲತೆ //


4 : ದುರುಳರಾದರೊ 

ತೂರಿ ಹೋಗುವರು / 

ಬಿರುಗಾಳಿಗೆ ತರಗೆಲೆಯಾಗುವರು //


5 : ಎಂದೇ ನಿಲ್ಲಲಾರರು 

ದುರುಳರು ನ್ಯಾಯಸ್ಥಾನದಲಿ / 

ಸದಸ್ಯರಾಗರು ಪಾಪಿಗಳು 

ಸಜ್ಜನರ ಸಂಘದಲಿ //


6 : ಸಜ್ಜನರ ಮಾರ್ಗಕ್ಕಿದೆ

 ಪ್ರಭುವಿನ ಪಾಲನ / 

ದುರ್ಜನರ ಮಾರ್ಗಕ್ಕಿದೆ 

ಸಂಪೂರ್ಣ ವಿನಾಶನ //

=================

ಶುಭಸಂದೇಶ

ಲೂಕ 13.10-17

10 : ಒಂದು ಸಬ್ಬತ್ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು.

11 : ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ.

12 : ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, ‘ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ,

13 : ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.

14 ಯೇಸು ಸಬ್ಬತ್ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, “ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್ದಿನದಲ್ಲಿ ಮಾತ್ರ ಕೂಡದು,” ಎಂದನು.

15 : ಪ್ರಭು ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ?

16 : ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿ ಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ?” ಎಂದರು.

17 : ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.

===================

ಚಿಂತನೆ

ಭಕ್ತರು ದೇವರನ್ನು ಅರಸಿಹೋಗುವುದು ಸಾಮಾನ್ಯ. ಯೇಸು ದೆವ್ವಪೀಡಿತ ಗೂನಿಯನ್ನು ಕಂಡು ಮರುಕಪಟ್ಟು ತಾನೇ ಅವಳನ್ನು ಕರೆದು ಗುಣಪಡಿಸುತ್ತಾರೆ. ಹದಿನೆಂಟು ವರ್ಷಗಳ ಯಾತನೆಗೆ ವಿರಾಮ ಹಾಕುತ್ತಾರೆ. ದೇವರು ಎಲ್ಲವನ್ನೂ ಬಲ್ಲವರು. ತೆರೆದ ಹೃದಯದಲ್ಲಿ ಒಳಗೆ ಹೋಗುವುದು ದೇವರ ನಿಯಮ. ಫರಿಸಾಯರ ಠೀಕೆಗಳಿಗೆ ಹೆದರದೆ ಜನರ ಸಂಕಷ್ಟಗಳಿಗೆ ಪ್ರಭು ಕ್ರಿಸ್ತರು ಸ್ಪಂದಿಸುತ್ತಾರೆ.

===================

No comments:

Post a Comment