ಅಕ್ಟೋಬರ್ 8, 2020 ಗುರುವಾರ [ಹಸಿರು]
ಮೊದಲ ವಾಚನ: ಗಲಾತ್ಯರಿಗೆ 3.1-5
ಕೀರ್ತನೆ ಲೂಕ 1:69-75 ಶ್ಲೋಕ.68
ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ
ಶುಭಸಂದೇಶ: ಲೂಕ 11.5-13
==================
ಮೊದಲನೇ ವಾಚನ
ಗಲಾತ್ಯರಿಗೆ 3.1-5
1 : ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೆ?
2 : ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ: ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ?
3 : ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹ ಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ?
4 : ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ?
5 : ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ. ಶುಭಸಂದೇಶವನ್ನು ಕೇಳಿ, ವಿಶ್ವಾಸ ಇಟ್ಟಿರುವುದರಿಂದ.
===================
ಶುಭಸಂದೇಶ
ಲೂಕ 11.5-13
5 : ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
6 : ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು,
7 : ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ?
8 : ಆದರೂ, ತನ್ನ ಗೆಳೆಯ ಇವನು ಎಂದು ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ.
9 : ಆದುದರಿಂದ ‘ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.
10 : ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’
11 : “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?
12 : ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?
13 : ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”
===================
ಚಿಂತನೆ
ಪೌಲನ ಕೋಪ ಹಣೆಮುಟ್ಟಿದೆ ಗಲಾತಿಯರನ್ನು ಮತಿಗೆಟ್ಟವರೆನ್ನುತ್ತಾರೆ, ಕಾರಣ ಪೌಲನು ಕಷ್ಟಪಟ್ಟು ಶುಭಸಂದೇಶವನ್ನು ಬೋಧಿಸಿದಾಗ ಕೇವಲ ಹೊರನೋಟಕ್ಕೆ ಅವರು ನಂಬಿ, ಪುನಃ ಮತಿಗೆಟ್ಟ ಮರುಳರಂತೆ ಶುಭಸಂದೇಶಕ್ಕೆ ಕಿವಿಗೊಡದೆ, ವಿಧೇಯರಾಗಿರದೆ ಅವರು ಪವಿತ್ರಾತ್ಮರ ಮೂಲಕ ಪಡೆದ ಕ್ರಿಸ್ತನ ಮೌಲ್ಯಗಳನ್ನು ಮರೆತು ಲೌಕಿಕ ದೈಹಿಕ ಸುಖಗಳಲ್ಲಿ ನಿರತರಾಗಿ ಮರಳಿ ಹಳೆಯ ಜೀವನಕ್ಕೆಮರಳಿದರು. ಇದನ್ನು ಕಂಡು ಸಿಟ್ಟಿಗೆದ್ದ ಪೌಲನು ಆ ಜನರಿಗೆ ಬಿಟ್ಟು ನಿರಂತರವಾಗಿ ತಮ್ಮ ಅಗತ್ಯಗಳಿಗಾಗಿ ನಾಚಿಕೆ ಬಿಟ್ಟು ಸದಾ ನಿರೀಕ್ಷಣೆಯೊಂದಿಗೆ ಪ್ರಾರ್ಥಿಸಿರೆನ್ನುತ್ತಾರೆ. ಇಂದಿನ ಶುಭಸಂದೇಶದಲ್ಲಿ ಆದರೆ ಪ್ರಾರ್ಥಿಸುವವನಲ್ಲಿ ಪ್ರಾ ಮಾಣಿಕತೆಯಿರಬೇಕು, ದಿಟ್ಟತನವಿರಬೇಕು. ನಿದಾನವಾದರೂ ನಿರಾಶನಾಗದೆ ನಿರಂತರವಾಗಿ ಬೇಡುವ ನಿಜ ಸ್ವರೂಪದ ಗುಣ ಬೇಕು. ಬೇಡುವಾಗ ಏನನ್ನು ಬೇಡುತ್ತಿದ್ದೇನೆಂದು ಅರಿತಿರಬೇಕು. ರೋಮ 8:26 ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂದು ತಿಳಿದವರ,ಪ್ರಾಮಾಣಿಕವಾಗಿ ಕೇಳುವ, ಹುಡುಕುವ, ತಟ್ಟುವ ಪ್ರತಿಯೊಬ್ಬನ ಪ್ರಾರ್ಥನೆಯನ್ನು ದೇವರು ಆಲಿಸುತ್ತಾರೆ. ಮತ್ತಾಯ 21:22
ವಿಶ್ವಾಸವಿಟ್ಟು ಏನನ್ನು ನೀವು ಬೇಡಿಕೊಳ್ಳುತಿರೋ ಅದನ್ನೆಲ್ಲಾ ಪಡೆಯುವಿರಿ.
==================="
No comments:
Post a Comment